41 ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ- ಐಸಿಯುಗೆ ಚಾಲನೆ: ಹೇಗಿರಲಿದೆ ಸೇವೆ..?
ಮೈಸೂರು, ನವೆಂಬರ್ 28: ರಾಜ್ಯದ 41 ತಾಲೂಕು ಆಸ್ಪತ್ರೆಗಳಲ್ಲಿ 10 ಹಾಸಿಗೆಗಳ ಟೆಲಿ-ಐಸಿಯು ಸೇವೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ತಾಲೂಕು ಕೇಂದ್ರಗಳಲ್ಲಿಯೂ ಎಮರ್ಜೆನ್ಸಿ ಸೇವೆ ಬಲಪಡಿಸಬೇಕು ಹಾಗೂ ತಜ್ಞ ವೈದ್ಯರ ಕೊರತೆ ಸರಿದೂಗಿಸಬೇಕು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಟೆಲಿ ಐಸಿಯು ಸೇವೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿದ್ಯಾನಿಧಿ ಯೋಜನೆ: ಮೈಸೂರು ಜಿಲ್ಲೆಯ 49,031 ವಿದ್ಯಾರ್ಥಿಗಳಿಗೆ ಶಿಷ್ಯವೇತನ
ನಗರದ ಮೈಸೂರು ಮೆಡಿಕಲ್ ಕಾಲೇಜಿನ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ವರ್ಷ 5,000 ಸಾವಿರ ವಿದ್ಯಾರ್ಥಿಗಳು ಎಂಬಿಬಿಎಸ್ ಪೂರೈಸಿ ಹೊರಬರುತ್ತಿದ್ದಾರೆ. ಆದರೂ ವೈದ್ಯರ ಕೊರತೆ ಕಾಡುತ್ತಿದೆ. ಹೀಗಾಗಿ ವೈದ್ಯ ಪದವಿ ಪೂರೈಸಿದವರು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಮಾಡಬೇಕು. ಇಲ್ಲಿ ಅನುಭವ ಪಡೆದಲ್ಲಿ ಯಾವ ಕಡೆ ಬೇಕಾದರೂ ಯಶಸ್ವಿಯಾಗಲು ಸಾಧ್ಯವಿದೆ ಎಂದರು.
ನೂರು ವರ್ಷ ಪೂರೈಸುತ್ತಿರುವ ರಾಜ್ಯದ ಮೊದಲ ಮೆಡಿಕಲ್ ಕಾಲೇಜು ಆಗಿರುವ ಮೈಸೂರು ಮೆಡಿಕಲ್ ಕಾಲೇಜು ಸೇರಿದಂತೆ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಆರ್ ಅಂಡ್ ಡಿ ಸೆಂಟರ್(ಸಂಶೋಧನೆ ಮತ್ತು ಅಭಿವೃದ್ಧಿ ) ಹಾಗೂ ಇನ್ಕ್ಯೂಬೇಷನ್ ಸೆಂಟರ್ ಆರಂಭಿಸಲು ಎಲ್ಲಾ ರೀತಿಯ ಸಹಕಾರವನ್ನು ಸರಕಾರ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾತನಾಡಿ, ರಾಜ್ಯಾದ್ಯಂತ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆ, ಶಸಚಿಕಿತ್ಸೆ ಹಾಗೂ ಲೆನ್ಸ್ ಹಾಗೂ ಕಿವಿಯ ಸಮಸ್ಯೆ ಇರುವ ಮಕ್ಕಳಿಗೆ ಕಾಕ್ಲಿಯಾರ್ ಇಂಪ್ಲಾಂಟ್ ಚಿಕಿತ್ಸೆಯನ್ನೂ ಉಚಿತವಾಗಿ ನೀಡಲಾಗುವುದು. ಇದಲ್ಲದೇ ನಗರ ಪ್ರದೇಶದ ಬಡವರಿಗಾಗಿ ರಾಜ್ಯಾದ್ಯಂತ 438 ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಏನಿದು ಟೆಲಿ-ಐಸಿಯು ಸೇವೆ..?
ಟೆಲಿ ಐಸಿಯುನಲ್ಲಿರುವ ರೋಗಿಯ ವಿಡಿಯೋ ಹಾಗೂ ಆತನಿಗೆ ಸಂಬಂಧಿಸಿದಂತೆ ಸಲಕರಣೆಗಳಲ್ಲಿ ಬರುತ್ತಿರುವ ಲೈವ್ ಡೇಟಾವನ್ನು ಬೇರೊಂದು ಪ್ರದೇಶದಲ್ಲಿರುವ ವೈದ್ಯರು ನೋಡಿ ಚಿಕಿತ್ಸೆ ನೀಡುತ್ತಾರೆ. ಈ ರೀತಿಯ ಲೈವ್ ಡೇಟಾ ಮೊದಲಿಗೆ ಕ್ಲೌಡ್ಗೆ ರವಾನೆಯಾಗುತ್ತದೆ. ಈ ಮಾಹಿತಿಯನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿರುವ ಹಬ್ನಲ್ಲಿರುವ ವೈದ್ಯರು ಪಡೆದುಕೊಂಡು ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ.