Bengaluru-Mysuru Expressway: ವಾಹನ ಸವಾರರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಮೈಸೂರು, ಡಿಸೆಂಬರ್ 08: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಹಲವಾರು ದಿನಗಳಿಂದ ವಾಹನ ಸವಾರರು ಇಟ್ಟಿದ್ದ ಬೇಡಿಕೆಗೆ ಕೊನೆಗೂ ಸಹ ಒಪ್ಪಿಗೆ ದೊರೆತಿದ್ದು, ಈ ಯೋಜನೆಗೆ ಟೆಂಡರ್ ಕರೆಯಲಾಗುತ್ತದೆ. ಹೆದ್ದಾರಿ ನಡುವೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮೈಸೂರು ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್ನಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆ ಕುರಿತು ಸಂಸದರು ಮಾಹಿತಿಯನ್ನು ನೀಡಿದ್ದಾರೆ.
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಎನ್ಹೆಚ್-275 ಬೆಂಗಳೂರು-ಮೈಸೂರು ವಿಭಾಗದಲ್ಲಿ ಹೆಚ್ಚುವರಿ ಕಾಮಗಾರಿಗಳಗಾಗಿ ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಯಾವ ಯೋಜನೆಗಳು: ಸಂಸದರು ಮೈಸೂರು ರಿಂಗ್ ರಸ್ತೆ ಮತ್ತು ಬೆಂಗಳೂರು-ಮೈಸೂರು ಹೆದ್ದಾರಿ ನಡುವೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮಣಿಪಾಲ್ ಆಸ್ಪತ್ರೆ ಜಂಕ್ಷನ್ನಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ಬೂತ್ಗಳ ಪ್ರವೇಶ ಮತ್ತು ನಿರ್ಗಮನದ ನಿಬಂಧನೆಗಳ ಕುರಿತು ಮನವಿ ಮಾಡಿದ್ದರು. ಈ ಅನುಮೋದನೆಗಳಿಗೆ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಏನಿದು ಯೋಜನೆ?: ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಯೋಜನೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. "ಲೋಕಸಭೆ ಚುನಾವಣೆಗೂ ಮೊದಲು ಸಹ ಮಣಿಪಾಲ್ ಆಸ್ಪತ್ರೆ ಜಂಕ್ಷನ್ನಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಬೇಕು ಎಂದು ಜನರು ಬೇಡಿಕೆ ಇಟ್ಟಿದ್ದರು. ಚುನಾವಣೆ ಬಳಿಕವೂ ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು" ಎಂದರು.
"ಈಗ ಅದನ್ನು ಅಧಿಕೃತವಾಗಿ ಕೆಂಪೇಗೌಡ ವೃತ್ತ ಎಂದು ಕರೆಯುತ್ತಾರೆ. ಅಲ್ಲಿ ಫ್ಲೈ ಓವರ್ ಜಂಕ್ಷನ್ ಬೇಕಾಗಿದೆ ಎಂದು ಮನವಿ ಸಲ್ಲಿಸಿದ್ದೆವು. ಈ ಮನವಿಯನ್ನು ಸ್ವೀಕರಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಅವರ ಅನುಮತಿಯೊಂದಿಗೆ ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ" ಎಂದು ಸಂಸದರು ಹೇಳಿದರು.
"ಬೆಂಗಳೂರಿನಿಂದ ಮೈಸೂರಿಗೆ ಬೇಗ ಬರುತ್ತೆವೆ. ಮೈಸೂರಿನಿಂದ ಬೇಗ ಹೊರಟು ಹೋದಾಗ ಗಡಿ ಭಾಗದಲ್ಲಿ ಆಚೆ ಹೋಗಲು ತಡವಾಗುತ್ತಿದೆ ಎಂದು ಜನರು, ವಾಹನ ಸವಾರರು ಹೇಳುತ್ತಿದ್ದರು. ಈಗ ಫ್ಲೈ ಓವರ್ ನಿರ್ಮಾಣವಾಗಲಿದೆ, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ" ಎಂದು ಸಂಸದರು ತಿಳಿಸಿದರು.
"ಮೈಸೂರು-ಬೆಂಗಳೂರು ಹೆದ್ದಾರಿ ಟೋಲ್ ಬಗ್ಗೆ ಎಲ್ಲರೂ ಹೇಳುತ್ತಿದ್ದಾರೆ. ಮೈಸೂರಿನಿಂದ ಹೊರಟ ನಾವು ಕೇವಲ ಮಂಡ್ಯಕ್ಕೆ ಹೋಗಬೇಕು, ಚನ್ನಪಟ್ಟಣಕ್ಕೆ ಹೋಗಬೇಕು, ಬೆಂಗಳೂರಿನಿಂದ ಬರುವಾಗ ರಾಮನಗರಕ್ಕೆ ಹೋಗಬೇಕು, ಮಂಡ್ಯಕ್ಕೆ ಹೋಗಬೇಕು ಅದಕ್ಕೆ ಸೂಕ್ತವಾದ ಟೋಲ್ ದರ ನಿಗದಿ ಮಾಡಬೇಕು ಎಂಬ ಬೇಡಿಕೆ ಇತ್ತು" ಎಂದರು.
"ಇಷ್ಟು ದೂರಕ್ಕೆ ಎಷ್ಟಾಗುತ್ತದೆ ಅಷ್ಟು ಮಾತ್ರ ಟೋಲ್ ಶುಲ್ಕವನ್ನು ಪಡೆಯಬೇಕು ಎಂದು ವಾಹನ ಸವಾರರು ಬೇಡಿಕೆ ಇಟ್ಟಿದ್ದರು. ಇದಕ್ಕಾಗಿ 28 ಪ್ರವೇಶ, ನಿರ್ಗಮನ ಪಾಯಿಂಟ್ಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಅದರ ಜೊತೆಗೆ ಪ್ರವೇಶ/ ನಿರ್ಗಮನ ದ್ವಾರದಲ್ಲಿ ಟೋಲ್ ಬೂತ್ ಸ್ಥಾಪನೆ ಮಾಡಲಾಗುತ್ತದೆ. ಆಗ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತೀರೋ ಅಷ್ಟು ದೂರಕ್ಕೆ ಟೋಲ್ ಕಟ್ಟಿದರೆ ಸಾಕು" ಎಂದು ಸಂಸದರು ಮಾಹಿತಿ ನೀಡಿದರು.












Click it and Unblock the Notifications