ಸಿದ್ದರಾಮಯ್ಯಗೆ ತವರ ಮೇಲಿನ ರಾಜಕೀಯ ಹಿಡಿತ ಸಡಿಲವಾಗುತ್ತಿದೆಯಾ?
ಮೈಸೂರು, ಅಕ್ಟೋಬರ್.08: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೀಗ ಸಿದ್ದರಾಮಯ್ಯ ವರ್ಚಸ್ಸು ಕಡಿಮೆ ಆಗುತ್ತಿದೆಯಾ? ಮೈಸೂರು ಮೇಲಿನ ಅವರ ಹಿಡಿತ ಸಡಿಲವಾಗುತ್ತಿದೆಯಾ? ಎಂಬ ಪ್ರಶ್ನೆ ಕಾಡತೊಡಗಿದೆ.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ಪ್ರತಿಸ್ಪರ್ಧಿಯಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕಿಳಿದು ಭಾರೀ ಅಂತರದಲ್ಲಿ ಸೋಲನ್ನು ಕಂಡಿದ್ದು ಇತಿಹಾಸ. ಒಂದು ವೇಳೆ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವ ತೀರ್ಮಾನ ಕೈಗೊಳ್ಳದೆ ಹೋಗಿದ್ದಿದ್ದರೆ ಅವರ ರಾಜಕೀಯ ಭವಿಷ್ಯವೇ ಡೋಲಾಯಾನವಾಗಿರುತ್ತಿತ್ತು.
ಅದೃಷ್ಟವಶಾತ್ ಕೊನೆಗಳಿಗೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಅವರನ್ನು ಇನ್ನೂ ರಾಜಕೀಯದಲ್ಲಿ ಉಳಿಯುವಂತೆ ಮಾಡಿದೆ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಯಶಸ್ವಿ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರಿಗೆ ತವರು ಕ್ಷೇತ್ರದಲ್ಲಿಯೇ ಕಾಂಗ್ರೆಸ್ನ್ನು ಕಟ್ಟಿ ಬೆಳೆಸಲು ಸಾಧ್ಯವಾಗಲಿಲ್ಲ.
ಪರಿಣಾಮವಾಗಿ11 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರದಲ್ಲಷ್ಟೆ ಗೆಲುವು ಸಾಧಿಸಲು ಶಕ್ತವಾಯಿತು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ನ ಪ್ರಭಾವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ಬಾರಿ ಅವರು ಉಪಚುನಾವಣೆಯಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ಗೆ ಗೆಲುವು ತಂದುಕೊಟ್ಟಿದ್ದರು.
ಆಗ ಹೈಕಮಾಂಡ್ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದರು. ರಾಜ್ಯದಲ್ಲಿ ಮುಂದೆ ಚುನಾವಣೆ ನಡೆದಾಗ ಸಾರಥ್ಯವನ್ನು ಸಿದ್ದರಾಮಯ್ಯ ಅವರೇ ವಹಿಸಿದ್ದರು. ಮುಂದೆ ಓದಿ..

ಮಂಕಾದ ಕಾಂಗ್ರೆಸ್ ಮುಖಂಡರು
ರಾತ್ರಿ ಹಗಲು ಎನ್ನದೆ ರಾಜ್ಯ ಸುತ್ತಿದ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರದತ್ತ ನಿರ್ಲಕ್ಷ್ಯ ವಹಿಸಿದರು. ಅದರ ಪರಿಣಾಮ ಮುಗ್ಗರಿಸಿದ ಕಾಂಗ್ರೆಸ್, ಮೈಸೂರಿನ ಹನ್ನೊಂದು ಕ್ಷೇತ್ರಗಳ ಪೈಕಿ ಮೂರಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಜೊತೆಗೆ ಸಿದ್ದರಾಮಯ್ಯ ಅವರಿಗೆ ಮತದಾರರು ಬಿಗ್ ಶಾಕ್ ನೀಡಿದರು.
ಸದ್ಯ ಈಗ ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡರು ಮಂಕಾಗಿದ್ದಾರೆ. ಮೂವರು ಕಾಂಗ್ರೆಸ್ ಶಾಸಕರಿದ್ದರೂ ಅವರದ್ದೇನು ನಡೆಯುತ್ತಿಲ್ಲ. ಜತೆಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಏನಿದ್ದರೂ ಜೆಡಿಎಸ್ ಹವಾ ಶುರುವಾಗಿದೆ. ಸಿದ್ದರಾಮಯ್ಯ ಮೈಸೂರಿಗೆ ಬಂದು ಹೋದರೂ ಯಾರಿಗೂ ಗೊತ್ತೇ ಆಗುತ್ತಿಲ್ಲ. ಒಂದಷ್ಟು ಹಿಂಬಾಲಕರು ಬಿಟ್ಟರೆ ಇನ್ಯಾರೂ ಅವರ ಬಳಿ ಸುಳಿಯುತ್ತಿಲ್ಲ.

ರಾಜಕೀಯ ಸೇಡು
ಜಿ.ಟಿ.ದೇವೇಗೌಡರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಪ್ರಬಲ ವಿರೋಧಿ ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾರೆ. ಹೀಗಿರುವಾಗ ಮೈಸೂರಿನಲ್ಲಿ ಮತ್ತೆ ಕಾಂಗ್ರೆಸ್ನನ್ನು ಸಂಘಟಿಸಿ ಪ್ರಬಲ ಪಕ್ಷವನ್ನಾಗಿ ಮಾಡುವುದು ಅಷ್ಟು ಸುಲಭವಾಗಿ ಉಳಿದಿಲ್ಲ.
ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯವಾಗಿ ಸೇಡು ತೀರಿಸಿಕೊಳ್ಳಲು ಏನೆಲ್ಲ ಸಾಧ್ಯವೋ ಅದೆಲ್ಲವನ್ನು ಸದ್ದಿಲ್ಲದೆ ಮಾಡಲಾಗುತ್ತಿದೆ. ಇದು ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ.

ವರುಣಾದಲ್ಲಿ ಅಭಿವೃದ್ಧಿಯ ಜಪ
ಹಿಂದಿನ ಉಪಚುನಾವಣೆಯಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆಗೆ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿ ಭೂಮಿ ಪೂಜೆಯನ್ನು ಮಾಡಿದರಾದರೂ ಅದ್ಯಾವುದೂ ಈಡೇರಲಿಲ್ಲ. ಜತೆಗೆ ಎರಡು ಕ್ಷೇತ್ರದಲ್ಲೂ ಇದೀಗ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಸಿದ್ದರಾಮಯ್ಯ ಅವರಿಗೂ ವರುಣಾ ಕ್ಷೇತ್ರವನ್ನು ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ತಪ್ಪು ಮಾಡಿದೆ ಎಂಬ ಅರಿವಾಗಿದೆ. ಕಾರಣ ತವರಿನ ರಾಜಕೀಯ ಹಿಡಿತವೇ ಅವರಿಗೆ ಬಿಟ್ಟು ಹೋದಂತಾಗಿದೆ. ಹೀಗಾಗಿ ಮತ್ತೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಮೂಲಕ ವರುಣಾ ಕ್ಷೇತ್ರದ ಅಭಿವೃದ್ಧಿಯ ಜಪ ಮಾಡುತ್ತಿದ್ದಾರೆ.

ರಾಜಕೀಯ ಹಿಡಿತವಿಲ್ಲ
ಇನ್ನು ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಏನು ಮಾಡಲು ಸಾಧ್ಯವಿಲ್ಲದಂತಾಗಿದ್ದು, ಒಂದು ವೇಳೆ ಮೈಸೂರಿನತ್ತ ಹೆಚ್ಚಿನ ಮುತುವರ್ಜಿ ವಹಿಸಲು ಹೋದರೆ ಮತನೀಡಿ ಗೆಲ್ಲಿಸಿದ ಬಾದಾಮಿ ಮತದಾರರ ಕೆಂಗಣ್ಣಿಗೆ ಬಲಿಯಾಗಬೇಕಾಗುತ್ತದೆ.
ಒಟ್ಟಾರೆ ಸಿದ್ದರಾಮಯ್ಯ ಅವರಿಗೆ ತವರಿನ ರಾಜಕೀಯದ ಹಿಡಿತ ಸದ್ದಿಲ್ಲದೆ ಸಡಿಲವಾಗುತ್ತಿರುವಂತೆ ಗೋಚರಿಸುತ್ತಿರುವುದಂತು ಸತ್ಯ.












Click it and Unblock the Notifications