ಸಿಎಂ ತವರು ವರುಣಾದಲ್ಲಿ 'ಮನೆಮನೆಗೆ ಕಾಂಗ್ರೆಸ್'ನಲ್ಲಿ ಮಕ್ಕಳದ್ದೇ ಆಟ
ಮೈಸೂರು, ಅಕ್ಟೋಬರ್ 30: ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿದೆ. ಕೆಲವೆಡೆ ಕೈಪಿಡಿ ಹಂಚಲು ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.
ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಸಿಎಂ ತವರಲ್ಲಿ ಕಾಂಗ್ರೆಸ್ ಬಾವುಟವನ್ನು ಹಾರಿಸಲೇ ಬೇಕೆಂಬ ಹಠಕ್ಕೆ ಬಿದ್ದಿದ್ದು, ಇದೀಗ ಗ್ರಾಪಂ ಸದಸ್ಯರಿಂದ ಹಿಡಿದು ಶಾಸಕರ ತನಕ ಹಳ್ಳಿಗೆ ತೆರಳಿ ಸರ್ಕಾರದ ಸಾಧನೆಗಳ ಕೈಪಿಡಿಯನ್ನು ಮನೆಮನೆಗೆ ತಲುಪಿಸುತ್ತಿದ್ದಾರೆ.

ಕೆಲವು ಹಳ್ಳಿಗಳ ಮನೆಮನೆಗೆ ತೆರಳುತ್ತಿರುವ ಕೆಲವರು ನಾಯಕರು ಒಂದಷ್ಟು ಕೈಪಿಡಿಯನ್ನು ವಿತರಿಸಿ ಬರುತ್ತಿದ್ದಾರೆ. ಹೆಚ್ಚಿನ ಕೈಪಿಡಿಗಳು ಮಕ್ಕಳ ಕೈಸೇರುತ್ತಿದ್ದು, ಅವರು ಅದನ್ನು ಹಿಡಿದು ಫೋಟೋಗಳಿಗೆ ಫೋಸ್ ನೀಡುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.
ಮುಖ್ಯಮಂತ್ರಿಗಳ ಕ್ಷೇತ್ರ ವರುಣಾದಲ್ಲಿ ಕಾಂಗ್ರೆಸ್ನ ವತಿಯಿಂದ ಮನೆಮನೆಗೆ ಭೇಟಿ ಕಾರ್ಯಕ್ರಮ ಬಿರುಸಿನಿಂದ ಸಾಗುತ್ತಿದ್ದು, ಸರ್ಕಾರದ ಸಾಧನೆಗಳ ಕೈಪಿಡಿ ಮನೆಮನೆಗೆ ತಲುಪುತ್ತಿದೆ.
ನಂಜನಗೂಡು ತಾಲೂಕು ವರುಣಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಎಪಿಎಂಸಿ ಸದಸ್ಯೆ ಲಕ್ಷ್ಮಮ್ಮರವರು ಚಾಲನೆ ನೀಡಿದ್ದು, ಸರ್ಕಾರದ ಸಾಧನೆಯ ಕೈಪಿಡಿಯನ್ನು ಜನರಿಗೆ ಹಂಚುವ ಮೂಲಕ ಕಾಂಗ್ರೆಸ್ನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.
ಆದರೆ ಈ ಕಾರ್ಯಕ್ರಮದಲ್ಲಿ ವಯಸ್ಕರಿಗಿಂತ ಮಕ್ಕಳೇ ಇದ್ದದ್ದು ಅಚ್ಚರಿ ಮೂಡಿಸಿದೆ. ಮಕ್ಕಳೆಲ್ಲ ಕೈಪಿಡಿಯನ್ನು ಹಿಡಿದುಕೊಂಡು ಕೇಕೆ ಹಾಕುತ್ತಿದ್ದದ್ದು ಕಂಡು ಬಂದಿದೆ. ಇಷ್ಟಕ್ಕೂ ಮಕ್ಕಳಿಗೆ ಕೈಪಿಡಿಕೊಟ್ಟು ಫೋಟೋ ತೆಗೆಸಿಕೊಳ್ಳುವ ದರ್ದು ಮುಖಂಡರಿಗೇಕೆ ಬಂತು? ಎಂಬುದೇ ಅಚ್ಚರಿಯ ಪ್ರಶ್ನೆಯಾಗಿದೆ.
ಇನ್ನು ಮುಂದೆಯಾದರೂ ರಾಜಕಾರಣಿಗಳು ಪಕ್ಷದ ಚಟುವಟಿಕೆಗೆ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಲಿ.












Click it and Unblock the Notifications