Bengaluru-Mysuru Expressway: ಮಾರ್ಚ್ 12ರಂದು ಪ್ರಧಾನಿಯವರಿಂದ ದಶಪಥ ಹೆದ್ದಾರಿ ಉದ್ಘಾಟನೆ: ಪ್ರತಾಪ್ ಸಿಂಹ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಉದ್ಘಾಟನೆ ದಿನಾಂಕ ಬದಲಾಗಿದೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಕೊಟ್ಟ ಸ್ಪಷ್ಟನೆ ಏನು? ಇಲ್ಲಿದೆ ನೋಡಿ ವಿವರ.
ಮೈಸೂರು, ಮಾರ್ಚ್, 02: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಮಾರ್ಚ್ 11ರಂದು ಉದ್ಘಾಟನೆಯಾಗಬೇಕಿತ್ತು. ಆದರೆ ಇದೀಗ ದಶಪಥ ಉದ್ಘಾಟನೆ ದಿನಾಂಕ ಬದಲಾಗಿದ್ದು, ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯನ್ನು ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಿಸ್ ರಸ್ತೆ ಕೆಲವು ಕಡೆ ಪೂರ್ಣಗೊಳ್ಳಬೇಕಿದೆ. ಸರ್ವಿಸ್ ರಸ್ತೆ ಪೂರ್ಣಗೊಳ್ಳಲು ನ್ಯಾಯಾಲಯದಲ್ಲಿನ ಜಮೀನು ಕುರಿತ ಮೊಕದ್ದಮೆ ಬಾಕಿ ಇದೆ. ಅದು ತೀರ್ಮಾನವಾದ ಕೂಡಲೇ ಸರ್ವಿಸ್ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗುವುದು. ಹೆದ್ದಾರಿಯ ಒಂದು ಭಾಗದ ಟೋಲ್ ಸಂಗ್ರಹವನ್ನು ಮಾರ್ಚ್ 14ರವರೆಗೆ ಮುಂದೂಡಿದ್ದೇವೆ ಎಂದು ಹೇಳಿದರು.

ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ
ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಎಸ್ಪಿಜಿ ಅನುಮತಿ ನೀಡಿದರೆ ಸುಮಾರು 2 ಕಿಲೋ ಮೀಟರ್ ದೂರ ರೋಡ್ ಶೋ ಮಾಡಲು ಉದ್ದೇಶಿಸಿದ್ದೇವೆ. ರೋಡ್ ಶೋ ನಂತರ ಸಾರ್ವಜನಿಕ ಸಭೆಯು ಮದ್ದೂರು ಬಳಿಯ ಗೆಜ್ಜಲಗೆರೆಯಲ್ಲಿ ಆಯೋಜಿಸಲಾಗಿದೆ. ಹಾಗೆಯೇ ಬೆಂಗಳೂರು - ನಿಡಗಟ್ಟದವರೆಗೂ ಟೋಲ್ ಸಂಗ್ರಹಿಸಲಾಗುವುದು ಎಂದರು.
ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ
ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ಆದ ಮೈಸೂರು- ಊಟಿ ಹೈವೇ ರಸ್ತೆಗೆ ಸರ್ವಿಸ್ ರಸ್ತೆಯೇ ಇಲ್ಲ. ಈಗ ಇವರೆಲ್ಲಾ ಬೆಂಗಳೂರು- ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಸರ್ವಿಸ್ ರಸ್ತೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದೇವೆ. ಸರ್ವಿಸ್ ರಸ್ತೆಯೇ ಮಾಡದೆ ನೀವು ಟೋಲ್ ಸಂಗ್ರಹ ಹೇಗೆ ಆರಂಭಿಸಿದ್ದೀರಿ ಎಂದು ಕಾಂಗ್ರೆಸ್ನ ಎಚ್.ಸಿ.ಮಹದೇವಪ್ಪ ಅವರನ್ನು ಕೇಳಿ ಎಂದು ಟಾಂಗ್ ನೀಡಿದರು.

ಹೆದ್ದಾರಿಯ ಅಧಿಕೃತ ಉದ್ಘಾಟನೆಗೆ ದಿನಗಣನೆ ಶುರು
ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇ ಅಧಿಕೃತ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಯಾವ ವಾಹನಗಳಿಂದ ಎಷ್ಟೇಷ್ಟು? ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ. ಒಟ್ಟು 8,172 ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ 117ಕಿಲೋ ಮೀಟರ್ ನಿರ್ಮಾಣವಾಗಿದೆ. ಈ ಎರಡು ನಗರದ ಜನತೆಗೆ ಇದರಿಂದ ಭಾರಿ ಅನುಕೂಲವಾಗಲಿದೆ. ಸಮಯ ಉಳಿತಾಯವಾಗಲಿದ್ದು, ಕೆಲವೇ ಗಂಟೆಗಳಲ್ಲಿ ಪರಸ್ಪರ ನಗರವನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications