ಒಂದು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಗುಮಾಸ್ತ ಎಸಿಬಿ ಬಲೆಗೆ
ಮೈಸೂರು, ಜೂನ್ 2: ಒಂದು ಲಕ್ಷ ರುಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ದ್ವಿತೀಯ ದರ್ಜೆ ಗುಮಾಸ್ತನೊಬ್ಬನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
Recommended Video
ಮೈಸೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಗುಮಾಸ್ತ ಶಿವಣ್ಣ ಅವರು ತಮ್ಮದೇ ಇಲಾಖೆಯ ಸಿಬ್ಬಂದಿಯೊಬ್ಬರಿಂದ ಒಂದು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕು ರಾವಂದೂರಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಎಚ್.ರಾಜಯ್ಯ ಎಂಬುವವರ ಮೇಲೆ ಹಲವು ಅವ್ಯವಹಾರದ ಆರೋಪಗಳಿದ್ದವು. ಅವರಿಗೆ ಮೇಲಧಿಕಾರಿಗಳು ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು.

ಈ ನೋಟಿಸ್ ಅನ್ನು ವಾಪಸ್ ಪಡೆಯಲು ಹಾಗೂ ಹಾಸ್ಟೆಲ್ ನ್ನು ತಪಾಸಣೆ ನಡೆಸದಿರಲು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜು ಅವರನ್ನು ಒಪ್ಪಿಸುವುದಾಗಿ ಹೇಳಿದ್ದ ಶಿವಣ್ಣ, ಒಟ್ಟು 1.5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದನು.
ಈ ಮೊದಲೇ 50 ಸಾವಿರ ಹಣವನ್ನು ರಾಜಯ್ಯ ನೀಡಿದ್ದರು. ಮತ್ತೆ ಒಂದು ಲಕ್ಷ ರೂ. ಹಣ ಕೊಡುವಂತೆ ಶಿವಣ್ಣ ಪಟ್ಟು ಹಿಡಿದಾಗ ರಾಜಯ್ಯ ಎಸಿಬಿಗೆ ದೂರು ನೀಡಿದರು.

ಉಳಿಕೆ ಒಂದು ಲಕ್ಷ ರೂ. ಹಣವನ್ನು ಮಂಗಳವಾರ ಪಡುವಾರಹಳ್ಳಿ ವೃತ್ತದಲ್ಲಿ ತೆಗೆದುಕೊಳ್ಳುವಾಗ ಶಿವಣ್ಣ ಅವರ ಮೇಲೆ ಎಸಿಬಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ಮುಂದಿನ ತನಿಖೆ ನಡೆಯುತ್ತಿದೆ.












Click it and Unblock the Notifications