ಸ್ವಚ್ಛ ಸರ್ವೇಕ್ಷಣ್ ಗಷ್ಟೇ ಸೀಮಿತವಾಯ್ತೆ ಮೈಸೂರಿನ ಸ್ವಚ್ಛತಾ ಕಾರ್ಯ!
ಮೈಸೂರು, ಫೆಬ್ರವರಿ 18: ಸ್ವಚ್ಛನಗರಿ ಸ್ಥಾನ ನಿರ್ಧರಿಸಲು ಕೈಗೊಳ್ಳುವ ಸ್ವಚ್ಛತಾ ಸಮೀಕ್ಷೆ (ಸ್ವಚ್ಛ ಸರ್ವೇಕ್ಷಣ್-2019) ಕೊನೆಗೊಂಡು ಒಂದು ತಿಂಗಳು ಕಳೆಯುತ್ತಿದೆ. ಕಳೆದ ಸಲ ಕೈತಪ್ಪಿದ್ದ ಅಗ್ರಸ್ಥಾನ ಮರಳಿ ದೊರೆಯಬಹುದೆಂಬ ನಿರೀಕ್ಷೆ ನಗರದ ಜನರದು. ಆದರೆ ಸಮೀಕ್ಷೆ ನಡೆದು ಒಂದು ತಿಂಗಳು ಕಳೆದಿರುವಂತೆ ನಗರದ ರೂಪ ನಿಧಾನವಾಗಿ ಬದಲಾಗತೊಡಗಿದೆ.
ಹೌದು, ಕೆಲವು ಕಡೆಗಳಲ್ಲಿ ಸ್ವಚ್ಛತೆ ಮಾಯವಾಗುತ್ತಿದೆ. ಎಂದಿನಂತೆ ಸ್ವಚ್ಛತಾ ಕೆಲಸ ನಡೆಯುತ್ತಿದೆಯಾದರೂ ಎರಡು ಮೂರು ತಿಂಗಳ ಹಿಂದೆ ಇದ್ದಂತಹ ಉತ್ಸಾಹ ಈಗ ಕಂಡುಬರುತ್ತಿಲ್ಲ. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಕಡಿಮೆಯಾಗಿವೆ. ಇದರಿಂದ ನಗರದ ಕೆಲವು ಕಡೆ ಕಸದ ರಾಶಿ ಹೆಚ್ಚಿದೆ.
ಪೌರಕಾರ್ಮಿಕರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಉತ್ಸಾಹ ತಗ್ಗಿಲ್ಲ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರಾದರೂ ಆ ಮಾತನ್ನು ಪೂರ್ಣವಾಗಿ ನಂಬಲು ಜನರು ಸಿದ್ಧರಿಲ್ಲ. ಅಗ್ರಸ್ಥಾನ ಪಡೆಯಬೇಕು ಎಂಬ ಉದ್ದೇಶದಿಂದ ಮಾತ್ರ ಸ್ಚಚ್ಛತಾ ಕೆಲಸ ನಡೆಯಬೇಕೇ ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿ ಮೂಡಿದೆ.

ವರ್ಷವಿಡೀ ಒಂದೇ ಲಯದಲ್ಲಿ ಸ್ವಚ್ಛತಾ ಕೆಲಸ ನಡೆಯಬೇಕು ಎಂಬುದು ಪಾಲಿಕೆಯ ಪ್ರಯತ್ನ. ಆದರೆ ವಿವಿಧ ಕಾರಣಗಳಿಂದ ಅದು ಸಾಧ್ಯವಾಗುತ್ತಿಲ್ಲ. ಸ್ವಚ್ಛತಾ ಸಮೀಕ್ಷೆಯ ಅವಧಿ ಬರುತ್ತಿದ್ದಂತೆಯೇ ಎಲ್ಲರೂ ಎಚ್ಚೆತ್ತುಕೊಂಡಿದ್ದರು. ಡಿಸೆಂಬರ್, ಜನವರಿ ತಿಂಗಳಲ್ಲಿ ನಗರ ಸ್ವಚ್ಛತೆಯಿಂದ ನಳನಳಿಸುತ್ತಿತ್ತು. ಪೌರಕಾರ್ಮಿಕರು ಮರ- ಗಿಡಗಳಿಂದ ಉದುರುವ ಎಲೆಗಳನ್ನು ಬಿಡದೆ ಸ್ವಚ್ಛ ಮಾಡುತ್ತಿದ್ದರು. ಇದರಿಂದ ಎಲ್ಲೂ ಕಸ ಕಣ್ಣಿಗೆ ಬೀಳುತ್ತಿರಲಿಲ್ಲ.
ನವೆಂಬರ್ ಬಳಿಕ 3-4 ತಿಂಗಳು ಕಸರತ್ತು ನಡೆಸಿ ಸಮರೋಪಾದಿಯಲ್ಲಿ ಕೆಲಸ ಮಾಡುವುದಕ್ಕಿಂತ ವರ್ಷದುದ್ದಕ್ಕೂ ಏಕರೀತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಬೇಕು. ಹಾಗಾದಲ್ಲಿ ನಗರ ಸ್ವಚ್ಛವಾಗಿರುತ್ತದೆ. ಸಮೀಕ್ಷೆಯ ಅವಧಿಯಲ್ಲಿ ಕಸರತ್ತು ನಡೆಸುವ ಅಗತ್ಯವಿರುವುದಿಲ್ಲ ಎಂಬುದು ಜನರ ಹೇಳಿಕೆ.

ಪೌರ ಕಾರ್ಮಿಕರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಉತ್ಸಾಹ ತಗ್ಗಿಲ್ಲ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರಾದರೂ ಆ ಮಾತನ್ನು ಪೂರ್ಣವಾಗಿ ನಂಬಲು ಜನರು ಸಿದ್ಧರಿಲ್ಲ. ಅಗ್ರಸ್ಥಾನ ಪಡೆಯಬೇಕು ಎಂಬ ಉದ್ದೇಶದಿಂದ ಮಾತ್ರ ಸ್ಚಚ್ಛತಾ ಕೆಲಸ ನಡೆಯಬೇಕೇ ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿ ಮೂಡಿದೆ.












Click it and Unblock the Notifications