ಶಾಸಕರ ರಾಜೀನಾಮೆ ಬೆನ್ನಲ್ಲೇ ಉಪಚುನಾವಣೆಗೆ ಆಕಾಂಕ್ಷಿಗಳ ಸಿದ್ಧತೆ?

ಮೈಸೂರು, ಜುಲೈ 10: ರಾಜ್ಯ ರಾಜಕೀಯದ ಬಿಕ್ಕಟ್ಟು ಸದ್ಯಕ್ಕೆ ಸುಧಾರಿಸುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರು ತಮ್ಮ ಪಕ್ಷದ ನಾಯಕರ ಸಂಪರ್ಕ ಕಡಿದುಕೊಂಡು ಮುಂಬೈನಲ್ಲಿ ಆರಾಮಾಗಿದ್ದರೆ, ಇತ್ತ ಕ್ಷಣ ಕ್ಷಣಕ್ಕೂ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.

ಜೆಡಿಎಸ್ ‌ನಲ್ಲಿ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಅವರು ಅತೃಪ್ತರನ್ನು ಮನವೊಲಿಸಿ ಸರ್ಕಾರವನ್ನು ಗಟ್ಟಿ ಮಾಡಲು ಸಚಿವರಾದ ಜಿ.ಟಿ.ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ ಮತ್ತು ಬಾಲಕೃಷ್ಣ ಅವರನ್ನು ಡಿ.ಕೆ.ಶಿವಕುಮಾರ್ ಅವರೊಂದಿಗೆ ಮುಂಬೈಗೆ ಕಳುಹಿಸಿದ್ದಾರೆ.

 ಹುಣಸೂರಿನಿಂದ ಹಲವು ಆಕಾಂಕ್ಷಿಗಳು

ಹುಣಸೂರಿನಿಂದ ಹಲವು ಆಕಾಂಕ್ಷಿಗಳು

ಮೈತ್ರಿ ನಾಯಕರು ಸರ್ಕಾರವನ್ನು ಹೇಗೆ ಉಳಿಸಿಕೊಳ್ಳುವುದು ಎಂದು ತಲೆಕೆಡಿಸಿಕೊಂಡು ಕುಳಿತಿದ್ದರೆ, ಇತ್ತ ರಾಜೀನಾಮೆಯಿಂದ ತೆರವಾದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಜೆಡಿಎಸ್ ನಲ್ಲಿ ಆಕಾಂಕ್ಷಿಗಳು ಮುಗಿ ಬೀಳುತ್ತಿರುವುದು ಹೊಸ ಬೆಳವಣಿಗೆಯಾಗಿದೆ.

ಅತೃಪ್ತ ಶಾಸಕರು ನೀಡಿದ ರಾಜೀನಾಮೆಯನ್ನು ಸ್ಪೀಕರ್ ಇನ್ನೂ ಅಂಗೀಕರಿಸಿಲ್ಲ. ಆಗಲೇ ಹುಣಸೂರಿನಲ್ಲಿ ಎಚ್.ವಿಶ್ವನಾಥ್ ಅವರು ಪ್ರತಿನಿಧಿಸುತ್ತಿರುವ ಹುಣಸೂರು ಕ್ಷೇತ್ರದಿಂದ ಉಪಚುನಾವಣೆ ನಡೆದರೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಲವರು ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ ಎನ್ನಲಾಗುತ್ತಿದ್ದು, ಹುಣಸೂರು ಜೆಡಿಎಸ್ ವಲಯದಲ್ಲಿ ಕೆಲವರ ಹೆಸರು ಓಡಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

 ಪ್ರಜ್ವಲ್ ರೇವಣ್ಣ ಹೆಸರು

ಪ್ರಜ್ವಲ್ ರೇವಣ್ಣ ಹೆಸರು

ಸದ್ಯದ ಪರಿಸ್ಥಿತಿಯಲ್ಲಿ ಉಪ ಚುನಾವಣೆ ನಡೆದರೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೆಗೌಡರ ಪುತ್ರ ಎಂಡಿಸಿಸಿ ಬ್ಯಾಂಕಿನ ಅಧ್ಯಕ್ಷ ಹರೀಶ ಗೌಡರ ಹೆಸರು ಒಂದೆಡೆ ಕೇಳಿ ಬಂದರೆ, ಮತ್ತೊಂದೆಡೆ ಹಾಸನ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ರೇವಣ್ಣರವರ ಪುತ್ರ ಸಂಸದ ಪ್ರಜ್ವಲ್ ‌ರೇವಣ್ಣರವರ ಹೆಸರು ಕೂಡ ಕೇಳಿಬರುತ್ತಿದೆ.

ಇದಕ್ಕೆ ಕಾರಣವೂ ಇದೆ. ಪ್ರಜ್ವಲ್ ರೇವಣ್ಣ ಅವರು ತಾತ ಎಚ್.ಡಿ.ದೇವೇಗೌಡರಿಗೆ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟು ಹುಣಸೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ರಾಜ್ಯ ರಾಜಕೀಯಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಹುಣಸೂರು ಕ್ಷೇತ್ರದ ತುಂಬಾ ಓಡಾಡಿ ಜನರ ಗಮನಸೆಳೆದಿದ್ದರು. ಅಲ್ಲದೆ ಇಲ್ಲಿ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರವೂ ಇದೆ.

 ಜಿ.ಡಿ.ಹರೀಶ್ ಗೌಡ ಅಭಿಮಾನಿಗಳ ಸಂದೇಶ

ಜಿ.ಡಿ.ಹರೀಶ್ ಗೌಡ ಅಭಿಮಾನಿಗಳ ಸಂದೇಶ

ವಿಶ್ವನಾಥ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ವಿಚಾರ ಹೊರಬರುತ್ತಿದ್ದಂತೆಯೇ ಹುಣಸೂರು ಕ್ಷೇತ್ರದಲ್ಲಿ ಜಿ.ಡಿ.ಹರೀಶ್ ಗೌಡ ಅವರ ಕೆಲವು ಅಭಿಮಾನಿಗಳು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹರೀಶ್ ಗೌಡ ಸ್ಪರ್ಧಿಸಲಿ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಚರ್ಚೆಗಳು ಕೂಡ ನಡೆಯಲಾರಂಭಿಸಿದವು. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ. ಹರೀಶ್ ಗೌಡ ಅವರು ಆಕಾಂಕ್ಷಿಗಳಾಗಿದ್ದರೂ ಅಲ್ಲಿಗೆ ಪ್ರಜ್ವಲ್ ರೇವಣ್ಣ ಎಂಟ್ರಿ ಕೊಟ್ಟರೂ ಅಚ್ಚರಿ ಪಡುವಂತಿಲ್ಲ.

 ಮಾಜಿ ಶಾಸಕ ಮಂಜುನಾಥ್ ಸ್ಪರ್ಧೆ ಸಾಧ್ಯತೆ

ಮಾಜಿ ಶಾಸಕ ಮಂಜುನಾಥ್ ಸ್ಪರ್ಧೆ ಸಾಧ್ಯತೆ

ಇದು ಜೆಡಿಎಸ್ ‌ನ ಕಥೆಯಾದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಇಂಗಿತ ವ್ಯಕ್ತಪಡಿಸುವ ಸಾಧ್ಯತೆಯಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಹಿಂದೆ ಈ ಕ್ಷೇತ್ರದಲ್ಲಿ ಹತ್ತು ವರ್ಷ ಶಾಸಕರಾಗಿ ಕೆಲಸ ಮಾಡಿದ್ದರು. ಇನ್ನು ಸಿ.ಎಚ್.ವಿಜಯ್‌ಶಂಕರ್, ಜಿಪಂ ಸದಸ್ಯೆ ಪುಷ್ಪಅಮರನಾಥ್ ಅವರು ಕೂಡ ಟಿಕೆಟ್ ಆಕಾಂಕ್ಷಿ ಎನ್ನುತ್ತಿದ್ದಾರೆ.

ಅದು ಏನೇ ಇರಲಿ ಸದ್ಯದ ಸ್ಥಿತಿಯಲ್ಲಿ ರಾಜ್ಯದಲ್ಲಿ ಶಾಸಕರು ಮೇಲಿಂದ ಮೇಲೆ ರಾಜೀನಾಮೆ ನೀಡುತ್ತಿದ್ದು, ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಸ್ಥಳೀಯ ನಾಯಕರು ಅದೆಲ್ಲವನ್ನು ಬಿಟ್ಟು ಮುಂದೆ ನಡೆಯಬಹುದಾದ ಉಪಚುನಾವಣೆ ಬಗ್ಗೆ ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+