ವಿಷ ಪ್ರಸಾದವನ್ನು ಉಣಿಸಲು ಅಂಬಿಕಾ ಮುಂದಾಗಿದ್ದಾದರೂ ಏಕೆ? ಸ್ವಾಮೀಜಿಗೂ, ಈಕೆಗೂ ಏನು ಸಂಬಂಧ?
ಮೈಸೂರು, ಡಿಸೆಂಬರ್ 18 : ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರು ಬಲಿಯಾಗಿದ್ದು, ಇನ್ನು 100 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರಗತಿಯಲ್ಲಿ ತನಿಖೆಯೂ ಸಹ ನಡೆಯುತ್ತಿದೆ.
ಇತ್ತ ನಿನ್ನೆಯೇ ಕೊಳ್ಳೇಗಾಲ ಡಿವೈಎಸ್ಪಿ ಕಚೇರಿಯಲ್ಲಿ ಸಾಲೂರು ಮಠದ ಕಿರಿಯ ಶ್ರೀ ಇಮ್ಮಡಿ ಮಹದೇವಸ್ವಾಮಿ, ಟ್ರಸ್ಟಿ ಮಾದೇಶ್ ಹಾಗೂ ಈತನ ಪತ್ನಿ ಅಂಬಿಕಾರನ್ನು ತೀವ್ರ ವಿಚಾರಣೆಗೆ ಒಡ್ಡಲಾಗಿತ್ತು. ಖುದ್ದು ಐಜಿ, ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಪ್ರಕರಣದ ತನಿಖಾಧಿಕಾರಿ ಪುಟ್ಟಮಾದಯ್ಯ ವಿಚಾರಣಾ ತಂಡದಲ್ಲಿದ್ದು ವಿಚಾರಣೆ ನಡೆಸಿದ್ದರು. ಇದೇ ವೇಳೆ ಅಂಬಿಕಾ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ತಿನ್ನುವ ಪ್ರಸಾದಕ್ಕೆ ವಿಷ ಹಾಕಿದ್ದು ನಾನೇ: ತಪ್ಪೊಪ್ಪಿಕೊಂಡ ಮಹಿಳೆ?
ಹಾಗಾದರೇ ಯಾರು ಅಂಬಿಕಾ? ವಿಷವಿಟ್ಟಿದ್ದಾರೂ ಏಕೆ? ಎಂಬ ಪ್ರಶ್ನೆ ಮೂಡುತ್ತಿದೆ. ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲೂ ಮುಂದಡಿಯಿಡುತ್ತಿದ್ದರು. ಇದೇ ಕಾರಣಕ್ಕಾಗಿ ಇವರನ್ನು ಕಸ್ಟಡಿಗೆ ಪೊಲೀಸರು ತೆಗೆದುಕೊಂಡಿದ್ದಾರೆ. ಅಲ್ಲದೇ ಇಮ್ಮಡಿ ಮಹದೇವಸ್ವಾಮಿ ಸ್ವಾಮೀಜಿ ಇಂದು ಖಾಕಿಪಡೆ ಎರಡನೇ ಬಾರಿಗೆ ವಿಚಾರಣೆಗೆ ಒಳಪಡಿಸಿದ್ದರು ಕೂಡ.
ಪೊಲೀಸ್ ವಿಚಾರಣೆ ವೇಳೆ ಈಗಾಗಲೇ ಆರೋಪಿಗಳು ಸ್ವಾಮೀಜಿ ಹೆಸರು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಮತ್ತೆ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಈ ಮೂಲಕ ಸ್ವಾಮೀಜಿ ಯಾರದೋ ಮೇಲಿನ ದ್ವೇಷಕ್ಕೆ ವಿಷ ಬೆರೆಸಲು ಸೂಚಿಸಿದ್ದಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಮುಖ್ಯಸ್ಥರನ್ನಾಗಿ ಮಾಡಬೇಕೆಂಬ ದುರುದ್ದೇಶ
ಅಂಬಿಕಾ ಪತಿ ಮಾದೇಶ್ ರನ್ನು ದೇವಸ್ಥಾನದ ಮುಖ್ಯಸ್ಥರನ್ನಾಗಿ ಮಾಡಬೇಕೆಂಬ ದುರುದ್ದೇಶದಿಂದಲೇ ಈ ಕುಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದಲೇ ಮಾದೇಶ್ ದೇವಸ್ಥಾನದ ಟ್ರಸ್ಟಿಯಾಗಿದ್ದರು. ಆದರೆ ದೇವಸ್ಥಾನದ ಆಡಳಿತದ ಪಾರುಪತ್ಯ ವಹಿಸಬೇಕೆಂಬ ದುರುದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಘಟನೆಗೆ ಪ್ರಮುಖ ಸೂತ್ರಧಾರರಾಗಿ ಸಾಲೂರು ಮಠದ ಕಿರಿಯ ಶ್ರೀಗಳ ಹೆಸರು ಥಳುಕು ಹಾಕಿಕೊಳ್ಳುತ್ತಿದೆ ಎನ್ನುತ್ತಿದೆ ಪೊಲೀಸ್ ಮೂಲಗಳು.
ಟ್ರಸ್ಟಿ ಮಾದೇಶ್ ಶ್ರೀಗಳ ಶಿಷ್ಯ
ಟ್ರಸ್ಟಿ ಮಾದೇಶ್ ಸಾಲೂರು ಮಠದ ಕಿರಿಯ ಶ್ರೀ ಇಮ್ಮಡಿ ಮಹದೇವಸ್ವಾಮಿಯ ಶಿಷ್ಯ. ಅಲ್ಲದೇ ಸಾಲೂರು ಮಠದ ಹಿರಿಯ ಸ್ವಾಮೀಜಿಯವರೊಂದಿಗೆ ಇಮ್ಮಡಿ ಮಹದವೇಸ್ವಾಮಿಯರೊಂದಿಗೆ ಒಡನಾಟವೂ ಅಷ್ಟು ಸಖ್ಯವಾಗಿರಲಿಲ್ಲ. ಇದೆಲ್ಲದರ ಮಧ್ಯೆ ಅಂಬಿಕಾಗೆ ತನ್ನ ಪತಿ ಬಲು ಬೇಗ ಟ್ರಸ್ಟಿನ ಅಧ್ಯಕ್ಷನಾದರೇ ಶ್ರೀಮಂತರಾಗಬಹುದೆಂಬ ದುರುದ್ದೇಶದಿಂದಲೇ ಈ ವ್ಯವಸ್ಥಿತ ಯೋಜನೆಯನ್ನು ರೂಪಿಸಿದ್ದಾರೆ ಎನ್ನಲಾಗಿದೆ.
ವಿಷಪ್ರಸಾದ ಪ್ರಕರಣ: ತಡರಾತ್ರಿ ಸಾಲೂರು ಮಠದ ಶ್ರೀಗಳು ಪೊಲೀಸ್ ಕಸ್ಟಡಿಗೆ
ಪ್ರೀ ಪ್ಲ್ಯಾನ್ ಮಾಡಲಾಗಿತ್ತು
ಇಲ್ಲಿ ಸಾಲೂರು ಮಠದ ಹಿರಿಯ ಸ್ವಾಮೀಜಿಯ ತಲೆದಂಡಕ್ಕಾಗಿ ಪ್ರೀ ಪ್ಲ್ಯಾನ್ ಮಾಡಲಾಗಿತ್ತು. ಹಾಗಾಗಿ ಗುದ್ದಲಿ ಪೂಜೆಗೆ ಹಿರಿಯ ಸ್ವಾಮೀಜಿ ಆಗಮಿಸಿದ್ದರು. ಅಲ್ಲದೇ ಕಿರಿಯ ಸ್ವಾಮೀಜಿಗಳು ಸಹ ಆಗಮಿಸಿರಲಿಲ್ಲ. ಹಿರಿಯ ಸ್ವಾಮೀಜಿಯ ಸಮ್ಮುಖದಲ್ಲಿ ಘಟನೆ ಸಂಭವಿಸಿದರೆ ಅವರಿಗೆ ಕೆಟ್ಟ ಹೆಸರು ತರುವ ಮೂಲ ಉದ್ದೇಶದಿಂದ ಈ ಸಂಚು ಹೆಣೆಯಲಾಗಿದೆ. ಕೇವಲ ಸಣ್ಣ ಪ್ರಮಾಣದಲ್ಲಿ ವಾಂತಿ ಭೇದಿಯಾಗುತ್ತದೆಂದು ಎಂದು ಪ್ರಸಾದಕ್ಕೆ ವಿಷ ಹಾಕಿದ್ದೆವು. ಆದರೆ ಇಂತಹ ದೊಡ್ಡ ಪ್ರಮಾಣದಲ್ಲಿ ಘಟನೆ ನಡೆಯುತ್ತದೆ ಅಂತ ಗೊತ್ತಿರಲಿಲ್ಲ ಎಂದು ಅಂಬಿಕಾ ಪೋಲೀಸ್ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಅಂಬಿಕಾಗೆ ಮರುಪರೀಕ್ಷೆ
ಹೆಚ್ಚಿನ ವಿಚಾರಣೆಗೆ ಇಂದು ರಾತ್ರಿ ಅಥವಾ ನಾಳೆಯೊಳಗಾಗಿ ಕಿರಿಯ ಸ್ವಾಮೀಜಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ ಎನ್ನುತ್ತದೆ ಖಾಕಿ ಮೂಲಗಳು. ಅಲ್ಲದೇ ಅಂಬಿಕಾರನ್ನು ಹೆಚ್ಚಿನ ತನಿಖೆಗಾಗಿ ಅಹಮದಾಬಾದ್ ಗೆ ಮಂಪರು ಪರೀಕ್ಷೆಗೆಂದು ಕರೆದೊಯ್ಯುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.