ಮೈಸೂರು ದಸರಾ ಆನೆಗಳ ಮೇಲೆ ಕಣ್ಗಾವಲು ಇಡಲಿವೆ 8 ಸಿಸಿಟಿವಿ!
ಮೈಸೂರು, ಸೆಪ್ಟೆಂಬರ್ 20; ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಆನೆಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಭದ್ರತೆ ದೃಷ್ಟಿಯಿಂದ 8 ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಕಳೆದ ಬಾರಿ ಕೊರೊನಾ ಕಾರಣ ಸರಳ ದಸರಾ ಆಚರಿಸಲಾಗಿತ್ತು. ಈ ಬಾರಿಯೂ ಸರಕಾರ ಸರಳ ದಸರಾ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಈ ವರ್ಷ ಎಲ್ಲಾ ಪ್ರವಾಸಿ ತಾಣಗಳು ತೆರೆದಿರುವುದರಿಂದ ಆನೆಗಳು ಹಾಗೂ ಮಾವುತರಿಗೆ ಸಮಸ್ಯೆ ಆಗಬಾರದೆಂದು ಆನೆಗಳು ಬೀಡುಬಿಟ್ಟಿರುವ ಜಾಗದಲ್ಲಿ ಸಿಸಿಟಿವಿ ಹಾಕಲಾಗುತ್ತಿದೆ.
ಆನೆಗಳು ಸ್ನಾನ ಮಾಡುವ ಸ್ಥಳ, ಮಾವುತರ ವಾಸಸ್ಥಾನ, ಅಭಿಮನ್ಯು ಉಳಿಕೊಂಡಿರುವ ಜಾಗ, ಆನೆಗಳ ಆಹಾರ ತಯಾರಿಸುವ ಶೆಡ್ ಹೀಗೆ ಎಲ್ಲಾ ಕಡೆ ಅರಣ್ಯ ಇಲಾಖೆ ಕಣ್ಗಾವಲು ಇಟ್ಟಿದೆ. ಈ ಬಾರಿ ಅಕ್ಟೋಬರ್ 7ರಿಂದ 15ರ ತನಕ ಮೈಸೂರು ದಸರಾ ನಡೆಯಲಿದೆ. ಅಕ್ಟೋಬರ್ 15ರಂದು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ನಡೆಯಲಿದೆ.

ಸಾರ್ವಜನಿಕರಿಲ್ಲ ಪ್ರವೇಶ; ಕೊರೊನಾ ಕಾರಣದಿಂದ ಆನೆ ಬಳಿ ಯಾರು ಹೋಗಬಾರದು ಎಂಬ ಉದ್ದೇಶದಿಂದ ಆನೆಗಳು ವಾಸ್ತವ್ಯ ಹೂಡಿರುವ ಜಾಗಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರು, ಮಕ್ಕಳಿಗೆ ಆನೆ ಇರುವ ಜಾಗಕ್ಕೆ ಬಂದು ಸೆಲ್ಫಿ ತೆಗೆದುಕೊಳ್ಳುವುದಕ್ಕೂ ತಡೆ ಹಾಕಲಾಗಿದೆ.
ಮಾಸ್ಕ್ ಕಡ್ಡಾಯ; ಆನೆಗಳಿಗೆ ಹಾಗೂ ಮಾವುತರಿಗೆ ಆಹಾರ ತಯಾರಿಸುವವರು ಮಾಸ್ಕ್ ಧರಿಸಲೇಬೇಕು. ಊಟ, ತಿಂಡಿ ಕೊಡುವಾಗ ಎರಡು ಸಲ ಕೈ ತೊಳೆದುಕೊಂಡಿರಬೇಕು. ಆನೆಗಳ ಆಹಾರದ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಕುಸುಬಲಕ್ಕಿ, ಬೆಲ್ಲ, ತೆಂಗಿನಕಾಯಿ, ಸೊಪ್ಪು, ಕಾಳು, ಕಬ್ಬು, ತರಕಾರಿ, ಬೆಣ್ಣೆ, ಗೋಧಿ, ಈರುಳ್ಳಿ ಸೇರಿದಂತೆ ಬಗೆಬಗೆಯ ಭಕ್ಷ್ಯ ಭೋಜನಗಳನ್ನು ಗಜಪಡೆಗೆ ನೀಡಲಾಗುತ್ತಿದೆ.
ಮಾವುತರಿಗೆ ಲಸಿಕೆ; ಮಾವುತರು, ಕಾವಾಡಿಗರು ಹಾಗೂ ಅವರ ಮಕ್ಕಳು ಸೇರಿದಂತೆ 50 ಮಂದಿ ಕಾಡಿನಿಂದ ಅರಮನೆಗೆ ಬಂದಿದ್ದಾರೆ. ಇದರಲ್ಲಿ 35 ಮಂದಿಗೆ ಕೊರೊನಾ ಲಸಿಕೆ ಹಾಕಿಸಲಾಗಿದೆ. ಕೆಲವರು ಮೊದಲ ಡೋಸ್ ಪಡೆದುಕೊಂಡರೆ ಮತ್ತೆ ಕೆಲವರು ಎರಡನೇ ಡೋಸ್ ತೆಗೆದುಕೊಂಡರು.
"ಅನ್ಲಾಕ್ ಇರುವುದರಿಂದ ಪ್ರವಾಸಿಗರು ಅರಮನೆಗೆ ಆಗಮಿಸುತ್ತಾರೆ. ಈ ವೇಳೆ ಆನೆಗಳ ಬಳಿ ಬರದಂತೆ ತಡೆಯಲು ಸಿಸಿಟಿವಿ ಅಳವಡಿಸಲಾಗಿದೆ. ಜೊತೆಗೆ ಸ್ಯಾನಿಟೈಸ್, ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ" ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಕರಿಕಾಳನ್ ಹೇಳಿದ್ದಾರೆ.
ಅಭಿಮನ್ಯು ಕ್ಯಾಪ್ಟನ್; ಈ ಬಾರಿಯೂ ಸಹ 56 ವರ್ಷದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್. ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಆನೆ ಕೆಳದ ಬಾರಿಯೂ ಇದೇ ಆನೆ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ಪಡೆದಿತ್ತು.
ಈ ಬಾರಿಯ ದಸರಾದಲ್ಲಿ ಒಟ್ಟು 8 ಆನೆಗಳು ಪಾಲ್ಗೊಳ್ಳುತ್ತಿವೆ. ಅಭಿಮನ್ಯು ಕ್ಯಾಪ್ಟನ್ ಉಳಿದಂತೆ ವಿಕ್ರಮ, ಅಶ್ವತ್ಥಾಮ, ಲಕ್ಷ್ಮೀ, ಚೈತ್ರಾ, ಕಾವೇರಿ, ಧನಂಜಯ, ಗೋಪಾಲಸ್ವಾಮಿ ಆನೆಗಳು ಪಾಲ್ಗೊಳ್ಳುತ್ತಿವೆ. 34 ವರ್ಷದ ಅಶ್ವತ್ಥಾಮ ಆನೆ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ.
ಈಗಾಗಲೇ ಆನೆಗಳು ಕಾಡಿನಿಂದ ಆಗಮಿಸಿ ಅರಮನೆಯಲ್ಲಿವೆ. ಜಂಬೂ ಸವಾರಿ ತಾಲೀಮನ್ನು ಸಹ ಆನೆಗಳಿಗೆ ಆರಂಭಿಸಲಾಗಿದೆ. ಈ ಬಾರಿ ಸಹ ಜಂಬೂ ಸವಾರಿ ಅರಮನೆಯ ಆವರಣದಲ್ಲಿ ಮಾತ್ರ ನಡೆಯಲಿದೆ.
ಈ ಬಾರಿಯ ದಸರಾಕ್ಕೆ ಅಕ್ಟೋಬರ್ 7ರಂದು 8.15 ರಿಂದ 8.45ರ ಶುಭ ಮುಹೂರ್ತದಲ್ಲಿ ಚಾಲನೆ ನೀಡಲಾಗುತ್ತದೆ. ಆದರೆ ದಸರಾ ಉದ್ಘಾಟನೆ ಮಾಡುವವರು ಯಾರು? ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.












Click it and Unblock the Notifications