ಮಳೆಯೊಂದಿಗೇ ಕೊಚ್ಚಿಹೋಗಿದೆ ಬದುಕು; ಮುಂದೇನು?
ಮೈಸೂರು, ಆಗಸ್ಟ್ 13: ಕಳೆದ ಆರೇಳು ದಿನಗಳಿಂದ ನಿರೀಕ್ಷೆಗೂ ಮೀರಿ ಮಳೆ ಸುರಿದಿದೆ. ರಸ್ತೆ, ಗದ್ದೆ, ಹೊಂಡ, ಕಟ್ಟಡ ಎಲ್ಲವೂ ಜಲಮಯ. ಎಲ್ಲಿ ನೋಡಿದರೂ ನೀರು... ನೀರು... ನೀರು. ಆದರೆ ಪ್ರವಾಹ ಇಳಿದ ಬಳಿಕವೂ ಅಲ್ಲಿ ನೆಮ್ಮದಿಯಿಲ್ಲ. ಅದೆಷ್ಟೋ ಜನರ ಬದುಕೂ ನೀರಿನೊಂದಿಗೇ ಮುಳುಗಿದಂತಿದೆ.
ಪ್ರವಾಹಕ್ಕೆ ಅದೆಷ್ಟೋ ಗ್ರಾಮಗಳು ಅಕ್ಷರಶಃ ನಲುಗಿದವು. ನೆರೆ ಇಳಿದ ಬಳಿಕ ಓಡೋಡಿ ಬಂದು ಮನೆಯ ಬಾಗಿಲು ತೆರೆದರೆ ಒಳಗೆ ನಾಲ್ಕೈದು ಇಂಚುಗಳಷ್ಟು ಕೆಸರು ನಿಂತಿದೆ.
ಊಟದ ತಟ್ಟೆ, ಲೋಟ, ಹಾಸಿಗೆ, ಕಪಾಟು, ಟಿ.ವಿ, ಫ್ರಿಜ್ ಹೀಗೆ ಎಲ್ಲವೂ ನೀರುಪಾಲಾಗಿವೆ. ಅಲ್ಲಿನವರಿಗೆ ಎರಡು ದಿನಗಳಿಂದ ಮನೆ, ಬಟ್ಟೆ, ಪಾತ್ರೆ ಪಗಡಿ ಸ್ವಚ್ಛಗೊಳಿಸುವುದೇ ಸವಾಲಾಗಿದೆ. ಮನೆ, ಜಮೀನು ದಾಖಲೆಗಳಂತೂ ಎಲ್ಲಿ ಹೋಗಿವೆಯೆಂದು ಊಹಿಸಲೂ ಸಾಧ್ಯವಿಲ್ಲ. ಸದ್ಯ ಅವರ ಪರಿಸ್ಥಿತಿ ಹೇಗಿದೆ ಮುಂದೆ ಓದಿ...

ರಾತ್ರಿ ಇದ್ದಕ್ಕಿದ್ದಂತೆ ಹೆಚ್ಚಿತು ನೀರಿನ ಪ್ರಮಾಣ
ನೀರು ಕೇವಲ ಮನೆಯನ್ನು ಆವರಿಸಿದ್ದಲ್ಲ, ನಮ್ಮ ಬದುಕನ್ನೂ ಮುಳುಗಿಸಿದೆ. ರಾತ್ರಿ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಹೆಚ್ಚಾಯಿತು. ಪೊಲೀಸರು ಬಂದು ಕೂಡಲೇ ಮನೆಯಿಂದ ದೂರ ಹೋಗುವಂತೆ ತಿಳಿಸಿದರು. ನಾವು ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಹೋದೆವು. ಬೆಳಿಗ್ಗೆ ನೋಡಿದರೆ ಮನೆಯ ಚಾವಣಿ ಮಾತ್ರ ಕಾಣುತ್ತಿತ್ತು ಎಂದು ಉಕ್ಕಿ ಬರುತ್ತಿದ್ದ ಅಳುವನ್ನು ತಡೆಯುತ್ತ ಘಟನೆಯನ್ನು ವಿವರಿಸುತ್ತಾರೆ ಶಿವಮೊಗ್ಗದ ಮಂಜುನಾಥ್.

ಅನ್ನದಾತನ ಬದುಕು ಅಯೋಮಯ
ಇತ್ತ ರೈತನ ಬದುಕು ಹಸನಾಗಿಸುವ ಕೃಷಿ ಬೆಳೆಗಳು ನೆರೆಹಾವಳಿಯಿಂದ ಕೊಚ್ಚಿಕೊಂಡು ಹೊಗಿ ರೈತನ ಬದುಕಿನಲ್ಲಿ ಕತ್ತಲಾವರಿಸಿದೆ. ಕಳೆದೊಂದು ವಾರದಿಂದ ನೆರೆ ಆರ್ಭಟಕ್ಕೆ ನದಿ ತಟದ ಪ್ರದೇಶ ವಾಸಿಗಳ ಬದುಕು ದುಸ್ತರವಾಗಿದೆ. ನೆರೆ ಇಳಿದು ಹೋದರು ರೈತನ ಬದುಕನ್ನೇ ಕಸಿದುಕೊಂಡಿದೆ. ಹೊಲಗದ್ದೆಯಲ್ಲಿ ಭತ್ತದ ಸಸಿ ಕಾಣುವಲ್ಲಿ ರಾಡಿ ಮಣ್ಣಿನ ರಾಶಿ ಕಾಣುತ್ತಿದೆ. ರೈತನಿಗೆ ಕೃಷಿಯೇ ಜೀವಾಳ. ಆದರೆ ಮಳೆಯ ಅಬ್ಬರದಿಂದಾಗಿ ಶ್ರಮ ಪಟ್ಟು ಬಿತ್ತಿದ ಭತ್ತದ ಸಸಿಗಳು ನದಿಯ ಪಾಲಾಗಿವೆ. ಕಬ್ಬು ನೆಲಕ್ಕೆ ಹಾಸಿ ಮಲಗಿದೆ. ಅಡಿಕೆ, ಬಾಳೆ ಗಿಡಗಳು ಕೊಚ್ಚಿ ಹೋಗಿವೆ. ಹೀಗೆ ಎಲ್ಲವೂ ಅನ್ನದಾತನಿಗೆ ಪೆಟ್ಟು ನೀಡಿದ್ದು, ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆ ಮನೆ ಮಾಡಿದೆ.

ಬದುಕೋದು ಹೆಂಗೆ ಸ್ವಾಮಿ
ತಮ್ಮ ಬಡತನದ ನಡುವೆಯೆ ಚಿಕ್ಕ ಸೂರನ್ನು ಕಟ್ಟಿಕೊಂಡ ಜನತೆಗೆ ವರುಣನ ಆರ್ಭಟ ನಲುಗುವಂತೆ ಮಾಡಿದೆ. ತೆರೆದಿರುವ ಗಂಜಿ ಕೇಂದ್ರವು, ನೆರೆ ಇಳಿಯುವವರೆಗೆ ಅನ್ನ, ಆಶ್ರಯ ನೀಡಲಿದೆ. ನೆರೆ ಇಳಿದ ಮೇಲೆ ಸಂತ್ರಸ್ಥರು ತಾವು ಕಟ್ಟಿಕೊಂಡ ಸೂರಿಗೆ ಹೋಗಲೇಬೇಕು. ಆದರೆ ಇರುವ ಸೂರು ಸಹ ಪಾತಾಳಕ್ಕೆ ಮುಖ ಮಾಡಿದಾಗ ಹೋಗುವುದಾದರೂ ಎಲ್ಲಿ ಎಂಬ ಚಿಂತೆ ಸಂತ್ರಸ್ತರದ್ದಾಗಿದೆ. ಸರ್ಕಾರ ಸಮಿಕ್ಷೆ ನಡೆಸಿ ವರದಿ ನೀಡಿ ಪರಿಹಾರ ನೀಡುವುದಕ್ಕೆ ತಿಂಗಳು ಕಳೆಯುತ್ತದೆ. ಅಲ್ಲಿಯವರೆಗೆ ಸಂತ್ರಸ್ತರು ಆಶ್ರವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಬಹುದು. ಇರುವ ಆಹಾರ ಪದಾರ್ಥಗಳು ನೀರಿಗೆ ಕೊಚ್ಚಿ ಹೋಗಿ, ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಎಂಬ ಸ್ಥಿತಿ ಬಂದೊದಗಿದೆ.

ಕೆಟ್ಟ ವಾಹನಗಳನ್ನು ತಳ್ಳಿಕೊಂಡು ಗ್ಯಾರೇಜ್ ನತ್ತ ಓಟ
ಮಳೆಯಿಂದ ಹಾಳಾದ ದ್ವಿಚಕ್ರವಾಹನಗಳ ದುರಸ್ತಿಗೆ ಮಾಲೀಕರು ಗ್ಯಾರೇಜ್ಗಳಿಗೆ ತಂದು ಬಿಡುತ್ತಿದ್ದಾರೆ. ಎಂಜಿನ್, ಏರ್ಫಿಲ್ಟರ್, ಸೈಲೆನ್ಸರ್ಗಳಲ್ಲಿ ನೀರು ತುಂಬಿಕೊಂಡಿದೆ. ಚಾಲನೆಗೊಳ್ಳದ ಇಂತಹ ವಾಹನಗಳನ್ನು ತಳ್ಳಿಕೊಂಡು ಬಂದು ಬಿಟ್ಟು ಹೋಗುತ್ತಿದ್ದಾರೆ. ವಿಮೆ ಇರುವ ವಾಹನಗಳ ಮಾಲೀಕರು ವಿಮಾ ಪರಿಹಾರ ಪಡೆಯಲು ವಿಮಾ ಕಂಪನಿಗಳಿಗೆ ಅಲೆದಾಡುತ್ತಿದ್ದಾರೆ. ವಿಮಾ ಕಂಪನಿಗಳು ಇಂತಹ ಸಮಯದಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳೂ ಕೇಳಿಬಂದವು.

ಮಳೆ ಹೊಡೆತದಿಂದ ವಿಮಾ ಕಂಪೆನಿಗಳಿಗೆ ಜನರ ಅಲೆದಾಟ
ವಿಮೆ ಇರುವ ವಾಹನಗಳ ಮಾಲೀಕರು ವಿಮಾ ಪರಿಹಾರ ಪಡೆಯಲು ವಿಮಾ ಕಂಪನಿಗಳಿಗೆ ಅಲೆದಾಡುತ್ತಿದ್ದಾರೆ. ವಿಮಾ ಕಂಪನಿಗಳು ಇಂತಹ ಸಮಯದಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳೂ ಕೇಳಿಬಂದವು. ಹಲವು ಮನೆಗಳಲ್ಲಿನ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮಕ್ಕಳ ಅಂಕ ಪಟ್ಟಿ ಮತ್ತಿತರ ದಾಖಲೆಗಳು, ಶಾಲಾ ಸಾಮಗ್ರಿಗಳು, ಬಟ್ಟೆಗಳೆಲ್ಲ ನೀರಿನಲ್ಲಿ ಕೊಚ್ಚಿಹೋಗಿವೆ. ಮೇಜು, ಕುರ್ಚಿ, ಸೋಫಾ, ಡೈನಿಂಗ್ ಟೇಬಲ್ಗಳೂ ಆಕಾರ ಕಳೆದುಕೊಂಡಿವೆ. ಎಲೆಕ್ಟ್ರಾನಿಕ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳು ಹಾಳಾಗಿವೆ. ಟಿ.ವಿ, ಮಿಕ್ಸಿ, ವಾಷಿಂಗ್ ಮಷಿನ್, ಗ್ರೈಂಡರ್, ಐರನ್ ಬಾಕ್ಸ್, ಮೊಬೈಲ್ಗಳು ಕೂಡ ಕೆಟ್ಟಿವೆ. ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಕಾರಣ ಡೀಸೆಲ್ ಮೋಟರ್ ಬಳಸಿ ನೀರು ಹೊರ ಹಾಕಲಾಗುತ್ತಿದೆ.












Click it and Unblock the Notifications