ಮೈಸೂರಿನಲ್ಲಿ ಕಾರ್ಮಿಕರ ಪರವಾಗಿ "ಮನೆಯಿಂದಲೇ ಚಳವಳಿ"
ಮೈಸೂರು, ಏಪ್ರಿಲ್ 21: ಕೇಂದ್ರ ಸರ್ಕಾರ ಮೇ 3ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿದೆ. ಆದರೆ ಈ ಲಾಕ್ ಡೌನ್ ನಿಂದಾಗಿ ಅಸಂಘಟಿತ ಕಾರ್ಮಿಕ ವಲಯ, ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕಷ್ಟ ಅನುಭವಿಸುತ್ತಿದ್ದಾರೆ.
ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ಯಾವುದೇ ವಿಶೇಷ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿಲ್ಲ, ಕೊರೊನಾ ನೆಪವೊಡ್ಡಿ ಕಾರ್ಖಾನೆ, ಕಂಪನಿಗಳಿಗೆ ನಷ್ಟವಾಗಿದ್ದು, ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದೆ ಎಂದು ಇದರ ವಿರುದ್ಧ ಸಿಐಟಿಯು ಇಂದು ರಾಷ್ಟ್ರವ್ಯಾಪಿ ಮನೆಯಿಂದಲೇ ಚಳವಳಿ ಕರೆ ನೀಡಿತ್ತು.
ಒನ್ಇಂಡಿಯಾ ರಿಯಾಲಿಟಿ ಚೆಕ್: ಕೇಳುವರಿಲ್ಲ ಕಾರ್ಮಿಕರ ಗೋಳು
ಭಾಷಣ ಸಾಕು - ವೇತನ ಬೇಕು; ಉದ್ಯೋಗ ಉಳಿಸಿ - ಆರ್ಥಿಕತೆ ರಕ್ಷಿಸಿ; ಆಹಾರ ಒದಗಿಸಿ - ಬದುಕು ಉಳಿಸಿ; ದಿನದ ಕೆಲಸದ ಅವಧಿ 8 ರಿಂದ 12 ಗಂಟೆ ಹೆಚ್ಚಳ ಬೇಡ ಎಂಬ ಘೋಷ ವಾಕ್ಯದೊಂದಿಗೆ ಸಿಐಟಿಯು ಮನೆಯಿಂದಲೇ ಚಳವಳಿ ಕರೆ ನೀಡಿದ್ದು, ಮೈಸೂರಿನಲ್ಲಿ ಇದಕ್ಕೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಯ ಹುಣಸೂರು, ನಂಜನಗೂಡು, ಟಿ.ನರಸೀಪುರ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ಮುಂತಾದ ತಾಲೂಕಿನ ಕಾರ್ಮಿಕ ಮುಖಂಡರು, ಕಟ್ಟಡ ಕಾರ್ಮಿಕರು, ಕಾರ್ಖಾನೆ ಕಾರ್ಮಿಕ, ಮನೆ ಕೆಲಸ ಕಾರ್ಮಿಕರು, ರೈತರು ಹಾಗೂ ಅವರ ಕುಟುಂಬ ಸದಸ್ಯರು ಈ ಚಳವಳಿಯಲ್ಲಿ ಭಾಗವಹಿಸಿದ್ದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ಜಯರಾಂ, ಕೆ.ಬಸವರಾಜ್, ಲ.ಜಗನ್ನಾಥ್, ಜಗದೀಶ್ ಸೂರ್ಯ, ರಾಜೇಂದ್ರ, ಅಣ್ಣಪ್ಪ, ಮೆಹಬೂಬ್, ವಿ.ಬಸವರಾಜ್, ಮಹದೇವಸ್ವಾಮಿ, ಪುಟ್ಟಸ್ವಾಮಿ, ಬಸವಯ್ಯ, ಮುರುಳೀಧರ ಪೇಶ್ವ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಇದೇ ಸಮಯ ಚಳವಳಿ ಮೂಲಕ ಹಲವು ಬೇಡಿಕೆಗಳನ್ನು ವ್ಯಕ್ತಪಡಿಸಲಾಯಿತು. ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 12ಗಂಟೆಗೆ ಏರಿಸಬಾರದು, ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು, ವೇತನ ಖಾತ್ರಿ ನೀಡಬೇಕು, ಸ್ವಸಹಾಯ ಗುಂಪುಗಳಿಗೆ ನೆರವು ನೀಡಬೇಕು... ಎಂಬಿತ್ಯಾದಿ ಬೇಡಿಕೆಗಳನ್ನು ಮನೆಯಲ್ಲೇ ಫಲಕಗಳನ್ನು ಹಿಡಿದು ಮುಂದಿರಿಸಿದ್ದಾರೆ.