ಮೋದಿ ದುಡ್ಡಿನಲ್ಲಿ ಸಿದ್ರಾಮಣ್ಣನ ಜಾತ್ರೆ: ಪ್ರತಾಪ್ ಸಿಂಹ ವ್ಯಂಗ್ಯ
ಮೈಸೂರು, ಜುಲೈ 14 : ಕೇಂದ್ರ ಸರಕಾರದ ಯೋಜನೆಯನ್ನು ಬಳಸಿಕೊಂಡು, ತಮ್ಮ ಹೆಸರಿನಲ್ಲಿ ಸಿದ್ದರಾಮಯ್ಯ ಜಾತ್ರೆ ನಡೆಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಇಲ್ಲಿನ ಜಲದರ್ಶಿನಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ರಿಂಗ್ ರಸ್ತೆಗೆ ಕೇಂದ್ರ ಹೆಚ್ಚು ಅನುದಾನ ಕೊಟ್ಟಿದೆ. ಆದರೆ ನಮಗೆ ಮಾಹಿತಿ ಇಲ್ಲದೆ ಸಿಎಂ ಉದ್ಘಾಟನೆ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರಿಗೆ ಹೇಳಿದ್ದೇನೆ ಎಂದರು. ಅವರು ಕೇಂದ್ರದ ಸ್ಪೀಕರ್ ಗಮನಕ್ಕೆ ತರಲು ಹೇಳಿದ್ದಾರೆ. ಅಲ್ಲಿ ಹಕ್ಕುಚ್ಯುತಿ ಮಂಡಿಸೋಣ ಎಂದರು.

ನರ್ಮ್ ಯೋಜನೆಯ ಮನೆಗಳಿಗೆ ಕೇಂದ್ರದಿಂದ ಶೇ 80 ಅನುದಾನ ಇದ್ದರೂ ಕೇಂದ್ರ ಸಚಿವರಿಂದ ಉದ್ಘಾಟನೆ ಮಾಡಿಸದೆ, ಸಿಎಂ ಉದ್ಘಾಟನೆ ಮಾಡಲು ಹೊರಟಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ಅವರು ನಮ್ಮ ಗಮನಕ್ಕೆ ಬಂದಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರಕಾರವು ಕೇಂದ್ರದ ಯೋಜನೆಗಳನ್ನು ಹೈಜಾಕ್ ಮಾಡುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಕೂಡ ಸಂದೇಶ ಕಳಿಸಿದ್ದೇನೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಅನುದಾನಗಳ ಬಗ್ಗೆ ಗೊತ್ತಿದ್ದರೂ ಯಾಕೆ ಕೇಂದ್ರ ಯೋಜನೆಯನ್ನು ಹೈಜಾಕ್ ಮಾಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ, ಮೋದಿ ದುಡ್ಡು ಸಿದ್ದರಾಮಣ್ಣನ ಜಾತ್ರೆ ಎಂಬಂತಾಗಿದೆ. ಇನ್ನು ಮುಂದೆ ಇದು ಹೀಗೆಯೇ ಮುಂದುವರೆದಲ್ಲಿ ಬಿಜೆಪಿ ಕಾರ್ಯಕರ್ತರು ಉದ್ಘಾಟನೆ ಸಮಾರಂಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟನೆ ನಡೆಸುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದರು
ನಾಲ್ಕು ವರ್ಷಗಳಲ್ಲಿ ಸಿದ್ದರಾಮಯ್ಯ ಅವರು ಮೈಸೂರು ಭಾಗವನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಜನ ಆಸೆ ಹೊಂದಿದ್ದರು. ಉಳಿದಿರುವ ದಿನಗಳಲ್ಲಾದರೂ ಅದನ್ನು ನೆರವೇರಿಸುತ್ತಾರೆ ಎಂಬ ಭರವಸೆ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.












Click it and Unblock the Notifications