ಚಾಮುಂಡಿ ಸನ್ನಿಧಿಯಲ್ಲಿ ಕಾಂಗ್ರೆಸ್ ಮುಕ್ತ ಘೋಷಣೆ ಮಾಡಿದ ಅಮಿತ್ ಶಾ
ಮೈಸೂರು, ಜವನರಿ 25 : ಕರ್ನಾಟಕ ಬಂದ್ ಬಿಸಿಯ ನಡುವೆಯೇ ಮೈಸೂರಿನಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆ ಸಮಾವೇಶ ನಡೆಯುತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 'ಕರ್ನಾಟಕ ಬಂದ್ ನಡೆಸಿ ಸರ್ಕಾರ ಇಂದಿನ ಸಮಾವೇಶ ನಡೆಸುವುದನ್ನು ತಡೆಯಲು ಯತ್ನಿಸಿತು' ಎಂದು ಆರೋಪಿಸಿದರು.

* ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆ ನೋಡಿ ಕಾಂಗ್ರೆಸ್ ಪಕ್ಷಕ್ಕೆ ಭಯ ಉಂಟಾಗಿದೆ. ಆದ್ದರಿಂದ, ಇಂದಿನ ಸಮಾವೇಶ ತಡೆಯಲು ಪ್ರಯತ್ನ ನಡೆಸಿತು.
* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಎಷ್ಟು ಬಲ ಪ್ರಯೋಗ ಮಾಡಿದರೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ.
* ಚಾಮುಂಡೇಶ್ವರಿ ದೇವಿಯ ಪವಿತ್ರ ಭೂಮಿಯಲ್ಲಿ ನಿಂತು ನಾನು ಹೇಳುತ್ತಿದ್ದೇನೆ. ಕರ್ನಾಟಕದ ಜನರು ಈ ಬಾರಿ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯುತ್ತಾರೆ.
* ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಎಸ್ಡಿಪಿಐ ಮೇಲಿನ ಕೇಸುಗಳನ್ನು ಸರ್ಕಾರ ವಾಪಸ್ ಪಡೆದಿದೆ. ಈ ಸರ್ಕಾರ ಹಿಂದೂ ವಿರೋಧಿಗಳನ್ನು ಬೆಂಬಲಿಸುತ್ತಿದೆಯೇ?
* ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದವರು ಪಾತಾಳದಲ್ಲಿ ಅಡಗಿದ್ದರು ಹಿಡಿದು ಶಿಕ್ಷೆ ನೀಡುತ್ತೇವೆ.
ಚಿತ್ರಗಳು : ಮೈಸೂರಿನಲ್ಲಿ ಅಮಿತ್ ಶಾ ಮೋಡಿ
* ಭ್ರಷ್ಟಾಚಾರ ಎಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಎಂದರೆ ಭ್ರಷ್ಟಾಚಾರ. ಇಂತಹ ಸರ್ಕಾರವನ್ನು ನಾವು ರಾಜ್ಯದಿಂದ ಕಿತ್ತೊಗೆಯೋಣ. ಇಲ್ಲಿ ಸುಮಾರು 40 ಸಾವಿರ ಜನರಿದ್ದೀರಿ. ನಿಮ್ಮ ಬಳಿ 70 ಲಕ್ಷ ಬೆಳೆ ಬಾಳುವ ವಾಚ್ ಇದೆಯೇ?
* ಸಿದ್ದರಾಮಯ್ಯ ಅವರು ಸಮಾಜವಾದಿ ಎಂದು ಹೇಳಿ ಕೊಳ್ಳುತ್ತಾರೆ. ಆದರೆ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಡೆಯುತ್ತಿದ್ದರೆ ಇವರು 70 ಲಕ್ಷ ಬೆಲೆ ಬಾಳುವ ವಾಚ್ ಧರಿಸಿಕೊಂಡು ಓಡಾಡುತ್ತಾರೆ.
* ಸಿದ್ದರಾಮಯ್ಯ ಸರ್ಕಾರ ಆಹಾರ, ಹಾಸಿಗೆ, ದಿಂಬು ಖರೀದಿಯಲ್ಲಿಯೂ ಭ್ರಷ್ಟಾಚಾರ ಮಾಡಿದೆ. ಸಂಪುಟದ ಹಲವು ಸಚಿವರು ಸಹ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.
* ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳುತ್ತಾ ಹೋದರೆ 7 ದಿನ ನಿರಂತರ ಭಾಷಣ ಮಾಡಬೇಕಾಗುತ್ತದೆ. ಗೋವಿಂದರಾಜು ಅವರ ಮನೆಯಲ್ಲಿ ಡೈರಿ ಸಿಕ್ಕ ಬಳಿಕ ಸಿದ್ದರಾಮಯ್ಯ ನಿದ್ದೆ ಹಾಳಾಗಿದೆ.
* ಸಿದ್ದರಾಮಯ್ಯ ನಮ್ಮದು ರೈತ ಸ್ನೇಹಿ ಸರ್ಕಾರ ಎಂದು ಹೇಳುತ್ತಾರೆ. ಆದರೆ, ರಾಜ್ಯದಲ್ಲಿ 2,500ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ.
* ಮೋದಿ ಸರ್ಕಾರ ಕರ್ನಾಟಕಕ್ಕೆ ಏನು ಮಾಡಿದೆ?, ಲೆಕ್ಕ ಕೊಡಿ ಎಂದು ದೆಹಲಿಗೆ ಬಂದು ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ. ಅಣ್ಣಾ ಸಿದ್ದರಾಮಯ್ಯ ಚುನಾವಣೆ ಬಂದಾಗ ಜನರ ಕೈಗೆ ನಾವು ಪ್ರತಿ ಮಾಹಿತಿ ಕೊಡುತ್ತೇವೆ.
* ನರೇಂದ್ರ ಮೋದಿ ಸರ್ಕಾರ ಕಾಂಗ್ರೆಸ್ ಸರ್ಕಾರ 60 ವರ್ಷಗಳಲ್ಲಿ ರಾಜ್ಯಕ್ಕೆ ನೀಡಿದ್ದಕ್ಕಿಂತ ಹೆಚ್ಚಿನ ಅನುದಾನವನ್ನು ನೀಡಿದೆ. 14ನೇ ಹಣಕಾಸು ಯೋಜನೆಯಲ್ಲಿ 2 ಲಕ್ಷಕ್ಕೂ ಅಧಿಕ ಕೋಟಿ ಹಣ ನೀಡಲಾಗಿದೆ.












Click it and Unblock the Notifications