ಸೆ.21 ರಿಂದ 26ರವರೆಗೆ ದಸರಾ ಕುಸ್ತಿ ಪಂದ್ಯಾವಳಿ: ಎಸ್ಪಿ ಚನ್ನಣ್ಣನವರ್
ಮೈಸೂರು, ಸೆಪ್ಟೆಂಬರ್ ೧: ಈ ಬಾರಿಯ ದಸರಾ ಕುಸ್ತಿ ಪಂದ್ಯಾವಳಿಗಳನ್ನು ಸೆಪ್ಟೆಂಬರ್ 21 ರಿಂದ 26ರವರೆಗೆ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರು ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರತಿ ವರ್ಷದಂತೆ ಈ ವರ್ಷವೂ ದೇವರಾಜ ಅರಸ್ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಅಲ್ಲದೆ ಸ್ಥಳೀಯ ನಾಡಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೈಸೂರಿನ ನಾಲ್ಕು ದಿಕ್ಕುಗಳಲ್ಲಿ ಮತ್ತು 2 ವಿಭಾಗಗಳಲ್ಲಿ ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಇದಲ್ಲದೆ ಕುಸ್ತಿ ಪಟುಗಳಿಗೆ ಚಾಮುಂಡಿ ಬೆಟ್ಟ ಹತ್ತುವ ಸ್ಪರ್ಧೆ, ಎರಡೂ ಕೈಗಳಿಂದ ಗದೆ ತಿರುಗಿಸುವ ಸ್ಪರ್ಧೆ, ದಂಡ ಮತ್ತು ಸಪೋರ್ಟ್ ಹೊಡೆಯುವ ಸ್ಪರ್ಧೆ, ಗರ್ಧನ್ ಕಲ್ಲು ಎತ್ತಿಕೊಂಡು ಬಸ್ಕಿ ಹೊಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮಹಿಳಾ ಹಾಗೂ ಪುರುಷ ಕುಸ್ತಿ ಪಟುಗಳಿಗೆ ಪಂಜ ಕುಸ್ತಿಯನ್ನೂ ಆಯೋಜಿಸಲಾಗಿದೆ ಎಂದು ಹೇಳಿದರು.
ಡಿಜಿಟಲ್ ಪಾವತಿ: ಮಿತವ್ಯಯ ಹಾಗೂ ಪಾರದರ್ಶಕತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಟಿಜಿಟಲ್ ಪಾವತಿ ಮೂಲಕ ಕುಸ್ತಿ ಪಟುಗಳಿಗೆ ಸಂಭಾವನೆ ನೀಡಲಾಗುವುದು.
ಕುಸ್ತಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಗರಡಿ ಮನೆಗಳನ್ನು ಗುರುತಿಸಿ ಜೀರ್ಣೋದ್ಧಾರ ಮಾಡಲಾಗುವುದು.
ಕುಸ್ತಿಯನ್ನೇ ವೃತ್ತಿಯಾಗಿಸಿಕೊಂಡಿರುವ ಯುವಕರಿಗೆ ಉಚಿತ ಊಟ ವಸತಿಯೊಂದಿಗೆ ಒಂದು ವರ್ಷ ತರಬೇತಿ ನೀಡಲಾಗುವುದು ಎಂದು ಚನ್ನಣ್ಣನವರ್ ತಿಳಿಸಿದರು.












Click it and Unblock the Notifications