ಹುಣಸೂರಿನಲ್ಲಿ ನಡುರಸ್ತೆಯಲ್ಲೊಂದು ವ್ಯಕ್ತಿಯ ಭೀಕರ ಹತ್ಯೆ
ಮೈಸೂರು, ಫೆಬ್ರವರಿ 09: ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮರ್ಮಾಂಗವನ್ನೇ ಕಡಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಿನ್ನೆ(ಫೆ.08) ಮಧ್ಯೆರಾತ್ರಿ ನಡೆದಿದೆ.
ಹತ್ಯೆಗೀಡಾದವನು ಹುಣಸೂರಿನ ರಂಗನಾಥ ಬಡಾವಣೆ ನಿವಾಸಿ ದಿವಂಗತ ಲಕ್ಷ್ಮಯ್ಯರ ಪುತ್ರ ಮಹೇಶ್ ಅಲಿಯಾಸ್ ಬೆಳ್ಳುಳ್ಳಿ ಮಹೇಶ್(45) ಎಂದು ಗುರುತಿಸಲಾಗಿದೆ.
ಪತ್ನಿಯೊಂದಿಗೆ ವಿಚ್ಛೇದನ ಪಡೆದಿದ್ದ ಮಹೇಶ್, ನಂತರ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧವನ್ನಿಟ್ಟುಕೊಂಡಿದ್ದರು. ವಿಚ್ಛೇದನದ ನಂತರ ಕೋರ್ಟಿನ ಆದೇಶದಂತೆ ಪತ್ನಿಗೆ ನೀಡಬೇಕಾದ ಜೀವನಾಂಶವನ್ನು ಮಹೇಶ್ ನೀಡುತ್ತಿರಲಿಲ್ಲ. ಆದ್ದರಿಂದ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಕಾರಣಕ್ಕೆ ಆತನನ್ನು ಜೈಲಿಗಟ್ಟಲಾಗಿತ್ತು.

ಐದು ತಿಂಗಳ ಜೈಲುವಾಸದ ನಂತರ ಅವರ ಪ್ರೇಯಸಿ ಆತನನ್ನು ಜಾಮೀನಿನ ಮೇಲೆ ಬಿಡಿಸಿಕೊಂಡುಬಂದಿದ್ದರು.
ಜೈಲಿನಿಂದ ಬಂದು ಇನ್ನು ಒಂದು ವಾರವಷ್ಟೆ ಕಳೆದಿದ್ದು, ಗುರುವಾರ ರಾತ್ರಿ ಮನೆಗೆ ತೆರಳುವ ವೇಳೆ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರಲ್ಲದೆ, ಮರ್ಮಾಂಗವನ್ನೇ ಕತ್ತರಿಸಿ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.
ಈ ರಸ್ತೆ ಮೂಲಕ ಹಾದು ಹೋದವರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹೇಶ್ ನನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಆಗಮಿಸಿದ್ದು ಮಹಜರು ನಡೆಸಿದ್ದು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ.












Click it and Unblock the Notifications