ಮೈಸೂರಿನಲ್ಲಿ ಟ್ರಯಲ್ ನೋಡುವುದಾಗಿ ಹೇಳಿ ಕಾರಿನೊಂದಿಗೆ ಪರಾರಿಯಾದ ಖದೀಮ
ಮೈಸೂರು, ಅಕ್ಟೋಬರ್. 23 -ಓಎಲ್ ಎಕ್ಸ್ ಮೂಲಕ ಮಾರಾಟಕ್ಕಿಟ್ಟಿದ್ದ ಕಾರನ್ನು ಟ್ರಯಲ್ ನೋಡುವುದಾಗಿ ಹೇಳಿ ತೆಗೆದುಕೊಂಡು ಹೋದ ವ್ಯಕ್ತಿಯೊಬ್ಬ ಅದನ್ನು ವಾಪಾಸ್ ತರದೆ ಪರಾರಿಯಾಗಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ.
ನಗರದ ಎನ್.ಆರ್.ಮೊಹಲ್ಲಾ ನಿವಾಸಿ ಮೆಹಬೂಬ್ ಖಾನ್ ಎಂಬುವರೇ ಸ್ಕೋಡಾ ಅಕ್ಟೋವಿಯಾ ಕಾರ್ ಕಳೆದುಕೊಂಡವರು. ಪರಾರಿಯಾದ ವ್ಯಕ್ತಿ ಅರ್ಜುನ್ ಎಂದು ತನ್ನ ಹೆಸರನ್ನು ಪರಿಚಯಿಸಿಕೊಂಡಿದ್ದಾನೆ. ಮೆಹಬೂಬ್ ಖಾನ್ ತಮ್ಮ ಕಾರನ್ನು ಮಾರುವ ಸಲುವಾಗಿ ಸುಮಾರು 15 ದಿನಗಳ ಹಿಂದಷ್ಟೇ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದರು.
ಇದನ್ನು ಗಮನಿಸಿದ ಅರ್ಜುನ್ ನನ್ನ ಬಳಿ ರಾಯಲ್ ಎನ್ ಫೀಲ್ಡ್ ದ್ವಿಚಕ್ರ ವಾಹನವಿದೆ. ಹೀಗಾಗಿ ಕಾರು ಹಾಗೂ ಬೈಕನ್ನು ಬದಲಾಯಿಸಿಕೊಂಡು ಉಳಿಕೆ ಹಣವನ್ನು ನೀಡುತ್ತೇನೆ ಎಂದು ಹೇಳಿದ್ದಾನೆ. ಅದಕ್ಕೆ ಮೆಹಬೂಬ್ ಅವರು ಒಪ್ಪಿಗೆ ನೀಡಿದ್ದಾರೆ.

ಅದರಂತೆ ಅ.15ರಂದು ಮಧ್ಯಾಹ್ನ ಸುಮಾರು 3.45 ಗಂಟೆಯಲ್ಲಿ ಸ್ಥಳಕ್ಕೆ ಬಂದ ಯುವಕನೊಬ್ಬ ನನ್ನ ಹೆಸರು ಅರ್ಜುನ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಂತರ ತನ್ನ ಬಳಿಯಿದ್ದ ಬೈಕನ್ನು ಮೆಹಬೂಬ್ ಗೆ ಕೊಟ್ಟು, ಟ್ರಯಲ್ ನೋಡುವಂತೆ ತಿಳಿಸಿದ್ದಾನೆ. ಇದೇ ವೇಳೆ ಮೆಹಬೂಬ್ ಕೂಡ ಕಾರನ್ನು ಟ್ರಯಲ್ ನೋಡಲು ಅರ್ಜುನ್ ಗೆ ಕೊಟ್ಟಿದ್ದಾರೆ.
ಮೆಹಬೂಬ್ ಅವರು ಬೈಕ್ ಮೂಲಕ ವರ್ತುಲ ರಸ್ತೆಗೆ ಹೋಗಿ ವಾಪಸ್ ಬಂದು ನಾಯ್ಡುನಗರ ಬಸ್ ನಿಲ್ದಾಣದ ಬಳಿ ಅರ್ಜುನ್ ಗಾಗಿ ಕಾದಿದ್ದಾರೆ. ಆತ ವಾಪಾಸ್ ಬರಲಿಲ್ಲ. ಸುಮಾರು ಅರ್ಧ ಗಂಟೆಯಾದರೂ ಆತ ವಾಪಸ್ ಬರದ ಕಾರಣ ಆತನ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆದರೆ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.
ಬೈಕ್ ಇರುವುದರಿಂದ ವಾಪಸ್ ಬರುತ್ತಾನೆ ಎಂದು ಕಾಯ್ದರು ಕೂಡ ಆತ ಬರಲಿಲ್ಲ. ನಂತರ ಆ ಬೈಕ್ ಕೂಡ ಕದ್ದ ಮಾಲು ಎಂದು ಮೋಸ ಹೋದ ಮೇಲೆ ಅರಿವಿಗೆ ಬಂದಿದೆ.
ನಂತರ ಮೆಹಬೂಬ್ ಖಾನ್ ಎನ್ಆರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.












Click it and Unblock the Notifications