ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ
ನಂಜನಗೂಡು ವಿಧಾನಸಭೆ ಉಪಚುನಾವಣೆ ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಇದು ಒಳ್ಳೆ ಸುದ್ದಿಯಲ್ಲ. ಏಕೆಂದರೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ. ಆದರೆ ಕಾಂಗ್ರೆಸ್ ಪರವಾಗಿರುವುದಕ್ಕೆ ಸಂಖ್ಯೆಯೇ ಸಾಕ್ಷಿ.
ನಂಜನಗೂಡು, ಏಪ್ರಿಲ್ 13: 1957ರಿಂದ 2013ರವರೆಗೆ ಹದಿಮೂರು ಚುನಾವಣೆಗಳನ್ನು ಕಂಡಿರುವ ನಂಜನಗೂಡು ಕ್ಷೇತ್ರದಲ್ಲಿ ಈವರೆಗೆ ಒಂದು ಸಲ ಕೂಡ ಬಿಜೆಪಿ ಗೆಲುವು ಸಾಧಿಸಿಲ್ಲ ಎಂಬುದು ಗಮನ ಸೆಳೆಯುವ ಅಂಶ. ಇನ್ನು ಅತಿ ಹೆಚ್ಚು ಸಲ ಅಂದರೆ ಎಂಟು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ.
ಈ ಸಲದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ ಪಾಲಿಗೆ ಕ್ಷೇತ್ರದ ಮತದಾರರು ಒಲಿಯುತ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಕಳೆದ ಬಾರಿ ಅಂದರೆ 2013ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶ್ರೀನಿವಾಸ್ ಪ್ರಸಾದ್ ಅವರು 50784 ಮತ ಪಡೆದು ವಿಜಯಿಯಾಗಿದ್ದರೆ, ಜೆಡಿಎಸ್ ನಿಂದ ಕಣದಲ್ಲಿದ್ದ ಕಳಲೆ ಕೇಶವ ಮೂರ್ತಿ 41843 ಮತ ಪಡೆದಿದ್ದರು.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ LIVE]
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿರುವ ಕಳಲೆ ಕೇಶವಮೂರ್ತಿ ಅವರ ಬಗ್ಗೆ ನಂಜನಗೂಡು ಮತದಾರರಿಗೆ ಅನುಕಂಪವಿದೆ ಎಂಬ ಮಾತಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಪ್ರತಿಷ್ಠೆಯೇ ಮುಂದಾಗಿದೆ. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ, ಶ್ರೀನಿವಾಸ್ ಪ್ರಸಾದ್ ಗೆ ಇದು ಸ್ವಪ್ರತಿಷ್ಠೆ ವಿಷಯವಾಗಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ: ಗುಪ್ತಚರ ವರದಿ]
ಸಂಪುಟದಿಂದ ಕೈ ಬಿಟ್ಟ ಕಾರಣಕ್ಕೆ ಸಿಡಿದೆದ್ದ ಶ್ರೀನಿವಾಸ್ ಪ್ರಸಾದ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆ ಕಾರಣಕ್ಕೆ ಉಪ ಚುನಾವಣೆ ಕಾಣುವಂತಾದ ನಂಜನಗೂಡಿನಲ್ಲಿ ತಾವೇನಾದರೂ ಸೋತರೆ ರಾಜಕೀಯದಿಂದಲೇ ನಿವೃತ್ತರಾಗುವುದಾಗಿ ಶ್ರೀನಿವಾಸ್ ಪ್ರಸಾದ್ ಘೋಷಿಸಿದ್ದಾರೆ.