ಅಪರಾಧ-ಅಪಘಾತ, ಮೈಸೂರಿನಲ್ಲಿ 2 ಪ್ರತ್ಯೇಕ ಪ್ರಮಾದಗಳು
ಮೈಸೂರು, ಫೆಬ್ರವರಿ 7 : ಜಡೇಜಾ ರವಿ ಕೊಲೆ ಪ್ರಕರಣದಲ್ಲಿ ಸಿಲುಕಿ ಇತ್ತೀಚೆಗೆ ಜೈಲಿನಿಂದ ಹೊರಬಂದ ರೌಡಿ ಶೀಟರ್ ಅಶೋಕ್ ಅಲಿಯಾಸ್ ಪೈ ಕೊಲೆಗೆ ಯತ್ನ ನಡೆದಿದೆ.
ಮಂಡ್ಯ ಜಿಲ್ಲೆ ಮಾದರಹಳ್ಳಿಯಲ್ಲಿ ಪತ್ನಿ ಮನೆಯಲ್ಲಿದ್ದ ಅಶೋಕ್ ಅಲಿಯಾಸ್ ಪೈ ಮೇಲೆ ಸೋಮವಾರ ತಡರಾತ್ರಿ ಮೂವತ್ತಕ್ಕೂ ಹೆಚ್ಚು ರೌಡಿಗಳು ಆಕ್ರಮಣವೆಸಗಿ ಹತ್ಯೆಗೆ ಯತ್ನಿಸಿದ್ದು, ಸುಮಾರು 30 ನಿಮಿಷ ಸೆಟಸಾಟ ನಡೆಸಿದ ಪೈ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.

ಆತನ ಹತ್ಯೆಯ ಸಂಚನ್ನು ಜಡೇಜಾ ಪರಮಾಪ್ತ ಮಂಜುನಾಥ್ ನಡೆಸಿರಬೇಕೆಂದು ಶಂಕಿಸಲಾಗಿದ್ದು, ಇದೀಗ ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ರೌಡಿ ನಿಗ್ರಹದಳ ರೌಡಿಶೀಟರ್ ಗಳ ಮೇಲೆ ಹದ್ದಿನ ಕಣ್ಣಿರಿಸಿದ್ದು, ಪ್ರಮುಖ ಬೀದಿ, ಪ್ರಮುಖ ವಸತಿಗೃಹಗಳ ತಪಾಸಣೆ ನಡೆಸಿದೆ.
ಪೈ ಹತ್ಯೆ ಯತ್ನ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕೆ.ಎಂ.ದೊಡ್ಡಿ ಪೊಲೀಸರು ಸ್ಥಳದಲ್ಲಿದ್ದ ಒಂದು ಮೊಬೈಲ್, ಲಾಂಗ್, ಖಾರದ ಪುಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಳೆ ವೈಷಮ್ಯವೇ ಪೈ ಕೊಲೆ ಯತ್ನಕ್ಕೆ ಕಾರಣ ಎನ್ನಲಾಗಿದ್ದು, ಮಂಜುನಾಥ್ ಮತ್ತವರ ಸಹಚರರನ್ನು ಬಂಧಿಸಲು ಪೊಲೀಸರು ಪಣ ತೊಟ್ಟಿದ್ದಾರೆ. ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿ ಸರ್ಪಗಾವಲು ಹಾಕಿದ್ದಾರೆ.
ಬೈಕ್-ಕಾರು ಡಿಕ್ಕಿ : ಕಾಲುವೆಗೆ ಉರುಳಿದ ಕಾರು
ಮೈಸೂರು: ಬೈಕ್ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಉರುಳಿ ಬಿದ್ದ ಪರಿಣಾಮ ಚಾಲಕನ ಸೊಂಟ ಮುರಿತಕ್ಕೊಳಗಾದ ಘಟನೆ ಕೆ.ಆರ್.ಪೇಟೆ ತಾಲೂಕಿನಲ್ಲಿ ಜರುಗಿದೆ.

ಕೆ.ಆರ್.ಪೇಟೆ ತಾಲೂಕಿನ ಗಾಂಧಿನಗರದಲ್ಲಿ ಬೈಕ್ ಮತ್ತು ಟ್ರಾಫಿಕ್ ಪಿಎಸ್ಐ ಚಲಿಸುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರು ಕಾಲುವೆಗೆ ಉರುಳಿ ಬಿದ್ದಿದೆ. ಮದ್ದೂರು ಟ್ರಾಫಿಕ್ ಠಾಣೆಯ ಪಿಎಸ್ಐ ಸವಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಯೋಗೇಶ್ ಸೊಂಟ ಮುರಿತಕ್ಕೊಳಗಾಗಿದ್ದಾರೆ. ಪಿಎಸ್ ಐ ಸವಿತಾ ನ್ಯಾಯಾಲಯಕ್ಕೆಂದು ಹಾಸನಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬೈಕ್ ಚಾಲಕ ಗೋವಿಂದ ಎಂಬವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಗಾಯಾಳುಗಳಿಗೆ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications