"ಮುಂಗಾರು ಹಂಗಾಮಿನಲ್ಲಿ 10.60 ಲಕ್ಷ ರೈತರ ಬೆಳೆ ಸಮೀಕ್ಷೆ ಗುರಿ"
ಮೈಸೂರು, ಆಗಸ್ಟ್ 15: ಮೈಸೂರು ಜಿಲ್ಲೆಯ 1324 ಗ್ರಾಮ ವ್ಯಾಪ್ತಿಯಲ್ಲಿ ಬರುವ 10.60 ಲಕ್ಷ ರೈತರ ತಾಕುಗಳ ಬೆಳೆ ಸಮೀಕ್ಷೆ ಮಾಡುವ ಗುರಿಯನ್ನು ಈ ಮುಂಗಾರು ಹಂಗಾಮಿನಲ್ಲಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಬನ್ನಿ ಮಂಟಪದ ಕವಾಯತು ಮೈದಾನದಲ್ಲಿ ನಡೆದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ, ಬಳಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಪ್ರಕೃತಿ ವಿಕೋಪ, ಕನಿಷ್ಠ ಬೆಂಬಲ ಬೆಲೆ ಯೋಜನೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಲ್ಲಿ ವಿಮಾ ಪರಿಹಾರ ಮೊತ್ತ ನಿರ್ಧರಿಸಲು ಈ ಬೆಳೆ ಸಮೀಕ್ಷೆಯನ್ನು ಉಪಯೋಗಿಸಲಾಗುವುದು ಎಂದರು. ಮೆಕ್ಕೆಜೋಳ ಬೆಳೆದಿರುವ ಸುಮಾರು 10ಲಕ್ಷ ರೈತರಿಗೆ ತಲಾ ಐದು ಸಾವಿರ ರೂ.ಗಳಂತೆ ಒಟ್ಟು 500ಕೋಟಿ ರೂ.ಪರಿಹಾರ ಘೋಷಿಸಿದೆ. ಅಲ್ಲದೆ ಕೆಎಂಎಫ್ ಮೂಲಕ 22,000ಮೆಟ್ರಿಕ್ ಟನ್ ಮೆಕ್ಕೆ ಜೋಳವನ್ನು ಪ್ರತಿ ಕ್ವಿಂಟಾಲ್ ಗೆ 1,760ರೂ.ದರದಲ್ಲಿ ನೇರವಾಗಿ ಖರೀದಿಸಲು ಕ್ರಮವಹಿಸಲಾಗಿದೆ ಎಂದರು.
74ನೇ ಸ್ವಾತಂತ್ರ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆ ಎಂದರೆ ನೆನಪಾಗುವುದು ಸ್ವಾತಂತ್ಯ ಹೋರಾಟಗಾರರು ಮಾಡಿದ ತ್ಯಾಗ ಮತ್ತು ಬಲಿದಾನ. ಅಭಿವೃದ್ಧಿ ವಿಚಾರದಲ್ಲಿ ಮೈಸೂರು ಜಿಲ್ಲೆ ಕರ್ನಾಟಕವೇ ಹೆಮ್ಮೆ ಪಡುವಂತಹ ಜಿಲ್ಲೆ. ಸ್ವಾತಂತ್ರ ಪೂರ್ವದಲ್ಲಿ ಮೈಸೂರಿನಲ್ಲಿ ಆಳ್ವಿಕೆ ನಡೆಸಿದ ಮಹಾರಾಜರ ಅಭಿವೃದ್ಧಿ ಕಾರ್ಯಗಳಿಂದಾಗಿ ಮೈಸೂರು ಜಿಲ್ಲೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರುವಾಸಿಯಾಗಿದೆ ಎಂದರು.

ದೇಶದಲ್ಲೇ ಮೊದಲು ಎನ್ನುವಂತಹ ಹಲವಾರು ಕೈಗಾರಿಕೆಗಳು ಮೈಸೂರು ಸಂಸ್ಥಾನದಲ್ಲಿ ಅಭಿವೃದ್ಧಿಗೊಂಡವು. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣಾರ್ಥವಾಗಿ ಅವರ ಹೆಸರಿನಲ್ಲಿ ಪ್ರತಿವರ್ಷ 10 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಸತ್ಕಾರ್ಯವನ್ನು ಘೋಷಿಸಿದ್ದೇನೆ. ಈಗಾಗಲೇ ಪ್ರಶಸ್ತಿಗೆ ಗಣ್ಯರನ್ನು ಆಯ್ಕೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.












Click it and Unblock the Notifications