ಸಾಲಮನ್ನಾ ಆದರೂ ಆತ್ಮಹತ್ಯೆ ಮಾಡಿಕೊಂಡ ಕೆ.ಆರ್. ನಗರದ ರೈತ
ಮೈಸೂರು, ಜುಲೈ 19: ಸಾಲಮನ್ನಾದ ಬಳಿಕವೂ ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಸಾಲಗಾರರ ಕಾಟದಿಂದ ಬೇಸತ್ತು ಸೋಮವಾರ ವಿಷಸೇವಿಸಿ ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಅರಕೆರೆ ಕೊಪ್ಪಲು ಗ್ರಾಮದ ನಿವಾಸಿ ಪುಟ್ಟಮಾದೇಗೌಡ(65) ಆತ್ಮಹತ್ಯೆಗೆ ಶರಣಾದ ರೈತ. ಇವರು ಸುಮಾರು 2 ಎಕರೆ ಜಮೀನನ್ನು ಹೊಂದಿದ್ದು, ಹೊಸಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1 ಲಕ್ಷ ಬೆಳೆ ಸಾಲ, ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ನವ ನಗರ ಅರ್ಬನ್ ಬ್ಯಾಂಕ್ ನಲ್ಲಿ ಚಿನ್ನದ ಅಡವಿಟ್ಟು 1.50 ಲಕ್ಷ ರೂ ಸಾಲ ಪಡೆದಿದ್ದರು. ಖಾಸಗಿಯಾಗಿ 2 ಲಕ್ಷದ ವರೆಗೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಿದ್ದರಾಮಯ್ಯ ಆರ್ಥಿಕ ನೆರವು
ಈ ಬಾರಿ ತಂಬಾಕು ಬೆಳೆ ಚೆನ್ನಾಗಿ ಆದರೆ ಒಂದಷ್ಟು ಸಾಲ ತೀರಿಸುವ ವಿಶ್ವಾಸದಲ್ಲಿದ್ದ ಅವರಿಗೆ ತಂಬಾಕು ಬೆಳೆ ಕೈ ಕೊಟ್ಟಿತ್ತು. ಇದರಿಂದ ನೊಂದ ಅವರು ತಮ್ಮ ಜಮೀನಿನ ಬಳಿ ಬೆಳೆಗಳಿಗೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದರು.
ವಿಷಯ ತಿಳಿದ ಮನೆಯವರು ಅವರನ್ನು ಕೆ.ಆರ್.ನಗರದ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ರೈತ ಪುಟ್ಟಮಾದೇಗೌಡರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.