ಸೋಲಿನಿಂದ ಹೊರಬರಲು ಗ್ರಾಮವಾಸ್ತವ್ಯ- ಶಾಸಕ ನಾಗೇಂದ್ರ ವ್ಯಂಗ್ಯ
ಮೈಸೂರು, ಜೂನ್ 10 : ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯ ಸೋಲಿನಿಂದ ಹೊರಬರಲು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಶಾಸಕ ನಾಗೇಂದ್ರ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದು ಒಂದು ವರ್ಷದ ನಂತರ ಮುಖ್ಯಮಂತ್ರಿಯವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಹಾಗೆ ಮಾಡುವುದೇ ಇದ್ದರೆ ಒಂದು ವರ್ಷದ ಹಿಂದೆಯೇ ಮಾಡಬಹುದಾಗಿತ್ತು ಎಂದು ಹೇಳಿದರು.
ಒಂದು ವೇಳೆ ಗ್ರಾಮ ವಾಸ್ತವ್ಯ ಮಾಡುವುದೇ ಆದರೆ ಬೇರೆಲ್ಲೋ ವಾಸ್ತವ್ಯ ಮಾಡುವ ಬದಲು ಮೈಸೂರಿನ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಯಲ್ಲಿ ವಾಸ್ತವ್ಯ ಮಾಡಲಿ. ಮಾರುಕಟ್ಟೆಗೆ ತನ್ನದೇ ಆದ ಪಾರಂಪರಿಕತೆ ಇದೆ. ಅಲ್ಲಿನ ಸಮಸ್ಯೆ ಅರಿಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಂದು ದಿನ ವಾಸ್ತವ್ಯ ಹೂಡಲಿ. ಅವರೊಂದಿಗೆ ನಾನೂ ಇರುತ್ತೇನೆ. ಆ ನಂತರವಾದರೂ ಮಾರುಕಟ್ಟೆ ಅಭಿವೃದ್ಧಿಗೆ ಮುಂದಾಗಲಿ ಎಂದು ಸಲಹೆ ನೀಡಿದ್ದಾರೆ.
ಪಾರಂಪರಿಕ ನಗರಿ ಮೈಸೂರು ವಿಶ್ವದಲ್ಲೇ ಹೆಸರು ಮಾಡಿದೆ. ಆದರೆ, ಇಲ್ಲಿನ ಹಲವು ಪಾರಂಪರಿಕ ಕಟ್ಟಡಗಳು ಸೂಕ್ತ ನಿರ್ವಹಣೆಯಿಲ್ಲದೆ ಕುಸಿದು ಬೀಳುತ್ತಿವೆ. ಇಂತಹ ಕಟ್ಟಡಗಳ ಸಂರಕ್ಷಣೆಯತ್ತ ಮುಖ್ಯಮಂತ್ರಿ ಮೊದಲು ಗಮನ ಹರಿಸಲಿ ಎಂದರು.

ಮಂಡ್ಯದಲ್ಲಿ ಸಚಿವ ಡಿ. ಸಿ ತಮ್ಮಣ್ಣ ಅವರು ಜನರ ವಿರುದ್ಧ ಆಡಿರುವ ಮಾತುಗಳಿಗೆ ಪ್ರತಿಕ್ರಿಯಿಸಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂಥದ್ದು. ಜನಪ್ರತಿನಿಧಿಯಾಗುವ ಮುನ್ನ ಅಧಿಕಾರಿಯಾಗಿದ್ದ ತಮ್ಮಣ್ಣ ಅವರಿಗೆ ಸಾಕಷ್ಟು ರಾಜಕೀಯ ಅನುಭವವಿದೆ. ಅವರು ಈ ರೀತಿ ಮಾತನಾಡಬಾರದು ಎಂದಿದ್ದಾರೆ.












Click it and Unblock the Notifications