ಚಾಮುಂಡೇಶ್ವರಿ ಕ್ಷೇತ್ರದಲ್ಲಿ 5 ಬಾರಿ ಗೆದ್ದಿದ್ದ ಸಿದ್ದರಾಮಯ್ಯ: ಈ ಬಾರಿಯ ಸ್ಪರ್ಧೆ ಇನ್ನೂ ನಿಗೂಢ..!
ಮೈಸೂರು, ಡಿಸೆಂಬರ್ 12: ಮುಂಬರುವ ವಿಧಾನಸಭಾ ಚುನಾವಣೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದೆ. ಅದು ರಾಜಕೀಯವಾಗಿಯೂ, ವೈಯುಕ್ತಿಕವಾಗಿಯೂ ಬಹುಮುಖ್ಯವಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈಗಾಗಲೇ ಅವರೇ ಘೋಷಣೆ ಮಾಡಿಕೊಂಡಂತೆ 2023ರ ಚುನಾವಣೆ ಅವರ ಪಾಲಿಗೆ ರಾಜಕೀಯ ಬದುಕಿನ ಕೊನೆಯ ಚುನಾವಣೆಯಾಗಿದೆ. ಹೀಗಾಗಿ ಅವರತ್ತ ಎಲ್ಲರ ದೃಷ್ಠಿ ನೆಟ್ಟಿದೆ. ಹೀಗಾಗಿ ಅವರು ಗೆಲ್ಲಬಹುದಾದ ಕ್ಷೇತ್ರದಿಂದ ಸ್ಪರ್ಧಿಸುವುದು ಅನಿವಾರ್ಯವಾಗಿದೆ.
ತಮ್ಮ ಕೊನೆಯ ಚುನಾವಣೆ ಎನ್ನುತ್ತಿರುವ ಸಿದ್ದರಾಮಯ್ಯ ಅವರು ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದನ್ನು ಗುಟ್ಟಾಗಿ ಇಟ್ಟಿದ್ದಾರೆ. ಆದರೆ ಅವರು ಎಲ್ಲಿ ಸ್ಪರ್ಧಿಸಿದರೂ ಅಲ್ಲಿ ಅವರನ್ನು ಸೋಲಿಸಲೇ ಬೇಕೆಂಬ ಪಣವನ್ನು ವಿರೋಧಿಗಳು ತೊಟ್ಟಿದ್ದಾರೆ. ತಮ್ಮ ಸುತ್ತಲೂ ದೊಡ್ಡಮಟ್ಟದಲ್ಲಿ ವಿರೋಧಿಗಳು ಇರುವುದರಿಂದಾಗಿ ಸ್ಪರ್ಧೆಯ ವಿಚಾರವನ್ನು ಸಿದ್ದರಾಮಯ್ಯ ರಹಸ್ಯವಾಗಿಯೇ ಇಟ್ಟಿದ್ದಾರೆ.
ಸಾಮಾನ್ಯವಾಗಿ ಘಟಾನುಘಟಿ ಹಿರಿಯ ನಾಯಕರು ತವರು ಕ್ಷೇತ್ರದಲ್ಲಿ ಗಟ್ಟಿಯಾಗಿದ್ದು, ಅಲ್ಲಿಂದಲೇ ಸ್ಪರ್ಧಿಸಿ ಗೆಲ್ಲುತ್ತಾ ಬರುತ್ತಿದ್ದಾರೆ. ಆದರೆ ಇವತ್ತಿಗೂ ವರುಣಾ ಕ್ಷೇತ್ರ ಸಿದ್ದರಾಮಯ್ಯ ಅವರ ಹಿಡಿತದಲ್ಲಿದೆ. ಹೀಗಾಗಿ ಅವರು ಸುಲಭವಾಗಿ ಅಲ್ಲಿ ಗೆಲ್ಲುತ್ತಾರೆ. ಆದರೆ ಆ ಕ್ಷೇತ್ರವನ್ನು ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿಯೇ ಸದ್ಯ ಸಿದ್ದರಾಮಯ್ಯ ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ಈಗಾಗಲೇ ಯತೀಂದ್ರ ಸೇರಿದಂತೆ ಹಲವು ಮುಖಂಡರು ವರುಣಾದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ನಡೆ ಕುತೂಹಲಕಾರಿಯಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಖಾತೆ ತೆರೆಯದ ಬಿಜೆಪಿ
ಸಿದ್ದರಾಮಯ್ಯ ಅವರ ಪಾಲಿಗೆ ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶವನ್ನು ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರ ರಾಜಕೀಯವಾಗಿ ಪುನರ್ಜನ್ಮ ನೀಡಿದ ಕ್ಷೇತ್ರವಾಗಿದೆ. ಅಷ್ಟೇ ಅಲ್ಲದೆ ಅವರು ಹಲವು ಬಾರಿ ಗೆಲ್ಲಲು ಇದೇ ಕ್ಷೇತ್ರ ಕಾರಣವಾಗಿದೆ. ಕ್ಷೇತ್ರದ ಚುನಾವಣೆ ಬಗ್ಗೆ ಹೇಳಬೇಕೆಂದರೆ ಇಲ್ಲಿ ನಡೆದ 12 ಚುನಾವಣೆಗಳಲ್ಲಿ 6 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರೆ, ಜನತಾದಳದ ಅಭ್ಯರ್ಥಿಗಳು 2 ಬಾರಿ, ಜೆಡಿಎಸ್ ಅಭ್ಯರ್ಥಿಗಳು 3 ಬಾರಿ ಹಾಗೂ ಪಕ್ಷೇತರ ಅಭ್ಯರ್ಥಿ 1 ಒಂದು ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ ಬಿಜೆಪಿಗೆ ಮಾತ್ರ ಈ ಕ್ಷೇತ್ರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ.

1983 ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಸಿದ್ದರಾಮಯ್ಯ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಮತದಾರರಿದ್ದರೆ. ಅದರಲ್ಲಿ ಶೇ.60ರಷ್ಟು ಮತಗಳು ಒಕ್ಕಲಿಗರದ್ದೇ ಆಗಿವೆ. ಹೀಗಾಗಿ ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಸದ್ಯ ಜಿ.ಟಿ.ದೇವೇಗೌಡರು ಪ್ರಾಬಲ್ಯ ಸಾಧಿಸಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಇದುವರೆಗೆ ನಡೆದ ಚುನಾವಣೆಯಲ್ಲಿ 1967 ಮತ್ತು 1972ರಲ್ಲಿ ಕೆ.ಪುಟ್ಟಸ್ವಾಮಿ ಕಾಂಗ್ರೆಸ್ನಿಂದ ಗೆದ್ದು ಬಂದಿದ್ದರೆ 1978ರಲ್ಲಿ ಜಯದೇವರಾಜ ಅರಸು ಕಾಂಗ್ರೆಸ್ (ಐ) ನಿಂದ ಗೆಲುವು ಸಾಧಿಸಿದ್ದರು. ಇದಾದ ನಂತರ 1983ರಲ್ಲಿ ಸಿದ್ದರಾಮಯ್ಯ ಅವರು ಪಕ್ಷೇತರರಾಗಿ ಗೆದ್ದಿದ್ದರು. ಆ ನಂತರ 1985 ಸಿದ್ದರಾಮಯ್ಯ ಜನತಾದಳದಿಂದ ಸ್ಪರ್ಧಿಸಿ ಗೆದ್ದಿದ್ದರು. 1989 ಎಂ.ರಾಜಶೇಖರಮೂರ್ತಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದರೆ, ಮತ್ತೆ 1994 ಸಿದ್ದರಾಮಯ್ಯ ಜನತಾದಳದಿಂದ ಗೆಲುವು ಕಂಡಿದ್ದರು.

2018ರ ಚುನಾವಣೆಯಲ್ಲಿ ಸೋಲು ಕಂಡ ಸಿದ್ದರಾಮಯ್ಯ
1999 ಎ.ಎಸ್.ಗುರುಸ್ವಾಮಿ ಕಾಂಗ್ರೆಸ್ ನಿಂದ ಗೆದ್ದರೆ, 2004ರಲ್ಲಿ ಸಿದ್ದರಾಮಯ್ಯ ಜೆಡಿಎಸ್ ನಿಂದ ಗೆಲುವು ಸಾಧಿಸಿದ್ದಾರೆ. ಇದಾದ ಬಳಿಕ 2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ನಿಂದ ಗೆಲುವು ಕಂಡರೆ, 2008ರಲ್ಲಿ ಎಂ.ಸತ್ಯನಾರಾಯಣ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. 2013 ಮತ್ತು 2018ರಲ್ಲಿ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ನಿಂದ ಗೆಲುವು ಸಾಧಿಸುತ್ತಾ ಬರುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಇದುವರೆಗೆ 5 ಗೆಲುವನ್ನು ಕಂಡಿದ್ದರೆ ಮೂರು ಸೋಲು ಕಂಡಿದ್ದಾರೆ. 1983ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಖುಷಿಯಿದೆ. ಅಷ್ಟೇ ಅಲ್ಲದೆ 2006ರ ಉಪಚುನಾವಣೆಯಲ್ಲಿ ಗೆಲವು ನೀಡಿ ರಾಜಕೀಯವಾಗಿ ಪುನರ್ಜನ್ಮ ನೀಡಿದ ಕ್ಷೇತ್ರವೂ ಇದಾಗಿದೆ ಜೊತೆಗೆ 2018ರ ಸೋಲು ಅವರಿಗೆ ಅರಗಿಸಿಕೊಳ್ಳಲಾರದ ನೋವನ್ನು ತಂದಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪಚುನಾವಣೆ ಸೇರಿ 7 ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಸಿದ್ದರಾಮಯ್ಯ ಅವರು 1983, 1985, 1994, 2004, 2006 ಹೀಗೆ ಐದು ಬಾರಿ ಗೆಲುವಿನ ನಗೆ ಬೀರಿದ್ದರೆ, 1989, 1999, 2018ರಲ್ಲಿ ಮೂರು ಬಾರಿ ಸೋಲು ಕಂಡಿದ್ದಾರೆ. 2013ರಲ್ಲಿ ವರುಣಾ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾಗಿರುವುದು ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನಲ್ಲಿ ಮರೆಯಲಾರದ ದಿನವಾಗಿದೆ. ಆದರೆ 2018ರ ವೇಳೆಗೆ ಪುತ್ರ ಯತೀಂದ್ರರಿಗೆ ರಾಜಕೀಯ ಭವಿಷ್ಯ ನೀಡುವ ಸಲುವಾಗಿ ಗೆಲುವಿನ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿದ್ದರು.

ಸೋಲಿನ ನೋವನ್ನು ಬಹಿರಂಗವಾಗಿ ತೋಡಿಕೊಂಡಿದ್ದ ಸಿದ್ದರಾಮಯ್ಯ
ಒಂದು ಕಾಲದ ಜನತಾದಳದಲ್ಲಿದ್ದಾಗ ರಾಜಕೀಯವಾಗಿ ಶಿಷ್ಯರಾಗಿದ್ದ ಜಿ.ಟಿ.ದೇವೇಗೌಡರ ಅದಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಹೀಗಾಗಿ ಅವರ ಎದುರು ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಆದರೆ ಗೆಲುವು ಕಷ್ಟಸಾಧ್ಯ ಎನ್ನುವುದು ಚುನಾವಣೆಗೆ ಮುನ್ನವೇ ಗೊತ್ತಾಗಿ ಹೋಗಿತ್ತು. ಹೀಗಾಗಿ ಅವರು ಬಾದಾಮಿಯಿಂದಲೂ ಸ್ಪರ್ಧೆ ಮಾಡಿದರು. ಆದರೆ ಅವರು ನಂಬಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜನ ಕೈಹಿಡಿಯಲಿಲ್ಲ. ಪರಿಣಾಮ 36 ಸಾವಿರ ಮತದಿಂದ ಸೋಲು ಕಾಣಬೇಕಾಯಿತು. ಆದರೆ ದೂರದ ಬಾದಾಮಿ ಜನ ಕೈಹಿಡಿದು ರಾಜಕೀಯದಲ್ಲಿ ಮುನ್ನಡೆಯುವಂತೆ ಮಾಡಿದ್ದರು.
ರಾಜಕೀಯ ಬದುಕು ಕಲ್ಪಿಸಿಕೊಟ್ಟ ಚಾಮುಂಡೇಶ್ವರಿ ಕ್ಷೇತ್ರದ ಬಾಗಿಲು ಸಿದ್ದರಾಮಯ್ಯ ಅವರ ಪಾಲಿಗೆ ಮುಚ್ಚಿ ಹೋಗಿದೆ. ಸೋಲಿನ ನೋವನ್ನು ಆಗೊಮ್ಮೆ ಈಗೊಮ್ಮೆ ಬಹಿರಂಗವಾಗಿಯೇ ತೋಡಿಕೊಂಡಿದ್ದನ್ನು ಜನ ನೋಡಿದ್ದಾರೆ. ಒಟ್ಟಾರೆ ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನ ಏಳುಬೀಳಿನ ಕ್ಷೇತ್ರವಾಗಿದೆ.












Click it and Unblock the Notifications