ಮೈಸೂರಿನಲ್ಲಿ ಕುಡಿದ ಮತ್ತಿನಲ್ಲಿ ಅಣ್ಣನನ್ನೇ ಕೊಲೆ ಮಾಡಿದ ತಮ್ಮ
ಮೈಸೂರು, ಮೇ 3 : ಮದ್ಯಪಾನ ಮಾಡಿದ್ದ ಇಬ್ಬರ ಸಹೋದರರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ತಮ್ಮನೇ ಅಣ್ಣನ ಮೇಲೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಮೈಸೂರಿನ ಕೆ.ಆರ್.ನಗರದಲ್ಲಿ ನಡೆದಿದೆ.
ಇಲ್ಲಿನ ಆಂಜನೇಯ ಬಡಾವಣೆಯ ನಿವಾಸಿ ಲೇ.ಬಸವರಾಜು ಮತ್ತು ರೇಣುಕಮ್ಮ ದಂಪತಿಯ ಪುತ್ರ ಮೋಚಿ ರವಿ ಅಲಿಯಾಸ್ ರವಿಚಂದ್ರ (32) ಕೊಲೆಯಾದವರು, ವಿಜಯ್ ಕುಮಾರ್ ಕೊಲೆ ಮಾಡಿದಾತ. ಕಳೆದ ರಾತ್ರಿ ಸುಮಾರು 10 ಗಂಟೆಯ ವೇಳೆಯಲ್ಲಿ ಈ ಇಬ್ಬರು ಸಹೋದರರು ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ತಾಯಿ ರೇಣುಕಮ್ಮ ಬಿಡಿಸಲು ಮುಂದಾದಾಗ ಆಕೆಯ ಮೇಲೂ ಹಲ್ಲೆ ನಡೆಸಿದ್ದಾರೆ. ನಂತರ ಆಕೆ ಇವರಿಬ್ಬರನ್ನು ಬಿಟ್ಟು ಪಕ್ಕದ ಹೌಸಿಂಗ್ ಕಾಲೊನಿಯಲ್ಲಿದ್ದ ಮತ್ತೊಬ್ಬ ಮಗನ ಮನೆಗೆ ಹೋಗಿದ್ದರು. ನಂತರ ರಾತ್ರಿ 1 ಗಂಟೆಯ ತನಕವೂ ಈ ಇಬ್ಬರ ಮನೆಯಲ್ಲಿ ಜೋರಾಗಿ ಜಗಳವಾಗುತ್ತಿತ್ತು ಎಂದು ಅಕ್ಕಪಕ್ಕದ ನಿವಾಸಿಗಳಿಂದ ತಿಳಿದು ಬಂದಿದೆ.

ಬೆಳಿಗ್ಗೆ 9 ಗಂಟೆಯಾದರೂ ಮನೆಯಿಂದ ಯಾರು ಹೊರಬರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅಕ್ಕಪಕ್ಕದ ನಿವಾಸಿಗಳ ಮನೆಯ ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದ ರವಿಯ ಮೃತದೇಹವನ್ನು ಕಂಡು ಆತಂಕಗೊಂಡು ತಕ್ಷಣವೇ ಸ್ಥಳೀಯರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ನಂತರ ಸ್ಥಳಕಾಗಮಿಸಿದ ಪೊಲೀಸರು ತಮ್ಮನಿಗಾಗಿ ಹುಡುಕಾಟ ನಡೆಸಿ ಕೊನೆಗೆ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ ತಾಯಿ ಮೇಲೆ ಹಲ್ಲೆ ಮಾಡಿ ಕಳುಹಿಸಿದ ಅಣ್ಣನ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇಬ್ಬರೂ ಕುಡುಕರಾಗಿದ್ದು ಅವಿವಾಹಿತರಾಗಿದ್ದರು. ಪ್ರತಿನಿತ್ಯವೂ ಕುಡಿದು ಬಂದು ಜಗಳವಾಡುತ್ತಾ ಅಕ್ಕಪಕ್ಕದವರಿಗೆ ಕಿರಿಕಿರಿ ಉಂಟು ಮಾಡುತ್ತಲೇ ಇದ್ದರು ಎನ್ನಲಾಗಿದೆ.











Click it and Unblock the Notifications