Get Updates
Get notified of breaking news, exclusive insights, and must-see stories!

ಶೌಚಾಲಯಕ್ಕೆ ಬಾಗಿಲಿಲ್ಲ, ನೀರಿಲ್ಲ: ಗಬ್ಬೆದ್ದು ನಾರುತ್ತಿದೆ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ವಿದ್ಯಾರ್ಥಿ ನಿಲಯ!

ಮೈಸೂರು, ಡಿಸೆಂಬರ್‌ 27: ರಾಜ್ಯದಲ್ಲಿರುವ ಸರ್ಕಾರಿ ವಸತಿ ಶಾಲೆಗಳು, ವಸತಿ ನಿಲಯಗಳು ಸೇರಿದಂತೆ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಕುರಿತಂತೆ ಪುಂಖಾನುಪುಂಖವಾಗಿ ಸುದ್ದಿಗಳು ಹೊರಬರುತ್ತಿವೆ. ಬಹಳಷ್ಟು ಸರ್ಕಾರಿ ಶಾಲೆಗಳು ವಿನಾಶದ ಅಂಚಿಗೆ ತಲುಪಿವೆ. ಆದರೆ ಉದ್ಧಾರ ಮಾಡುತ್ತೇವೆಂಬ ವಾಗ್ದಾನದೊಂದಿಗೆ ಅಧಿಕಾರ ಹಿಡಿಯುವ ಎಲ್ಲ ಸರ್ಕಾರಗಳ ಜಾಣ ಕುರುಡಿನಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ. ಇದೀಗ ಸಿಎಂ ಕ್ಷೇತ್ರದಲ್ಲಿರುವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಅವ್ಯವಸ್ಥೆಯನ್ನು ದಲಿತ ಸಂಘರ್ಷ ಸಮಿತಿ ಜಗಜ್ಜಾಹೀರು ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರ ವ್ಯಾಪ್ತಿಯ ತಿ.ನರಸೀಪುರ ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಅವ್ಯವಸ್ಥೆಯ ಆಗರವಾಗಿದ್ದು, ಶೌಚಾಲಯಗಳಿಗೆ ಬಾಗಿಲಿಲ್ಲ, ಶೌಚಾಲಯಕ್ಕೆ ನೀರು ಸರಬರಾಜು ಇಲ್ಲ, ಕೊಠಡಿಗಳಲ್ಲಿ ದೀಪದ ಬೆಳಕಿಲ್ಲ ಹೀಗೆ ಇಲ್ಲಗಳ ದೊಡ್ಡಪಟ್ಟಿಯನ್ನೇ ತೆರೆದಿಟ್ಟಿರುವ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ್ ಸರ್ಕಾರದ ಜಾಣ ಮೌನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chaos Of Scheduled Caste Matric Boys Hostel In Nanjangud Road Mysuru

ಈ ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 51 ವಿದ್ಯಾರ್ಥಿಗಳು ದಾಖಲಾಗಿದ್ದು, ಪ್ರತಿದಿನ ರಾತ್ರಿ 5 ರಿಂದ 10 ಮಕ್ಕಳು ಮಾತ್ರ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಳ್ಳುತ್ತಿದ್ದು, ಉಳಿದ ಮಕ್ಕಳು ಅವರವರ ಸ್ವಂತ ಸ್ಥಳಕ್ಕೆ ವಾಪಸ್ಸಾಗುತ್ತಾರೆ. ಅದರಲ್ಲೂ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಒಂದು ಮಕ್ಕಳೂ ಸಹ ವಿದ್ಯಾರ್ಥಿ ನಿಲಯದಲ್ಲಿ ಉಳಿಯುವುದಿಲ್ಲವಂತೆ. ಇದಕ್ಕೆ ಕಾರಣವೇನು ಎಂದು ಕೇಳಿದರೆ ಇಲ್ಲಿರುವ ಸಮಸ್ಯೆಯನ್ನು ಬೊಟ್ಟುಮಾಡಿ ತೋರಿಸಲಾಗುತ್ತಿದೆ.

'ಇಲ್ಲ'ಗಳಿಂದ ತುಂಬಿರುವ ವಿದ್ಯಾರ್ಥಿ ನಿಲಯ

ವಿದ್ಯಾರ್ಥಿನಿಲಯಕ್ಕೊಂದು ಸುತ್ತು ಬಂದರೆ ಇಲ್ಲಿ ಬರೀ ಸಮಸ್ಯೆಗಳೇ ಕಣ್ಣಿಗೆ ಗೋಚರಿಸುತ್ತವೆ. ಮೂಲ ಸೌಕರ್ಯವಾದ ಶೌಚಾಲಯ ಹೇಗಿದೆ ಎಂದರೆ ನೋಡಿದರೆ ತಲೆ ತಿರುಗಿ ಬೀಳುವುದಂತು ನಿಶ್ಚಿತ. ಹೀಗಿರುವಾಗ ಇದನ್ನು ಉಪಯೋಗಿಸುವುದಾದರೂ ಹೇಗೆ? ಶೌಚಾಲಯ ಸ್ವಚ್ಛವಾಗಿಲ್ಲ ಜತೆಗೆ ಬಾಗಿಲು ಕೂಡ ಇಲ್ಲ. ಹೋಗಲಿ ನೀರಿನ ಸೌಲಭ್ಯವಾದರೂ ಸಮರ್ಪಕವಾಗಿದೆಯಾ? ಅದು ಕೂಡ ಇಲ್ಲದಾಗಿದೆ. ಇದೆಲ್ಲದರ ಪರಿಣಾಮ ಮಲ- ಮೂತ್ರ ತುಂಬಿ ಶೌಚಾಲಯಗಳು ಗಬ್ಬು ನಾರುತ್ತಿದ್ದು ರೋಗವನ್ನು ಆಹ್ವಾನಿಸುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಶೌಚ ಮತ್ತು ಸ್ನಾನಕ್ಕಾಗಿ ಸಮೀಪದ ಕಾಲೇಜ್ ಹಾಸ್ಟೆಲ್ ನ್ನು ಅವಲಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Chaos Of Scheduled Caste Matric Boys Hostel In Nanjangud Road Mysuru

ವಿದ್ಯಾರ್ಥಿ ನಿಲಯದ ಸಮಸ್ಯೆ ಇಲ್ಲಿಗೆ ಮುಗಿಯುವುದಿಲ್ಲ. ವಿದ್ಯಾರ್ಥಿಗಳು ನೆಮ್ಮದಿಯಾಗಿ ಮಲಗಲು ಇಲ್ಲಿ ಮಂಚ ಹಾಸಿಗೆ ಇದ್ದರೂ ಹೊದಿಕೆಯಿಲ್ಲ. ಫ್ಯಾನ್ ಗಳಂತು ಇಲ್ಲವೇ ಇಲ್ಲ. ಜತೆಗೆ ಹಾಸ್ಟೆಲ್ ಬಳಿಯಿರುವ ವಿದ್ಯುತ್ ಕಂಬಗಳಿಗೆ ಬೀದಿ ದೀಪ ಅಳವಡಿಸದ ಕಾರಣ ಕತ್ತಲೆಯಲ್ಲಿಯೇ ಓಡಾಡಬೇಕಾಗಿದೆ. ಆಹಾರ ಪದಾರ್ಥಗಳು ಕೂಡ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಜೊತೆಗೆ ಇಲಾಖೆಯಿಂದ ಕೊಡುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ, ಕಡಿಮೆ ಬೆಲೆಯ ಪದಾರ್ಥಗಳನ್ನು ಅಡುಗೆಗೆ ಬಳಸಲಾಗುತ್ತಿದೆ ಎಂಬ ಆರೋಪವೂ ವಿದ್ಯಾರ್ಥಿಗಳ ಕಡೆಯಿಂದ ಕೇಳಿಬರುತ್ತಿದೆ.

ಮುಖ್ಯಮಂತ್ರಿಗಳು ಇತ್ತ ಗಮನಹರಿಸುತ್ತಾರಾ?

ವಿದ್ಯಾರ್ಥಿ ನಿಲಯದಲ್ಲಿ ತಂಗುವ ವಿದ್ಯಾರ್ಥಿಗಳ ಸುಳ್ಳು ಲೆಕ್ಕ ಬರೆದು ಇಲಾಖೆಯ ವತಿಯಿಂದ ಅಕ್ರಮ ಬಿಲ್ಲು ಗಳಿಗೆ ಹಣ ಪಡೆಯಲಾಗುತ್ತಿದೆ ಎಂಬ ಆರೋಪವನ್ನು ಮಾಡಲಾಗುತ್ತಿದೆ. ಆದರೆ ಇದೆಲ್ಲವೂ ತನಿಖೆ ಮಾಡಿದರಷ್ಟೆ ಗೊತ್ತಾಗಲಿದೆ. ಆದರೆ ವಿದ್ಯಾರ್ಥಿ ನಿಲಯದ ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಕೇಳಿ ಬರುತ್ತಿರುವ ಆರೋಪವಾಗಿದೆ.

Chaos Of Scheduled Caste Matric Boys Hostel In Nanjangud Road Mysuru

ಹಿಂದುಳಿದ ಹಳ್ಳಿಗಳಲ್ಲಿ ಕೂಲಿನಾಲಿ ಮಾಡಿ ಜೀವನ ಮಾಡುವ ಹಿಂದುಳಿದ ಪರಿಶಿಷ್ಟ ಜಾತಿಯ ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗಲಿ ಎಂದು ಸರ್ಕಾರ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ್ದು, ಆದರೆ ಸರ್ಕಾರ ನಿರ್ವಹಣೆ ವಿಚಾರದಲ್ಲಿ ಎಡವುತ್ತಿರುವುದರಿಂದಲೇ ಇವತ್ತು ಸಮಸ್ಯೆಗಳು ಎದುರಾಗಿವೆ. ಅಷ್ಟೇ ಅಲ್ಲದೆ, ಸರ್ಕಾರಿ ಶಾಲೆ, ಸರ್ಕಾರಿ ವಿದ್ಯಾರ್ಥಿ ನಿಲಯಗಳು ಸಮಸ್ಯೆಗಳ ಆಗರವಾಗಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾ ವ್ಯಾಪ್ತಿಯ ತಿ.ನರಸೀಪುರ ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿಯೇ ಇಷ್ಟೊಂದು ಸಮಸ್ಯೆಗಳಿರುವಾಗ ಉಳಿದ ವಿದ್ಯಾರ್ಥಿ ನಿಲಯಗಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ನೀವೇ ಊಹಿಸಿ. ಇನ್ನಾದರೂ ಮುಖ್ಯಮಂತ್ರಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿ ನಿಲಯದ ಸಮಸ್ಯೆಯನ್ನು ಬಗೆಹರಿಸುತ್ತಾರಾ? ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+