ಶ್ರೀಲಂಕಾ ದಾಳಿ:ಮೈಸೂರಿನ ಸಂತ ಫಿಲೋಮಿನಾ ಚರ್ಚ್ ನಲ್ಲಿ ಶ್ರದ್ಧಾಂಜಲಿ
ಮೈಸೂರು, ಏಪ್ರಿಲ್ 24:ಕಳೆದೆರಡು ದಿನಗಳ ಕೆಳಗೆ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಚರ್ಚ್ ನಲ್ಲಿ ನಡೆದ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಬಿಷಪ್ ಹಾಗೂ ಮೈಸೂರು ಪ್ರಾಂತ್ಯದ ಎಲ್ಲ ಕ್ರೈಸ್ತ ಧರ್ಮ ಗುರುಗಳು ಭಾಗಿಯಾಗಿದ್ದರು. ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲೆಂದು ಧರ್ಮ ಗುರುಗಳು, ಮಕ್ಕಳು ಹಾಗೂ ಕ್ರೈಸ್ತ ಬಂಧುಗಳು ಪ್ರಾರ್ಥಿಸಿದರು.
ಸೆಂಟ್ ಫಿಲೋಮಿನಾಸ್ ಚರ್ಚ್ ನ ಬಿಷಪ್ ಕೆ. ಎ ವಿಲಿಯಂ ಮಾತನಾಡಿ, ಶ್ರೀಲಂಕಾದಲ್ಲಿ ಹೀನ ಕೃತ್ಯ ನಡೆಸಿದವರನ್ನ ದೇವರು ಕ್ಷಮಿಸಲಿ. ಇಂತಹ ಹೀನ ಕೃತ್ಯ ಮಾಡಿದವರನ್ನ ಆ ದೇವರು ಕ್ಷಮಿಸಲಿ. ಮಾನವೀಯತೆಯುಳ್ಳ ಮನಸ್ಸು ಅವರಿಗೆ ಬರಲಿ. ಇನ್ನೊಂದು ಬಾರಿ ಈ ರೀತಿಯ ಕೃತ್ಯವನ್ನು ಎಸಗದಂತೆ ಅವರ ಮನಸ್ಸು ಪರಿವರ್ತನೆಯಾಗಲಿ. ಹಾಗೆಯೇ ಮೃತರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

2013ನೇ ಇಸ್ಟರ್ ಸಂಡೇಯಲ್ಲೂ ಇದೆ ರೀತಿ ಘಟನೆ ನಡೆದಿತ್ತು. ಈಸ್ಟರ್ ಸಂಡೆ ಕ್ರೈಸ್ತ ಬಂಧುಗಳಿಗೆ ಶುಭ ದಿನ, ಇಂತಹ ದಿನದಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ನೋವಾಗುತ್ತದೆ. ಶ್ರೀಲಂಕಾದಲ್ಲಿ ಪ್ರಾರ್ಥನೆಯಲ್ಲಿ ಮಗ್ನರಾಗಿದ್ದವರ ಮೇಲೆ ಈ ರೀತಿ ಕೃತ್ಯ ನಡೆದಿರುವುದು ಬೇಸರದ ಸಂಗತಿ ಎಂದರು. ಇನ್ನು ಮೈಸೂರಿನ ಸಂತ ಫಿಲೋಮಿನಾಚರ್ಚ್ ಗೂ ಹೈ ಅಲರ್ಟ್ ಭದ್ರತೆ ನೀಡಲಾಗಿದೆ.












Click it and Unblock the Notifications