Breaking; ಬಾಳ ಸಾಹೇಬ್ ಠಾಕ್ರೆಯ ಶೀವಸೇನೆ ತೊರೆದಿಲ್ಲ; ಏಕನಾಥ ಶಿಂಧೆ
ಮುಂಬೈ, ಜೂನ್ 22; ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ. ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು, 7 ಪಕ್ಷೇತರ ಶಾಸಕರು ಬಂಡಾಯ ಎದ್ದಿದ್ದಾರೆ.
ಗುಜರಾತ್ನ ಸೂರತ್ನಲ್ಲಿರುವ ಹೋಟೆಲ್ನಲ್ಲಿದ್ದ ಶಾಸಕರು ಬುಧವಾರ ಅಸ್ಸಾಂನ ಗುವಾಹಟಿಗೆ ತೆರಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಏಕನಾಥ ಶಿಂಧೆ, "ನಾವು ಬಾಳ ಸಾಹೇಬ್ ಠಾಕ್ರೆಯ ಶಿವಸೇನೆ ತೊರೆದಿಲ್ಲ" ಎಂದು ಹೇಳಿದರು.
"ಬಾಳ ಸಾಹೇಬ್ ಠಾಕ್ರೆಯ ಹಿಂದುತ್ವವನ್ನು ನಾವು ಪಾಲಿಸುತ್ತಿದ್ದೇವೆ. ಮುಂದೆಯೂ ಸಹ ಪಾಲಿಸುತ್ತೇವೆ. ಬಾಳ ಸಾಹೇಬ್ ಠಾಕ್ರೆಯ ಶಿವಸೇನೆಯನ್ನು ನಾವು ತೊರೆದಿಲ್ಲ, ತೊರೆಯುವುದೂ ಇಲ್ಲ" ಎಂದರು.

1966ರ ಜೂನ್ 19ರಂದು ಬಾಳ ಸಾಹೇಬ್ ಠಾಕ್ರೆಯ ಶಿವಸೇನೆ ಹುಟ್ಟು ಹಾಕಿದ್ದರು. ಮಹಾರಾಷ್ಟ್ರದಲ್ಲಿ ಮರಾಠಿಗರ ಹಿತ ಕಾಪಾಡುವುದು ಶಿವಸೇನೆಯ ಪ್ರಮುಖ ಉದ್ದೇಶವಾಗಿತ್ತು. 2012ರ ನವೆಂಬರ್ 17ರಂದು ಅವರು ವಿಧಿವಶರಾದರು.
ಮಹಾರಾಷ್ಟ್ರದಲ್ಲಿ ಈಗ ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೈತ್ರಿ ಸರ್ಕಾರ ಮುನ್ನಡೆಸುತ್ತಿದ್ದಾರೆ. ಆದರೆ ಈಗ ಶಿವಸೇನೆಯ ಪ್ರಭಾವಿ ನಾಯಕ ಬಂಡಾಯದ ಬಾವುಟ ಹಾರಿಸಿರುವುದು ಮೈತ್ರಿ ಸರ್ಕಾರ ಪತನವಾಗಲಿದೆಯೇ? ಎಂಬ ಅನುಮಾನ ಹುಟ್ಟು ಹಾಕಿದೆ.
ಸೋಮವಾರ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ನಡೆದಿತ್ತು. ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರ ಬೆಂಬಲಿತ ಅಭ್ಯರ್ಥಿಗೆ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿತ್ತು. ಇದಕ್ಕೆ ಅಡ್ಡಮತದಾನ ಕಾರಣ ಎಂದು ವಿಶ್ಲೇಷಿಸಲಾಗಿದೆ. ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ.

ಏಕನಾಥ ಶಿಂಧೆ ಜೊತೆಗೆ ಶಿವಸೇನೆ, ಪಕ್ಷೇತರ ಶಾಸಕರು ಸೇರಿ ಒಟ್ಟು 33 ಶಾಸಕರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ. ಮಂಗಳವಾರ ತಮ್ಮ ನಿವಾಸದಲ್ಲಿ ಶಿವಸೇನೆ ಶಾಸಕರ ಸಭೆಯನ್ನು ಅವರು ನಡೆಸಿದರು. ಬಳಿಕ ಶಾಸಕರನ್ನು ಮುಂಬೈನ ಖಾಸಗಿ ಹೋಟೆಲ್ಗೆ ಕಳಿಸಲಾಗಿದೆ.
ಬುಧವಾರ ಮಧ್ಯಾಹ್ನ 12 ಗಂಟೆಯ ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಬಂಡಾಯ ಎದ್ದಿರುವ ಏಕನಾಥ ಶಿಂಧೆ ಮನವೊಲಿಸುವ ಕಾರ್ಯವನ್ನು ಶಿವಸೇನೆಯ ನಾಯಕರು ಮಾಡುತ್ತಿದ್ದಾರೆ. ಉದ್ಧವ್ ಠಾಕ್ರೆ ಸಹ ಮಂಗಳವಾರ 10 ನಿಮಿಷ ಏಕನಾಥ ಶಿಂಧೆ ಜೊತೆ ಮಾತನಾಡಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.












Click it and Unblock the Notifications