ಸೋತ ಧ್ರುವನಾರಾಯಣ್ ರನ್ನು ಎಂಎಲ್ ಸಿ ಮಾಡಲು 'ತ್ಯಾಗರಾಜ' ಆಗಲು ಮುಂದಾದ ಧರ್ಮಸೇನ
ಮೈಸೂರು, ಮೇ 26 : ಕಾಂಗ್ರೆಸ್ ನಲ್ಲೂ ಈಗ 'ತ್ಯಾಗರಾಜ' ಆಗಲು ಒಬ್ಬರು ಮುಂದಾಗಿದ್ದಾರೆ. ಜೆಡಿಎಸ್ ನಲ್ಲಿ ಪ್ರಜ್ವಲ್ ರೇವಣ್ಣ ಅವರು ತಮ್ಮ ತಾತ ದೇವೇಗೌಡರ ಸಲುವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಇದೀಗ ವಿಧಾನಪರಿಷತ್ ಸದಸ್ಯ ಧರ್ಮಸೇನ ಅವರು ಲೋಕಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಪರಾಜಿತಗೊಂಡ ಧ್ರುವನಾರಾಯಣ್ ಅವರಿಗಾಗಿ ತಮ್ಮ ಸ್ಥಾನ ಬಿಟ್ಟುಕೊಡಲು ಮಂದಾಗಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆಯಲ್ಲಿ ಧ್ರುವನಾರಾಯಣ್ ಅಲ್ಪ ಮತಗಳಿಂದ ಸೋಲುಂಡಿದ್ದಾರೆ. ಆದರೆ ಇದು ನಿಜವಾದ ಸೋಲಲ್ಲ, ಹೋರಾಡಿ ಗೆದ್ದದ್ದು. ಧ್ರುವನಾರಾಯಣ್ ದೇಶದ ಉತ್ತಮ ಸಂಸದ. ಧ್ರುವನಾರಾಯಣ್ ಅವರ ನಾಯಕತ್ವದ ಅವಶ್ಯಕತೆ ಇದೆ. ಇಂತಹ ವ್ಯಕ್ತಿಗಾಗಿ ನನ್ನ ಸ್ಥಾನ ನೀಡಲು ಸಿದ್ಧ. ಇದು ನನ್ನ ವೈಯಕ್ತಿಕವಾದ ನಿರ್ಧಾರ. ಈ ವಿಚಾರ ಇನ್ನೂ ಯಾರಿಗೂ ಹೇಳಿಲ್ಲ. ಆದರೆ ಈಗ ಮಾಧ್ಯಮದ ಮುಂದೆ ಹೇಳುತ್ತಿದ್ದೇನೆ ಎಂದರು.
ಜನರಿಗೆ ನನಗಿಂತ ಧ್ರುವನಾರಾಯಣ್ ಅವರ ಅವಶ್ಯಕತೆಯಿದೆ. ನನ್ನ ಹುದ್ದೆ ಕೂಡ ಮೈಸೂರು- ಚಾಮರಾಜನಗರದ ಜನ ಆರಿಸುವಂಥದ್ದು. ಇದು ಎರಡು ಜಿಲ್ಲೆಗಳ ಜನರಿಂದ ಆಯ್ಕೆಯಾಗುವಂತಹ ದೊಡ್ಡ ಸ್ಥಾನ. ಈ ವಿಚಾರದಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ತಿಳಿಸಿದರು.

ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಲು ಧ್ರುವನಾರಾಯಣ್ ತರಹದ ನಾಯಕರು ಬೇಕು. ಸಂಕಷ್ಟದ ಸಮಯದಲ್ಲಿ ನಾನು ನೆರವಾಗಬೇಕು ಎಂದು ಈ ಕೆಲಸ ಮಾಡುತ್ತಿದ್ದೇನೆ. ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆರ್.ಧ್ರುವನಾರಾಯಣ ರಾಜ್ಯದಲ್ಲಿಯೇ ಅತ್ಯುತ್ತಮ ಕೆಲಸಗಾರ. ಆದರೆ ಅವರ ಸೋಲು ಪಕ್ಷದ ಮುಖಂಡರಿಗಷ್ಟೇ ಅಲ್ಲ, ಮತದಾರರಿಗೂ ಬೇಸರ ತಂದಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.












Click it and Unblock the Notifications