ಪ್ರಧಾನಿ ಮೋದಿ ಆಗಮನ: ಮೈಸೂರಿನ ರಸ್ತೆಗಳಿಗೆ ಬಂತು ಜೀವ ಕಳೆ
ಮೈಸೂರು, ಜೂನ್ 9: ಅರಮನೆನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವುದು ಸಂಚಲನ ಸೃಷ್ಟಿಸಿದೆ. ಮಹಾನಗರಪಾಲಿಕೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ತೀವ್ರ ಚಟುವಟಿಕೆಯಿಂದ ಕೂಡಿದ್ದು, ಸರ್ವ ರೀತಿಯಲ್ಲಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಮೈಸೂರಿನ ಅರಮನೆ ಮೈದಾನದಲ್ಲಿ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಹಾಗಾಗಿ ಇದುವರೆಗೆ ಜಡ್ಡುಗಟ್ಟಿದ್ದ ಪಾಲಿಕೆ ಆಕ್ಟೀವ್ ಮೂಡ್ಗೆ ಬಂದಿದ್ದು ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ರಸ್ತೆ ಸೇರಿದಂತೆ ನಗರದ ಹೃದಯ ಭಾಗಗಳಲ್ಲಿ ಕಿತ್ತು ಹೋಗಿದ್ದ ರಸ್ತೆಗಳನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದೆ.
ಈಗಾಗಲೇ ಮಳೆ ನೀರು ಚರಂಡಿ, ಒಳ ಚರಂಡಿ, ಫುಟ್ ಪಾತ್ಗಳ ಸ್ವಚ್ಛತಾ ಕಾರ್ಯವನ್ನು ಮಹಾನಗರ ಪಾಲಿಕೆ ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಅದರಿಂದ ಪ್ರಧಾನಿಗಳ ಆಗಮನದಿಂದಲಾದರೂ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ನಾಗರಿಕರಿಗೂ ಅನುಕೂಲವಾಗಲಿದೆ.

ಹಗಲು ರಾತ್ರಿ ಎನ್ನದೇ ಕಾರ್ಯ
ಪ್ರಧಾನಿ ನರೇಂದ್ರ ಮೋದಿ ಅರಮನೆ ಅಂಗಳದಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿರುವುದರಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ದೊರೆತಿದ್ದು, ಹಿಂದೊಮ್ಮೆ ಸ್ವಚ್ಛ ನಗರಿ ಎಂಬ ಖ್ಯಾತಿ ಪಡೆದಿದ್ದ ನಗರವನ್ನು ಪ್ರಧಾನಿ ನೋಡಿ ಖುಷಿಪಡುವಂತೆ ಮಾಡುವ ಕಾರ್ಯ ಸಮಾರೋಪಾದಿಯಲ್ಲಿ ಸಾಗುತ್ತಿದೆ. ಮೈಸೂರು ಅರಮನೆ ಸುತ್ತಮುತ್ತಲಿನ ಪ್ರದೇಶ, ಪ್ರಧಾನಿಗಳು ಸಂಚರಿಸುವ ಮಾರ್ಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮಳೆ ನೀರು ಚರಂಡಿಗಳಲ್ಲಿ ಬೆಳೆದಿರುವ ಗಿಡ ಗಂಟೆಗಳು, ಒಳ ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಹಗಲು-ರಾತ್ರಿ ಎನ್ನದೇ ಕಾಮಗಾರಿ ನಡೆಸುತ್ತಿದ್ದಾರೆ.

ರಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್ನಲ್ಲಿ ಮೋದಿ ವಾಸ್ತವ್ಯ
ಪ್ರಧಾನ ಮಂತ್ರಿಗಳು ಸಾಗುವ ಮಂಡಕಳ್ಳಿ ವಿಮಾನ ನಿಲ್ದಾಣ, ನಂಜನಗೂಡು ರಸ್ತೆ, ಪ್ರಧಾನಿ ವಾಸ್ತವ್ಯ ಹೂಡಲಿರುವ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ರಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್ ಸುತ್ತಮುತ್ತಲ ರಸ್ತೆ ರಿಪೇರಿ, ಸ್ವಚ್ಛತಾ ಕೆಲಸ ಭರದಿಂದ ಸಾಗಿದೆ. ಜೂ.20ರಂದು ಸಂಜೆ ವಿಶೇಷ ವಿಮಾನದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ನರೇಂದ್ರ ಮೋದಿ ಅವರು ರಸ್ತೆಯ ಮೂಲಕ ಕಾರಿನಲ್ಲಿ ಬಂದು ರಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್ನಲ್ಲಿ ಅಂದು ರಾತ್ರಿ ವಾಸ್ತವ್ಯ ಹೂಡುವರು.
ಮರುದಿನ ಜೂ.21ರಂದು ಮುಂಜಾನೆ ಅರಮನೆ ಆವರಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಪ್ರಧಾನಿಗಳು, ನಂತರ ಮಾನಸ ಗಂಗೋತ್ರಿ ಆವರಣದಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೂ ಭೇಟಿ ನೀಡುವ ಸಾಧ್ಯತೆ (ಈ ಕಾರ್ಯಕ್ರಮ ಅಧಿಕೃತವಾಗಿ ನಿಗದಿ ಯಾಗಿಲ್ಲ) ಇರುವುದರಿಂದ ಎಂಜಿ ರಸ್ತೆ, ಬೋಗಾದಿ ರಸ್ತೆಗಳಲ್ಲೂ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ತೆರಳುವ ರಸ್ತೆಗಳ ರಿಪೇರಿ
ಅತೀ ಗಣ್ಯರು ಸಾಗುವ ರಸ್ತೆಗಳಿಗೆ ಡಾಂಬರೀಕರಣ, ಫುಟ್ಪಾತ್ ಒತ್ತುವರಿ ತೆರವು ಮೀಡಿಯನ್ ಸ್ವಚ್ಛತೆ, ಕರ್ಟ್ ಸ್ಟೋನ್ಗಳಿಗೆ ಬಣ್ಣ ಬಳಿಯುವುದು, ಬೀದಿದೀಪ ಅಳವಡಿಕೆಯಂತಹ ಕಾಮಗಾರಿಗಳು ತೀವ್ರ ಗತಿಯಿಂದ ಸಾಗಿವೆ. ಪಾಲಿಕೆ ಪೌರ ಕಾರ್ಮಿಕರ ಜತೆಗೆ ಬೇರೆಡೆಯಿಂದಲೂ ಕೆಲಸಗಾರರನ್ನು ಕರೆತಂದು ಮಳೆ ನೀರು ಮತ್ತು ಒಳಚರಂಡಿ ಸ್ವಚ್ಛತಾ ಕೆಲಸವನ್ನು ಹಗಲು-ರಾತ್ರಿಯೆನ್ನದೇ ಮಾಡಿಸುತ್ತಿರುವ ಪಾಲಿಕೆ ಅಧಿಕಾರಿಗಳು, ಫುಟ್ಪಾತ್ ಮೇಲಿನ ಪೆಟ್ಟಿಗೆ ಅಂಗಡಿ, ಜಾಹೀರಾತು ಫಲಕಗಳನ್ನು ತೆರವು ಗೊಳಿಸಿ ಸ್ವಚ್ಛಮಾಡಿಸುತ್ತಿದ್ದಾರೆ.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮೈಸೂರಿನ ರಿಂಗ್ ರಸ್ತೆ ಮೀಡಿಯನ್, ಸರ್ವಿಸ್ ರಸ್ತೆ ಬದಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಸುರಿದಿದ್ದ ಘನ ತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆಯಲ್ಲದೇ, ಅಕ್ಕಪಕ್ಕದಲ್ಲಿ ತಲೆ ಎತ್ತಿದ್ದ ಪೆಟ್ಟಿಗೆ ಅಂಗಡಿ ಹಾಗೂ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ

15 ಕೋಟಿ ರೂ. ಅನುದಾನ
ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವುದರಿಂದ ರಸ್ತೆ ಅಭಿವೃದ್ಧಿ, ಸ್ವಚ್ಛತೆ, ಫುಟ್ಪಾತ್ ಒತ್ತುವರಿ ತೆರವು, ರಸ್ತೆ ವಿಭಜಕಗಳಿಗೆ ಬಣ್ಣ ಬಳಿಯುವುದು, ಸರ್ಕಲ್ಗಳ ಸೌಂದರ್ಯೀಕರಣ ಮುಂತಾದ ಕಾಮಗಾರಿ ಕೈಗೊಳ್ಳಲು ಪಾಲಿಕೆಯಿಂದ 15 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತುರ್ತು ಕಾಮಗಾರಿಯಾಗಿರುವುದರಿಂದ ಈಗಾಗಲೇ ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಅದು ಏನೇ ಇರಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದ ಕೆಲಭಾಗಗಳು ಅಭಿವೃದ್ಧಿ ಕಾಣುತ್ತಿರುವುದಕ್ಕೆ ಸಾಂಸ್ಕೃತಿ ನಗರದ ಜನತೆಗೆ ಖುಷಿ ತಂದಿದೆ.












Click it and Unblock the Notifications