ಬನ್ನಿ ಮೈಸೂರಿನ ಚುಂಚನಕಟ್ಟೆ ಜಾನುವಾರು ಜಾತ್ರೆಗೆ...
ಮೈಸೂರು, ಜನವರಿ.06: ಇದು ಯಾಂತ್ರಿಕ ಯುಗ.. ದನ ಕರುಗಳನ್ನು ಸಾಕುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಲೇ ಬರುತ್ತಿದೆ. ಹಿಂದಿನ ಕಾಲದಲ್ಲಿ ದನಕರುಗಳೇ ಸರ್ವಸ್ವವಾಗಿತ್ತು. ಹೀಗಾಗಿ ಯಾವುದೇ ಜಾತ್ರೆ ನಡೆದರೂ ಅಲ್ಲಿ ಜಾನುವಾರುಗಳಿಗೆ ಪ್ರಾಶಸ್ತ್ಯವಿತ್ತು.
ಕೆಲವೆಡೆ ಜಾನುವಾರು ಜಾತ್ರೆ ನಿಂತು ಹೋಗಿದ್ದರೂ ಮತ್ತೆ ಕೆಲವೆಡೆ ಈಗಲೂ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಜಾತ್ರೆಗಳ ಪೈಕಿ ಚುಂಚನಕಟ್ಟೆ ಜಾತ್ರೆಯೂ ಒಂದಾಗಿದ್ದು, ಡಿಸೆಂಬರ್ 2ರಿಂದ ಆರಂಭವಾಗಿರುವ ಈ ಜಾತ್ರೆ ಜ.18ರವರೆಗೂ ನಡೆಯಲಿದೆ. ಚುಂಚನಕಟ್ಟೆಯು ಮೈಸೂರು ಜಿಲ್ಲೆಗೆ ಸೇರಿದ್ದು, ತಾಲೂಕು ಕೇಂದ್ರವಾದ ಕೆ.ಆರ್.ನಗರದಿಂದ 15 ಕಿ.ಮೀ. ದೂರದಲ್ಲಿದೆ.[ಪುಷ್ಪಲೋಕದಲ್ಲಿ ಮಿನುಗುತ್ತಿರುವ ಮೈಸೂರು ಅರಮನೆ]

ಜಾತ್ರೆಯಲ್ಲಿ ಜಾನುವಾರು ಜಾತ್ರೆಗೂ ಮಹತ್ವದ ಸ್ಥಾನವಿದ್ದು, ಸುತ್ತಮುತ್ತಲಿನ ಗ್ರಾಮ, ಜಿಲ್ಲೆಗಳಿಂದ ರೈತರು ತಮ್ಮ ಜಾನುವಾರುಗಳನ್ನು ತಂದಿದ್ದು ಎಲ್ಲೆಡೆ ಜಾನುವಾರುಗಳ ಮೇಳದಂತೆ ಗೋಚರಿಸುತ್ತಿದೆ. ಬಯಲಿನಲ್ಲಿ ಶಿಸ್ತುಬದ್ಧವಾಗಿ ಜಾನುವಾರುಗಳನ್ನು ಕಟ್ಟಲಾಗಿದ್ದು, ಅವುಗಳ ಆರೈಕೆಯಲ್ಲಿ ರೈತರು ತೊಡಗಿದ್ದಾರೆ. ನಾಟಿ ತಳಿಯಿಂದ ಆರಂಭವಾಗಿ ವಿವಿಧ ತಳಿಯ ಜಾನುವಾರುಗಳು ಜಾತ್ರೆಯ ಕೇಂದ್ರ ಬಿಂದುವಾಗಿದೆ.
ಸಾವಿರಾರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಎತ್ತುಗಳು ಇಲ್ಲಿವೆ. ಜೋಡಿ ಎತ್ತಿಗೆ 30ಸಾವಿರದಿಂದ 7ಲಕ್ಷರೂ.ವರೆಗೆ ಬೆಲೆಯಿದ್ದು, ವಿವಿಧ ಎತ್ತುಗಳು ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ, ತುಮಕೂರು ಸೇರಿದಂತೆ ನಾನಾ ಜಿಲ್ಲೆಗಳಿಂದ ಸುಮಾರು 15,೦೦೦ಕ್ಕೂ ಅಧಿಕ ಜೋಡಿ ಎತ್ತುಗಳು ಬಂದಿವೆ.[ಎಚ್ಚರ! ನಿಮ್ಮ ಚಲನವಲನ ದಾಖಲಾಗುತ್ತಿರುತ್ತದೆ]

ಇಲ್ಲಿ ಈಗ ಜಾನುವಾರುಗಳನ್ನು ಕೊಂಡುಕೊಳ್ಳುವ ವ್ಯಾಪಾರ ಜೋರಾಗಿಯೇ ಸಾಗಿದೆ. ಜಾತ್ರೆಯಲ್ಲಿ ಹಾಸನ ಜಿಲ್ಲೆಯ ಚಿಕ್ಕೇಗೌಡರ 7ಲಕ್ಷ ರೂ ಬೆಲೆ ಬಾಳುವ ಎತ್ತುಗಳು ಗಮನಸೆಳೆಯುತ್ತಿವೆ. ದಕ್ಷಿಣಭಾರತದಲ್ಲೇ ಹೆಸರುವಾಸಿವಾಗಿರುವ ಚುಂಚನಕಟ್ಟೆ ಜಾನುವಾರು ಜಾತ್ರೆಗೆ ದನಗಳನ್ನು ನೋಡಲು ಮತ್ತು ಕೊಂಡುಕೊಳ್ಳಲು ದೂರದ ಗದಗ, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗ, ವಿಜಾಪುರ, ದಾವಣಗೆರೆ, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲದೆ, ಆಂಧ್ರಪ್ರದೇಶ ಮಹಾರಾಷ್ಟ್ರ, ತಮಿಳುನಾಡು ಮೊದಲಾದ ರಾಜ್ಯಗಳಿಂದ ಜನ ಬಂದಿದ್ದು ಬಿಡಾರ ಹೂಡಿದ್ದಾರೆ.[ಆಟವಾಡಿಸಲು ಬಂದವಳು ಮಗು ಅಪಹರಿಸಿದಳು]
ಬೃಹತ್ ಅಲಂಕೃತ ಚಪ್ಪರದಡಿ ಜಾನುವಾರು ಕಂಡುಬರುತ್ತಿವೆ. ಇವುಗಳಿಗೆ ಹಾಲು, ರವೆ, ಸಿಹಿ ತಿನಿಸು ಹೀಗೆ ಭರ್ಜರಿಯಾಗಿಯೇ ರಾಜೋಪಚಾರ ನಡೆಯುತ್ತಿದೆ. ಒಟ್ಟಾರೆ ಚುಂಚನಕಟ್ಟೆಯ ಜಾನುವಾರು ಜಾತ್ರೆ ಕಳೆದು ಹೋದ ವೈಭವವನ್ನು ಮರುಕಳಿಸುವಂತೆ ಮಾಡುತ್ತಿದೆ.











Click it and Unblock the Notifications