ಜನರಿಗೆ ತಲೆನೋವು ತಂದ ಆಧಾರ್ ತಿದ್ದುಪಡಿ ಕೆಲಸ
ಮೈಸೂರು, ಜುಲೈ 3: ಆಧಾರ್ ಕಾರ್ಡಿನಲ್ಲಿ ಹೆಸರು ಬದಲಾವಣೆ, ವಿಳಾಸ ಬದಲಾವಣೆ ಹಾಗೂ ನವೀಕರಣಕ್ಕಾಗಿ ಸಾರ್ವಜನಿಕರು ಪರದಾಡುತ್ತಿದ್ದು, ಆಧಾರ್ ತಿದ್ದುಪಡಿ ಕೇಂದ್ರಕ್ಕೆ ಪ್ರತಿನಿತ್ಯ ಅಲೆದಾಡುತ್ತಿದ್ದಾರೆ. ತಾಲ್ಲೂಕಿನ ಕೇಂದ್ರಗಳಲ್ಲಿಯೂ ಪ್ರತಿದಿನ ನಸುಕಿನ 3 ಗಂಟೆಯಿಂದಲೇ ದೂರದ ಊರುಗಳಿಂದ ಬರುವ ನೂರಾರು ಜನರು ಬ್ಯಾಂಕ್ ಮುಂದೆ ಸರದಿಯಲ್ಲಿ ಬೆಳಿಗ್ಗೆ 9 ಗಂಟೆಯವರೆಗೂ ನಿಂತು ಟೋಕನ್ ಸಿಗದೇ ವಾಪಸ್ ಹೋಗುತ್ತಿದ್ದಾರೆ.
ನಗರದ ಶೇಷಾದ್ರಿ ರಸ್ತೆಯಲ್ಲಿರುವ ನಗರ ಪಾಲಿಕೆ ವಲಯ ಕಚೇರಿ ಆವರಣದಲ್ಲಿ ಮೈಸೂರು ಒನ್ ಕೇಂದ್ರದ ಮುಂದೆ ಬೆಳಗ್ಗೆ 5 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆದುಕೊಳ್ಳುತ್ತಿದ್ದಾರೆ. ಇಂತಹ ಸರತಿ ಸಾಲುಗಳು ಸಿದ್ಧಾರ್ಥನಗರ, ರಾಮಕೃಷ್ಣ ನಗರ, ಜಯನಗರ, ನಜರಾಬಾದ್, ಗೋಕುಲಂ ಬಡಾವಣೆಯಲ್ಲಿರುವ ಮೈಸೂರು ಶಾಖೆಗಳಲ್ಲಿಯೂ ಕಂಡುಬರುತ್ತಿವೆ. ವಿಶೇಷವಾಗಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಕೇಂದ್ರಗಳಲ್ಲೂ ಜನರು ಹೆಚ್ಚಾಗಿದ್ದಾರೆ. ನಗರದಲ್ಲಿರುವ 6 ಮೈಸೂರು ಒನ್ ಕೇಂದ್ರಗಳು ಮಾತ್ರವಲ್ಲದೆ, ಅಂಚೆ ಕಚೇರಿ ಮತ್ತು ಎಲ್ಲ ಬ್ಯಾಂಕ್ ಗಳಲ್ಲೂ ಆಧಾರ್ ಅಪ್ಡೇಟ್ ಮಾಡಲಾಗುತ್ತಿದೆ. ಆದರೆ ಜನರ ಸಾಲು ಮಾತ್ರ ಕರಗುತ್ತಿಲ್ಲ.
ಆಧಾರ್ ಕಾರ್ಡ್ ನಲ್ಲಿ ಜಾತಿ ಗೊಂದಲ; ಮದುವೆಯೇ ರದ್ದುಗೊಳಿಸಿದ ವರ
ಬಿಪಿಎಲ್ ಗೆ ಆಧಾರ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನ ಆಗಿದ್ದರೂ, ವಿತರಣೆ ಪೂರ್ಣಗೊಳ್ಳದ ಕಾರಣ ಈ ತಿಂಗಳ 31ರವರೆಗೂ ವಿಸ್ತರಿಸಲಾಗಿದೆ. ಹೀಗಾಗಿ ಜುಲೈ 1ರಂದು ಟೋಕನ್ ಪಡೆಯಲು ಸಾರ್ವಜನಿಕರು ಮುಗಿಬಿದ್ದಿದ್ದರು. ಬಹುತೇಕ ಜನರು ಮಕ್ಕಳೊಂದಿಗೆ ಬಂದು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು.
ಆಧಾರ್ ತಿದ್ದುಪಡಿ ಬಿಸಿ ವಿದ್ಯಾರ್ಥಿಗಳಿಗೂ ತಟ್ಟಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ 15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಅನ್ನು ನವೀಕರಣಗೊಳಿಸಬೇಕು ಎಂಬ ಕಾರಣದಿಂದ ವಿದ್ಯಾರ್ಥಿ ವೇತನದ ಅರ್ಜಿಗಳು ಸ್ವೀಕಾರವಾಗುತ್ತಿಲ್ಲ. ಅಲ್ಲದೇ 15 ವರ್ಷ ಮೇಲ್ಪಟ್ಟ ಮಕ್ಕಳ ಹೆಸರನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡಲು ಕೂಡ ಆಧಾರ್ ಅಪ್ ಡೇಟ್ ಕೇಳುತ್ತಿದ್ದು, ವಿದ್ಯಾರ್ಥಿಗಳು ಆಧಾರ್ ತಿದ್ದುಪಡಿ ಮಾಡಿಸಲು ಪರದಾಡುತ್ತಿದ್ದಾರೆ.
ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಬೆಳಿಗ್ಗೆ 4 ಗಂಟೆಗೆ ಇಲ್ಲಿಗೆ ಬಂದೆ. ನಾನು ಬರುವಾಗಲೇ 30ಕ್ಕೂ ಅಧಿಕ ಮಂದಿ ನಿಂತಿದ್ದು, ಟೋಕನ್ ಸಿಗುವುದು ಅನುಮಾನವಾಗಿದೆ. ಒಂದು ಸಣ್ಣ ತಿದ್ದುಪಡಿಗೆ ಇಷ್ಟೊಂದು ಪರದಾಡಬೇಕಾಗಿರುವುದು ದುರದೃಷ್ಟಕರ ಎನ್ನುತ್ತಾರೆ ನಂಜನಗೂಡಿನ ಶಿವರುದ್ರಸ್ವಾಮಿ.
ನಕಲಿ ಮತದಾನ ತಡೆಗೆ ಆಧಾರ್-ವೋಟರ್ ಐಡಿ ಲಿಂಕ್ ಮಾಡಿಸಿ: ನಿವೃತ್ತ ಜಡ್ಜ್ ಸಲಹೆ
ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹೀಗೆ ನಿರಂತರ ರಜೆ ದಿನಗಳು ಬಂದಿರುವುದರಿಂದ ಮತ್ತಷ್ಟು ತೊಂದರೆಯಾಗಿದೆ. ಆನ್ಲೈನ್ ಸರ್ವರ್ ಸಮಸ್ಯೆಯಿಂದಾಗಿ ವಿಳಂಬವಾಗುತ್ತಿದೆ. ಮೊದಲಿಗೆ ಬಂದವರಿಗೆ ಮಾತ್ರ ಅರ್ಜಿಗಳನ್ನು ವಿತರಣೆ ಮಾಡುವುದರಿಂದ ಜನರು ರಾತ್ರಿಯೇ ಬಂದು ಸರದಿಗೆ ನಿಲ್ಲುತ್ತಿದ್ದಾರೆ. ಮಳೆ, ಗಾಳಿ, ಚಳಿ ಲೆಕ್ಕಿಸದೇ ಸೊಳ್ಳೆ ಕಡಿಸಿಕೊಳ್ಳುತ್ತ ಆಧಾರ್ ಕೇಂದ್ರದ ಬಳಿ ಹೋಗಿ ಮಲಗಬೇಕಾಗಿದೆ.