ಮೈಸೂರಿನಲ್ಲಿ ಆಟೋ ಮಾಲೀಕರ ಸಂಘದಿಂದ ಹಾರಾಡಿತು ಬೃಹತ್ ರಾಷ್ಟ್ರಧ್ವಜ
ಮೈಸೂರು, ಆಗಸ್ಟ್ 15: ಇಲ್ಲಿನ ಜೆಎಸ್ಎಸ್ ಆಸ್ಪತ್ರೆ ಬಳಿಯಿರುವ ಜಗದ್ಗುರು ಶ್ರೀ ಶಿವರಾತ್ರೀಶ್ವರ ಆಟೋ ಮಾಲೀಕರ ಸಂಘದ ವತಿಯಿಂದ ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನ ಮತ್ತು ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ಇಲ್ಲಿನ ಪ್ರಮುಖ ಆಕರ್ಷಣೆಯೇ ರಾಷ್ಟ್ರಧ್ವಜ. ಕಳೆದ 15 ವರ್ಷಗಳಿಂದ ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿರುವ ಸಂಘವು, ಮೊದಲ ಐದು ವರ್ಷಗಳ ಕಾಲ ಎಲ್ಲ ಆಟೋ ಚಾಲಕರ ಸಂಘದಂತೆಯೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ಇದಾದ ಬಳಿಕ ಸ್ವಲ್ಪ ಮಟ್ಟಿಗೆ ಆಚರಣೆಯಲ್ಲಿ ಬದಲಾವಣೆ ಮಾಡುವ ಮತ್ತು ರಾಷ್ಟ್ರಧ್ವಜಕ್ಕೆ ಒತ್ತು ನೀಡುವ ನಿರ್ಧಾರ ಕೈಗೊಳ್ಳಲಾಯಿತು.

ಕಳೆದೊಂದು ದಶಕದಿಂದ ಆ.14ರ ಮಧ್ಯರಾತ್ರಿ ಗಣ್ಯರನ್ನು ಕರೆಯಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಮಾಡುವುದಕ್ಕೆ ಮನ್ನಡಿ ಇಡಲಾಯಿತು.
ಇಷ್ಟೇ ಅಲ್ಲ, ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಉದ್ದದ ರಾಷ್ಟ್ರಧ್ವಜವನ್ನು ಭೂಮಿ ಮಟ್ಟದಿಂದ ನಾಲ್ಕು ಅಡಿ ಎತ್ತರದಲ್ಲಿ ಕಟ್ಟುವ ಪರಿಪಾಠ ಬೆಳೆಸಿಕೊಂಡು ಬರಲಾಯಿತು.
ಮೈಸೂರು ಅಗ್ರಹಾರದ ರಾಮಾನುಜ ರಸ್ತೆಯ ವೀರಶೈವ ಅನಾಥಾಲಯದಿಂದ ಆರಂಭವಾಗಿ ಅಗ್ರಹಾರದ ವೃತ್ತದವರೆಗೆ ರಾಷ್ಟ್ರಧ್ವಜವನ್ನು ಕಟ್ಟಲು ಆರಂಭಿಸಲಾಯಿತು. ಈ ಧ್ವಜದ ಉದ್ದ ಕಳೆದ ವರ್ಷ 10 ಸಾವಿರ ಅಡಿ ಇತ್ತು. ಈ ಬಾರಿ ಅದು 13 ಸಾವಿರಕ್ಕೇರಿದೆ. ಈ ಬೃಹತ್ ಧ್ವಜವನ್ನು ರಸ್ತೆಯ ಎರಡು ಬದಿಯಲ್ಲಿ ಕಟ್ಟಿರುವುದರಿಂದ ಆಕರ್ಷಕವಾಗಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.
ಈ ಬೃಹತ್ ಗಾತ್ರದ ಧ್ವಜವನ್ನು ಶಿವಸ್ವಾಮಿ ಅವರು ಹೊಲಿದು ಕೊಟ್ಟಿದ್ದಾರೆ. ಒಟ್ಟಾರೆ ಮೈಸೂರಿನಲ್ಲಿ ಆಚರಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆಗಳ ಪೈಕಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಆಟೋ ಮಾಲೀಕರ ಸಂಘದ ಆಚರಣೆ ವಿಭಿನ್ನವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
5 ಸಾವಿರ ವಿದ್ಯಾರ್ಥಿಗಳು, 3,300 ಅಡಿ ಉದ್ದದ ತ್ರಿವರ್ಣ ಧ್ವಜ:
5 ಸಾವಿರ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆ ಕೈಗೊಂಡರು. ಆ ನಂತರ 3,300 ಅಡಿ ಉದ್ದದ ತ್ರಿವರ್ಣ ಧ್ವಜ ಹಾರಿಸಿದರು. ಇದು ದಾಖಲೆಯ ಪುಟ ಸೇರಿತು. ಈ ಮೆರವಣಿಗೆ ಆಯೋಜಿಸಿದ್ದು ಎನ್ ಎಸ್ ಯುಐ. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಮೆರವಣಿಗೆ, ಮೋತಿ ವೃತ್ತದಲ್ಲಿ ಕೊನೆಗೊಂಡಿತು.












Click it and Unblock the Notifications