ಮೈಸೂರು: ಸ್ವ-ಪಕ್ಷದವರೊಂದಿಗೆ ಜಗಳ ಮಾಡಿದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು
ಮೈಸೂರು, ಏಪ್ರಿಲ್ 26: ದಿಗ್ಗಜ ನಾಯಕರುಗಳ ಸ್ಪರ್ಧೆಯಿಂದಾಗಿ ರಾಜ್ಯ ಮಾತ್ರವಲ್ಲದೆ ರಾಷ್ಟ್ರದ ಗಮನ ಸೆಳೆದಿರುವ ಮೈಸೂರು ಚುನಾವಣಾ ಅಖಾಡದಲ್ಲಿ ದಿನೇ ದಿನೇ ಬಿಸಿ ಏರುತ್ತಿದೆ. ಇದರ ಪರಿಣಾಮವಾಗಿಯೇ ಇಂದು ಜಿಲ್ಲೆಯ ಎರಡು ಕಡೆ ರಾಜಕೀಯ ಸಂಬಂಧಿ ಗಲಾಟೆ ನಡೆದಿದೆ.
ಇಂದು ನಗರದ ಕೆ.ಟಿ.ಸ್ಟ್ರೀಟ್ ನಲ್ಲಿ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಾಸು ಪರ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ನಡೆಸುವ ವೇಳೆ ಇಬ್ಬರು ಕಾಂಗ್ರೆಸ್ನ ಸ್ಥಳೀಯ ಮುಖಂಡರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. 37ನೇ ವಾರ್ಡ್ ನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಜನರ ಎದುರೇ ನಗರಪಾಲಿಕೆ ಸದಸ್ಯ ಪ್ರಶಾಂತ್ಗೌಡ ಹಾಗೂ ರಾಜೇಶ್ವರಿ ಶಿವಣ್ಣ ನಡುವೆ ವಾಗ್ವಾದ ನಡೆಸಿ ಕಿತ್ತಾಡಿಕೊಂಡಿದ್ದಾರೆ.
ಕಾರ್ಯಕರ್ತರ ಜಗಳ ತಾರಕ್ಕೇರಿದ ಕಾರಣ ವಾಸು ಅವರು ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ಅಲ್ಲಿಂದ ಹೊರಟಿದ್ದಾರೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಕೆಲ ವ್ಯಾಪಾರಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ಅಂಗಡಿ ಬಾಗಿಲುಗಳನ್ನು ಮುಚ್ಚಿದರು. ನಂತರ ಆ ಇಬ್ಬರೂ ಮುಖಂಡರನ್ನು ಸಮಾಧಾನಪಡಿಸಿ ಪ್ರಚಾರದಲ್ಲಿ ತೊಡಗುವಂತೆ ತಿಳಿಸಲಾಯಿತು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಲಷ್ಕರ್ ಠಾಣೆ ಪೊಲೀಸರು ಪ್ರಚಾರ ನಡೆಸುವ ಸಂದರ್ಭದಲ್ಲಿ ಕಾರ್ಯಕರ್ತರು ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ವಹಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ರಕ್ತ ಬರುವ ಹಾಗೆ ಹೊಡೆದಾಡಿಕೊಂಡ ಬಿಜೆಪಿ ಕಾರ್ಯಕರ್ತರು ಕೆ.ಆರ್.ನಗರದ ಬಿಜೆಪಿ ಅಭ್ಯರ್ಥಿ ಶ್ವೇತಾ ಗೋಪಾಲ್ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಿರ್ಲೆ ಶ್ರೀನಿವಾಸ್ ಗೌಡರ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಶ್ವೇತಾ ಗೋಪಾಲ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಶ್ರೀನಿವಾಸ ಗೌಡ ಅವರ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆದಿದ್ದು ಜಗಳ ಗಲಾಟೆಗೆ ತಿರುಗಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಸಿ.ವಿ.ಗುಡಿ ಜಗದೀಶ್ ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವವಾದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸ್ ಕೇಸು ದಾಖಲಾದ ಬಗ್ಗೆ ಮಾಹಿತಿ ಇಲ್ಲ.












Click it and Unblock the Notifications