ನೀರವ್ ಮೋದಿಗೂ ನಮ್ಮ ಮೈಸೂರಿಗೂ ಏನಿದು ಲಿಂಕು..!?
ಮೈಸೂರು, ಫೆಬ್ರವರಿ 24 : ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಸುಮಾರು 11,000 ಕೋಟಿ ರೂ. ಗಳ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಗೂ, ನಮ್ಮ ಮೈಸೂರಿಗೂ ಸಂಬಂಧವಿದೆಯಾ? ಹಾಗೊಂದು ಸುದ್ದಿ ಈಗ ಬೆಳಕಿಗೆ ಬಂದಿದೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ರೂವಾರಿಯಾದ ನೀರವ್ ಮೋದಿ ಬಿಸಿನೆಸ್ ಪಾರ್ಟನರ್ ಆದ ಗೀತಾಂಜಲಿ ಜ್ಯುವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಚೊಕ್ಸಿ ಮೈಸೂರಿನ ಜ್ಯುವೆಲರ್ ಒಬ್ಬರಿಗೆ ವಂಚನೆ ಮಾಡಿರುವ ಬಗ್ಗೆ ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ!
ಗೀತಾಂಜಲಿ ಜ್ಯುವೆಲ್ಸ್ ಹಲವರು ಪ್ರಾಂಚೈಸಿಗಳ ಮಾಲೀಕರ ಪೈಕಿ ಮೈಸೂರಿನ ಜುವೆಲರ್ ಅಮಿತ್ ಕುಮಾರ್ ಸಹ ಒಬ್ಬರಾಗಿದ್ದರು. ಗೀತಾಂಜಲಿ ಬ್ರ್ಯಾಂಡ್ ವ್ಯಾಪಾರಕ್ಕೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ದೇಶದಾದ್ಯಂತ ಹಲವು ಉದ್ದಿಮೆದಾರರು ತಲಾ 5 ರಿಂದ 25 ಕೋಟಿ ರೂ. ಗಳ ಹಣವನ್ನುಹೂಡಿದ್ದರು.

ಒಡಂಬಡಿಕೆ ಕರಾರು ಪ್ರಕಾರ ಪ್ರತಿ ತಿಂಗಳು ತಮ್ಮ ಠೇವಣಿ ಮೇಲಿನ ಪಾವತಿ ಆಧರಿಸಿ ಚಿನ್ನ ಮತ್ತು ವಜ್ರವನ್ನು ಪೂರೈಸಬೇಕು. ಮೂಲಗಳ ಪ್ರಕಾರ ಗೀತಾಂಜಲಿ ಜುವೆಲ್ಸ್ ಪ್ರತಿನಿಧಿಗಳು ಜ್ಯುವೆಲರಿ ವಸ್ತುಪ್ರದರ್ಶನಗಳನ್ನು ನಡೆಸಿ ಗ್ರಾಹಕರು ಮತ್ತು ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದಾಗಿ ತಿಳಿದು ಬಂದಿದೆ.
ಕಲಾಶ್ ಡಿ ಗೋಲ್ಡ್ ಜುವೆಲರ್ಸ್ ನಿರ್ದೇಶಕರಲ್ಲೊಬ್ಬರಾದ ಅಮಿತ್ ಕುಮಾರ್ ಮಾಹಿತಿ ನೀಡಿ, ಗೀತಾಂಜಲಿ ಜ್ಯುವೆಲ್ಸ್ ಫ್ರಾಂಚೈಸಿ ತೆರೆಯಲು ಒಪ್ಪಂದ ಮಾಡಿಕೊಂಡಿದ್ದೆ. ಮೂರು ವರ್ಷಗಳಲ್ಲಿ ಆ ಗುತ್ತಿಗೆಗೆ ಐದು ಕೋಟಿ ರೂ, ಠೇವಣಿಯಾಗಿರಿಸಿ ಫ್ರಾಂಚೈಸಿ ಆರಂಭಿಸಲಾಗಿತ್ತು. ಒಡಂಬಡಿಕೆ ಪ್ರಕಾರದಂತೆ ಮೂರು ವರ್ಷದ ಅವಧಿ ಮುಗಿದ ಮೇಲೆ 4 ಕೋಟಿ ರೂ.ಗಳನ್ನು ನಮಗೆ ಕೊಡಲಾಗಿತ್ತು. ಉಳಿದ ಹಣಕ್ಕೆ ಗೀತಾಂಜಲಿ ಚೆಕ್ ನೀಡಲಾಗಿತ್ತು ಎಂದು ಅವರು ತಿಳಿಸಿದರು.
ನಾನು ಹಣ ಪಡೆಯಲು ಹೋದಾಗ ಐಸಿಐಸಿಐ ಬ್ಯಾಂಕ್ ಚೆಕ್ ಬೌನ್ಸ್ ಆಯಿತು. ದೂರವಾಣಿ ಮಾಡಿದರೆ ಕಂಪನಿಯಿಂದ ಸೂಕ್ತ ಉತ್ತರ ಸಿಗಲಿಲ್ಲವಾದ್ದರಿಂದ, ಅನಿವಾರ್ಯವಾಗಿ ನಾನು ಚೆಕ್ ಬೌನ್ಸ್ ಕೇಸ್ ಹಾಕಬೇಕಾಯಿತು ಎನ್ನುತ್ತಾರೆ ಅಮಿತ್ ಕುಮಾರ್. ಸದ್ಯ ಪ್ರಕರಣ ಈಗ ಮೈಸೂರಿನ ನಾಲ್ಕನೇ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿದ್ದು, 1 ಕೋಟಿ ರೂ ಚೆಕ್ ನೀಡಿದ್ದ ಚೊಕ್ಸಿ ಆರೋಪಿಯಾಗಿದ್ದಾರೆ. ಗೀತಾಂಜಲಿ ಜ್ಯುವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಚೊಕ್ಸಿ ವಿರುದ್ಧ ಮೂಲತಃ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಚೆಕ್ ಬೌನ್ಸ್ ಪ್ರಕರಣವಾದರೇ ಸ್ಥಳದಲ್ಲೇ ದೂರು ದಾಖಲಿಸಬೇಕಾಗಿರುವುದರಿಂದ, ಈ ಪ್ರಕರಣವನ್ನು ಮೈಸೂರಿಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications