"ಕಲ್ಲಿನಲ್ಲಿರುವ ದೋಷದಿಂದ ಪ್ರತಿಮೆಯಲ್ಲಿ ಬಿರುಕು"
ಮೈಸೂರು, ಫೆಬ್ರವರಿ 20: ನಗರದ ಹೃದಯ ಭಾಗದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ನಿನ್ನೆ ಬಿರುಕು ಕಾಣಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇತಿಹಾಸ ಹಾಗೂ ಪುರಾತತ್ವ ತಜ್ಞ ಡಾ.ರಂಗರಾಜು ಇಂದು ಪ್ರತಿಮೆಯ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, "ಕಲ್ಲಿನಲ್ಲಿರುವ ದೋಷದಿಂದ ಸಣ್ಣ ಪ್ರಮಾಣದ ಬಿರುಕು ಪ್ರತಿಮೆಯಲ್ಲಿ ಕಂಡಿದೆ. ನಗರದ ಪ್ರಮುಖ ವೃತ್ತ ಇದಾಗಿರುವುದರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚು. ಇದರಿಂದಾಗಿ ಕಾರ್ಬನ್ ಡೈಆಕ್ಸೈಡ್, ಮಾನಾಕ್ಸೈಡ್ ಸೇರಿ ಪ್ರತಿಮೆ ಹಾಳಾಗುತ್ತಿದೆ" ಎಂದಿದ್ದಾರೆ.
"ಪ್ರತಿಮೆಯಲ್ಲಿ ಕತ್ತಿಗೆ ಬಳಸಿರುವ ಶಿಲೆ ಉತ್ತಮ ಗುಣಮಟ್ಟದ್ದಲ್ಲ. ಹೀಗಾಗಿ ಪ್ರತಿಮೆ ಪದೇ ಪದೇ ಹಾಳಾಗುತ್ತಿದೆ. ಸದ್ಯ ಪ್ರತಿಮೆಯಲ್ಲಿ ಸಣ್ಣ ಪ್ರಮಾಣದ ಬಿರುಕು ಇರುವುದರಿಂದ ಹೆಚ್ಚಿನ ಆತಂಕ ಇಲ್ಲ. ಬೇಸಿಗೆಯಲ್ಲಿ ಇದರ ಬಗ್ಗೆ ಹೆಚ್ಚು ಆತಂಕ ಇಲ್ಲ. ಆದರೆ ಮಳೆಗಾಲಕ್ಕೆ ತೊಂದರೆ ಆಗಬಹುದು. ಹೀಗಾಗಿ ಮಳೆಗಾಲದ ಹೊತ್ತಿಗೆ ಪ್ರತಿಮೆ ಸಂರಕ್ಷಣೆ ಮಾಡಿದರೆ ಒಳ್ಳೆಯದು. ಪ್ರತಿಮೆಯನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಬೇಕು. ಬಿರುಕಿನ ಜಾಗದಲ್ಲಿ ಅಮೃತಶಿಲೆಯ ಕಲ್ಲಿನ ಪುಡಿಯನ್ನು ಬಳಸಿ ಸರಿ ಪಡಿಸಬೇಕು" ಎಂದು ಹೇಳಿದರು.

ಪ್ರತಿಮೆಯ ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ನಿನ್ನೆಯಷ್ಟೇ ಸುದ್ದಿಯಾಗಿತ್ತು. ನಗರಪಾಲಿಕೆ, ಜಿಲ್ಲಾಡಳಿತದ ಬಳಿ ಪ್ರತಿಮೆ ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದರು.












Click it and Unblock the Notifications