ಚಿನ್ನ, ಬೆಳ್ಳಿ, ಲಾಕರ್, ನಗದು, ಆಸ್ತಿ.. ಎಸಿಬಿ ಬಲೆಗೆ ಬಿದ್ದ ‘ಕುಬೇರ’ ರಂಗನಾಥ್
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಮೈಸೂರು ಪಿಡಬ್ಲ್ಯೂಡಿ ಇಂಜಿನಿಯರ್ ರಂಗನಾಥ ನಾಯಕ್ ಗೆ ಸೇರಿದ ಬೆಂಗಳೂರು ಹಾಗೂ ಮೈಸೂರು ಮನೆಗಳ ಮೇಲೆ ಎ.ಸಿ.ಬಿ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ವಶಕ್ಕೆ ಪಡೆದಿದ್ದಾರೆ
ಮೈಸೂರು, ಮಾರ್ಚ್ 3: ಮೈಸೂರಿನಲ್ಲಿ ಗ್ರಾಮೀಣ ನೀರು ಪೂರೈಕೆ ಇಲಾಖೆಯ ಸುಪರಿಂಟೆಂಡೆಂಟ್ ಇಂಜಿನಿಯರ್ ರಂಗನಾಥ್ ಅವರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ಆಸ್ತಿ ಮತ್ತು ನಗದು ಪತ್ತೆಯಾಗಿದೆ. [ಈ ಸಪ್ತ ಭ್ರಷ್ಟರ ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುತ್ತೀರಿ!]

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ರಂಗನಾಥ ನಾಯಕ್ ಗೆ ಸೇರಿದ ಮನೆ ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು ಹಾಗೂ ಮೈಸೂರಿನ ಮನೆ, ಕುವೆಂಪು ನಗರದ ಕಛೇರಿ ಮತ್ತು ಚಿಕ್ಕಮಗಳೂರಿನ ಸ್ವಗ್ರಾಮ ಸೇರಿ ನಾಲ್ಕು ಕಡೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಆಸ್ತಿಪಾಸ್ತಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. [ಬೀದರ್: ತಾಲೂಕು ಪಂಚಾಯಿತಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ]

ಲಾಕರ್ ಪತ್ತೆ
ಎಸಿಬಿ ದಾಳಿಯ ವೇಳೆ ರಂಗನಾಥ್ ಮನೆಯಲ್ಲಿ ಲಾಕರ್ ಪತ್ತೆಯಾಗಿದ್ದು, ಶನಿವಾರ ಲಾಕರ್ ನ್ನು ಅಧಿಕಾರಿಗಳು ತೆರೆಯಲಿದ್ದಾರೆ. ಈಗಾಗಲೇ ದಾಳಿಯ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಹಣ ಮತ್ತು ಆಸ್ತಿ ದಾಖಲೆ ಪತ್ರಗಳು ಸಿಕ್ಕಿರುವುದರಿಂದ ಇದರೊಳಗೆ ಏನಿರಬಹುದು ಎಂಬುದು ಕುತೂಹಲ ಹುಟ್ಟಿಸಿದೆ.

ಕೆಜಿ ಕೆಜಿ ಚಿನ್ನ, ಬೆಳ್ಳಿ
ಮನೆಯಲ್ಲಿ ಸುಮಾರು 1 ಕೆಜಿಗೂ ಹೆಚ್ಚು ಚಿನ್ನಾಭರಣ ಸಿಕ್ಕಿದೆ. ಮನೆಯ ಮೂಲೆ ಮೂಲೆಯಲ್ಲಿ ಚಿನ್ನದ ಸರ, ನೆಕ್ಲೆಸ್, ಬಳೆ, ಬ್ರೇಸ್ಲೆಟ್, ಉಂಗುರಗಳು ದೊರಕಿವೆ. ಅಷ್ಟೆ ಅಲ್ಲದೆ 1 ಕೆಜಿಗೂ ಹೆಚ್ಚು ಬೆಳ್ಳಿ ಪದಾರ್ಥಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಎರಡೆರಡು ಮನೆ
ರಂಗನಾಥ್ ಗೆ ಸೇರಿದ ಮೈಸೂರಿನ ಯೋಗ ನರಸಿಂಹ ದೇವಸ್ಥಾನದ ಬಳಿ ಇರುವ ಮನೆ ಹಾಗೂ ಬೆಂಗಳೂರಿನ ವಿಜಯನಗರ ಮೊದಲನೇ ಹಂತದದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇವೆಲ್ಲಾ ಐಶಾರಾಮಿ ಮನೆಗಳಾಗಿವೆ. ಇವುಗಳ ಮೌಲ್ಯವೇ ಕೋಟಿಗೂ ಹೆಚ್ಚು ಎಂದು ಅಂದಾಜು ಮಾಡಲಾಗಿದೆ.

ಐಶಾರಾಮಿ ಕಾರು, ಬೈಕು
ರಂಗನಾಥ್ ಬೆಂಗಳೂರಿನಲ್ಲಿ ಮಡದಿ ಹೆಸರಿನಲ್ಲಿ ಹೊಸ ಅಪಾರ್ಟ್ಮೆಂಟ್ ಕಟ್ಟಿಸುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ 35ಲಕ್ಷ ರೂಪಾಯಿ, ಒಂದು ಕೆಟಿಎಂ ಬೈಕ್, ಮೂರು ಐಶಾರಾಮಿ ಕಾರುಗಳು, ಅಪಾರ ಪ್ರಮಾಣದ ದಾಖಲೆ ಪತ್ರಗಳು ಸಿಕ್ಕಿವೆ. ಈ ವರೆಗಿನ ಲೆಕ್ಕ ಪ್ರಕಾರ ಸುಮಾರು 60 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ.

ಐದು ಜಿಲ್ಲೆಗಳ ಎಸಿಬಿ ಅಧಿಕಾರಿಗಳು ಭಾಗಿ
ಮಂಡ್ಯ, ಮಡಿಕೇರಿ, ಚಾಮರಾಜನಗರ, ಹಾಸನ ಹಾಗೂ ಮೈಸೂರು ಜಿಲ್ಲೆಗಳ ಎಸಿಬಿ ಅಧಿಕಾರಿಗಳು ಒಟ್ಟಾಗಿ ದಾಳಿ ನಡೆಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಸೂರು ಎಸಿಬಿ ಎಸ್ಪಿ ಕವಿತಾ ಮತ್ತು ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
(ಫೋಟೋ ಕೃಪೆ -ನಂದನ್ ಎ)












Click it and Unblock the Notifications