ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಪೂಜೆಗೆ ಭಾರಿ ಬಂದೋಬಸ್ತ್
ಮೈಸೂರು, ಜುಲೈ 3: ಜುಲೈ 5ರಿಂದ ಆಷಾಢ ಪೂಜೆ ಆರಂಭಗೊಳ್ಳಲಿದ್ದು, ಚಾಮುಂಡಿ ಬೆಟ್ಟದ ಆವರಣದಲ್ಲಿ ನಾಲ್ಕು ಆಷಾಢ ಶುಕ್ರವಾರವೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತೆಗಾಗಿ ಎಸಿಪಿ, ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 1331 ಪೊಲೀಸರನ್ನು ನಿಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ, 8 ಮಂದಿ ಎಸಿಪಿಗಳು, 31 ಇನ್ಸ್ ಪೆಕ್ಟರ್ ಗಳು, 28 ಸಬ್ ಇನ್ಸ್ ಪೆಕ್ಟರ್ ಗಳು, 124 ಎಎಸ್ ಐಗಳು, 806 ಹೆಡ್ಕಾನ್ಸ್ ಟೇಬಲ್, ಕಾನ್ಸ್ ಟೇಬಲ್ ಗಳು, 160 ಮಹಿಳಾ ಪೇದೆಗಳು ಹಾಗೂ 174 ಹೋಂ ಗಾರ್ಡ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿರುವುದಾಗಿ ತಿಳಿಸಿದರು.
ಆಷಾಢ ಶುಕ್ರವಾರ ಹಿನ್ನೆಲೆ ಜಿಲ್ಲಾಡಳಿತದಿಂದ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಸಭೆ
ಕಮಾಂಡೋ ಪಡೆ, ಅಶ್ವಾರೋಹಿ ದಳ, 8 ಸಿಎಆರ್ ತುಕಡಿ, 4 ಕೆಎಸ್ ಆರ್ ಪಿ, 3 ಎಎಸ್ ಟಿ ತಂಡ, 4 ಆಂಬ್ಯುಲೆನ್ಸ್, 4 ಅಗ್ನಿಶಾಮಕ ದಳ, 2 ಇಂಟರ್ ಸೆಪ್ಟರ್ ವಾಹನ, ಮೊಬೈಲ್ ಕಮಾಂಡ್ ಸೆಂಟರ್ ವಾಹನ ಹಾಗೂ ಗರುಡಾ ವಾಹನಗಳನ್ನು ಬಳಸಿಕೊಳ್ಳಲಾಗಿದೆ ಎಂದರು. ಚಾಮುಂಡೇಶ್ವರಿ ದೇವಸ್ಥಾನ ಬಳಿ ಪ್ರತ್ಯೇಕ ಹೆಲ್ಪ್ ಲೈನ್, ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಜೊತೆಗೆ ತಾತ್ಕಾಲಿಕ ಬಸ್ ನಿಲ್ದಾಣ ಲಲಿತ ಮಹಲ್ ಹೆಲಿಪ್ಯಾಡ್ ನ ಪಾರ್ಕಿಂಗ್ ಸ್ಥಳದಲ್ಲಿ ಭದ್ರತಾ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು, ವಿದ್ಯುದ್ದೀಪದ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಪರಾಧ ತಡೆಗೆ ಮಫ್ತಿಯಲ್ಲಿ ವಿಶೇಷ ಪೊಲೀಸರ ತಂಡ ರಚಿಸಿದ್ದು, ಅಪರಾಧಿಗಳ ಮೇಲೆ ನಿಗಾ ವಹಿಸಲಿದ್ದಾರೆ. ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ಸರಗಳ್ಳರು, ಪಿಕ್ ಪಾಕೆಟ್ ಆರೋಪಿಗಳು ಬರುವ ಸಂಭವವಿರುವುದರಿಂದ ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದಲೂ ನುರಿತ ಕ್ರೈಂ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.