ಮಹಾದಾಯಿ ವಿಚಾರದಲ್ಲಿ ಬಿಜೆಪಿಯಿಂದ ನಾಟಕ: ವೇಣುಗೋಪಾಲ್ ವಾಗ್ದಾಳಿ
ಮೈಸೂರು, ಡಿಸೆಂಬರ್ 26 : ಕಾಂಗ್ರೆಸ್ನಲ್ಲಿ ಯಾವುದೇ ಗೊಂದಲ ಇಲ್ಲ. ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಇಬ್ಬರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ನಡುವೆ ಯಾವುದೇ ಗೊಂದಲ ಇಲ್ಲ. 224 ಕ್ಷೇತ್ರಗಳನ್ನು ಸುತ್ತಲು ಮೂರು ತಿಂಗಳು ಸಮಯ ಬೇಕು. ಅದಕ್ಕಾಗಿಯೇ ನಾವು ಎರಡು ಹಂತಗಳಲ್ಲಿ ಪ್ರವಾಸ ಆರಂಭಿಸಿದ್ದೇವೆ ಎಂದರು.

ಪರಮೇಶ್ವರ್ ಒಂದು ಕಡೆ ಹೋದರೆ, ಸಿದ್ದರಾಮಯ್ಯ ಇನ್ನೊಂದು ಕಡೆ ಹೋಗುತ್ತಿದ್ದಾರೆ. ಇಬ್ಬರ ಪ್ರವಾಸಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಬಿಜೆಪಿಯವರು ನಮ್ಮಲ್ಲಿ ಅಸಮಾಧಾನ ಇದೆ ಅಂತ ಸುಮ್ಮನೆ ಜನರಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದರು.
ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತೇವೆ. ಎಷ್ಟು ಜನರಿಗೆ ಅನ್ನೋದನ್ನು ಮುಂದಿನ ಹಂತದಲ್ಲಿ ತಿಳಿಸುತ್ತೇನೆ. ನಾವು ಕೆಳ ಹಂತದಿಂದ ಸಂಘಟನೆ ಆರಂಭಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಮೈಸೂರಿಗೆ ಭೇಟಿ ನೀಡಿ, ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಭಾಗಿಯಾಗುತ್ತೇವೆ ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು.
ಮಹಾದಾಯಿ ವಿಚಾರದಲ್ಲಿ ಬಿಜೆಪಿಯವರು ಕರ್ನಾಟಕದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಮಹಾದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿಯವರು ಯಡಿಯೂರಪ್ಪನವರಿಗೆ ಏಕೆ ಪತ್ರ ಬರೆದರು? ಅದರಿಂದ ಏನು ಪ್ರಯೋಜನ? ಪತ್ರವನ್ನ ಪ್ರಧಾನಿ ಅವರಿಗೆ ಬರೆಯಬೇಕು. ಇಲ್ಲವಾದರೆ ಕೇಂದ್ರ ಜಲಮಂಡಳಿಗೆ ಪತ್ರ ಬರೆಯಬೇಕು. ಅಥವಾ ರಾಜ್ಯ ಮುಖ್ಯಮಂತ್ರಿಗಳಿಗೆ ಬರೆದರೆ ಅದು ಸರಿಯಾದ ಕ್ರಮ ಎಂದರು.
ಎಲ್ಲ ಬಿಟ್ಟು ಯಡಿಯೂರಪ್ಪನವರಿಗೆ ಪತ್ರ ಬರೆಯುವ ಮೂಲಕ ಕರ್ನಾಟಕದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಇದೊಂದು ದೊಡ್ಡ ಡ್ರಾಮಾ. ಈ ಡ್ರಾಮಾ ಕರ್ನಾಟಕದಲ್ಲಿ ವರ್ಕ್ ಔಟ್ ಆಗುವುದಿಲ್ಲ ಎಂದು ಕೆ.ಸಿ ವೇಣು ಗೋಪಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications