ಅಮಿತ್ ಶಾ ಗಿಮಿಕ್ ಕರ್ನಾಟಕದಲ್ಲಿ ನಡೆಯೋಲ್ಲ: ಸಿದ್ದರಾಮಯ್ಯ
ಮೈಸೂರು, ಅಕ್ಟೋಬರ್ 3 : ಮಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮನದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯಮಿಶ್ರಿತ ಪ್ರತಿಕ್ರಿಯೆ ನೀಡಿದ್ದಾರೆ. 'ಅಮಿತ್ ಶಾ ಬಂದ ಕೂಡಲೇ ಜನರ ತೀರ್ಪು ಬದಲಾಗಲ್ಲ. ಅಮಿತ್ ಶಾ ಗಿಮಿಕ್ ಇಲ್ಲಿ ನಡೆಯೋದಿಲ್ಲ. ಅವರ ಮಾತಿಗೆ ಜನ ಮರುಳಾಗೋದಿಲ್ಲ' ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿಯವರು ಆಶಾಗೋಪುರ ಕಟ್ಟಲಿ ಬೇಡ ಅನ್ನಲ್ಲ.ಯಡಿಯೂರಪ್ಪ ನಂಜನಗೂಡು ಚುನಾವಣೆ ಯಲ್ಲಿ ನಾವೇ 150 ಗೆಲ್ತೀವಿ ಎಂದಿದ್ದರು.ಇವಾಗ ಕೂಡ ಅದನ್ನೇ ಹೇಳ್ತಾ ಇಲ್ವಾ' ಎಂದರು.

'ನಮ್ಮ ಕಾರ್ಯ ಜನರ ಮನಸು ತಲುಪಿದೆ. ಜನರು ನಮ್ಮಮೇಲೆ ವಿಶ್ವಾಸ ಇಡ್ತಾರೆ ಎಂಬ ನಂಬಿಕೆ ಇದೆ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರ್ತೀವಿ. ಆ ವೇಳೆ ನಮ್ಮ ಸರ್ಕಾರವೇ ದಸರಾ ಮಾಡಲಿದೆ. ಪ್ರಧಾನಿ ಮೋದಿ ಅವರು ಗಿಮಿಕ್ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಜನರನ್ನು ಹೆಚ್ಚು ದಿನ ಭಾವನಾತ್ಮಕ ಅಂಶಗಳ ಮೇಲೆ ಹಿಡಿದಿಡಲು ಸಾಧ್ಯವಿಲ್ಲ. ಮೋದಿ ಅವರು ಎಷ್ಟೇ ಮನ್ ಕಿ ಬಾತ್ ಹೇಳಿಕೊಂಡು ಇದ್ದರೂ ಏನೂ ಆಗುವುದಿಲ್ಲ. ಅವರ ಆಡಳಿತ ವೈಖರಿ ವಿರುದ್ಧ ಬಿಜೆಪಿ ಮುಖಂಡರೇ ಮಾತನಾಡುತ್ತಿದ್ದಾರೆ. ಸುಬ್ರಹ್ಮಣ್ಯಯನ್ ಸ್ವಾಮಿ, ಸಿನ್ಹಾ, ಎಸ್.ಎಂ.ಕೃಷ್ಣ ಸೇರಿದಂತೆ ಎಲ್ಲರೂ ಮಾತನಾಡುತ್ತಿದ್ದಾರೆ. ಎಸ್.ಎಂ.ಕೃಷ್ಣ ಅವರಿಗೆ ಬಿಜೆಪಿಗೆ ಹೋದ ಮೇಲೆ ಅಲ್ಲಿನ ಪರಿಸ್ಥಿತಿ ಅರ್ಥವಾಗುತ್ತಿದೆ' ಎಂದಿದ್ದಾರೆ.
ಸಿಎಂ ಎದುರೇ ಗ್ರಾ. ಪಂ ಅಧಿಕಾರಿಗಳ ಮಾರಾಮಾರಿ :
ಮೈಸೂರು ವಿಮಾನ ನಿಲ್ದಾಣದಲ್ಲಿ ಕೈ ಮುಖಂಡರ ನಡುವೆ ಗಲಾಟೆ ನಡೆದಿದ್ದು, ಇದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಿರುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವುದಕ್ಕೂ ಮುನ್ನ ಗಲಾಟೆ ನಡೆದಿದೆ. ಶ್ರೀರಾಮಪುರ ಗ್ರಾಪಂ ಪಿಡಿಓ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರೊಬ್ಬರು ಹಾಗೂ ಗ್ರಾಪಂ ಸದಸ್ಯರ ನಡುವೆ ಈ ಗಲಾಟೆ ನಡೆದಿದೆ.
ಶ್ರೀರಾಮಪುರ ಗ್ರಾಪಂ ಪಿಡಿಓ ಹನುಮಂತರಾಜು ಅವ್ಯವಹಾರದ ಹಿನ್ನೆಲೆಯಲ್ಲಿ ಆರೋಪ ಸಾಬೀತಾಗಿ ಹನುಮಂತರಾಜು ವರ್ಗಾವಣೆ ಮಾಡಲಾಗಿತ್ತು. ಜಿಪಂ ಸಿಇಒ ಹೆಚ್.ಡಿ.ಕೋಟೆಗೆ ವರ್ಗಾವಣೆ ಮಾಡಿದ್ದರು. ವರ್ಗಾವಣೆಯಾದರೂ ಹನುಮಂತರಾಜು ಶ್ರೀರಾಂಪುರ ಗ್ರಾ.ಪಂನಲ್ಲೇ ಉಳಿದುಕೊಂಡರು.
ಆ ಜಾಗಕ್ಕೆ ಹೊಸದಾಗಿ ನೇಮಕಗೊಂಡ ರವಿಕುಮಾರ್ ಗೂ ಹನುಮಂತರಾಜು ಬಿಟ್ಟುಕೊಡಲಿಲ್ಲ. ಚಾರ್ಜ್ ನೀಡದೆ ಮರಟಿ ಕ್ಯಾತನಹಳ್ಳಿಗೆ ಪುನಹ ರವಿಕುಮಾರ್ ಗೆ ವರ್ಗಾವಣೆಯಾಗಿತ್ತು. ಶ್ರೀರಾಂಪುರ ಅಧ್ಯಕ್ಷ ಚೂಡಾಮಣಿ ಪಿಡಿಓ ಬೆನ್ನಿಗೆ ನಿಂತಿದ್ದರು.
ಇದೇ ವಿಚಾರವಾಗಿ ಗ್ರಾಪಂ ಸದಸ್ಯರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಬಂದಿದ್ದರು. ಸುಮಾರು 30 ಸದಸ್ಯರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಗಲಾಟೆ ನಡೆದಿದೆ.












Click it and Unblock the Notifications