ಬ್ಯಾಟ್ ಹಿಡಿದ ಕೈಗೆ ಪೊರಕೆ ತಗೊಂಡ ತೆಂಡೂಲ್ಕರ್
ಮುಂಬೈ, ಅ. 6 : ಇಷ್ಟು ವರ್ಷ ಕೈಯಲ್ಲಿ ಬ್ಯಾಟ್ ಹಿಡಿದುಕೊಂಡು ಬೌಲರ್ ಗಳನ್ನು ಬೌಂಡರಿಯಾಚೆ ಅಟ್ಟುತ್ತಿದ್ದ ಮಾಸ್ಟರ್ ಬ್ಲಾಸ್ಟರ್ 'ಭಾರತ ರತ್ನ' ಸಚಿನ್ ತೆಂಡೂಲ್ಕರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ 'ಸ್ವಚ್ಛ ಭಾರತ'ದ ರಾಯಭಾರಿಯಾಗಲು ಒಪ್ಪಿಕೊಂಡಿದ್ದು ಈಗ ಕೈಯಲ್ಲಿ ಪೊರಕೆ ಹಿಡಿದಿದ್ದಾರೆ.
ಮಹಾತ್ಮಾ ಗಾಂಧೀಜಿಯ 145ನೇ ಜನ್ಮದಿನದಂದು ಆರಂಭಿಸಿರುವ ಮಹತ್ವಾಕಾಂಕ್ಷಿ 'ಸ್ವಚ್ಛ ಭಾರತ' ಅಭಿಯಾನದಲ್ಲಿ ರಾಯಭಾರಿಯಾಗಲು ಮೋದಿ ಆಯ್ಕೆ ಮಾಡಿರುವ 9 ಸೆಲೆಬ್ರಿಟಿಗಳಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಒಬ್ಬರು. ತಾವೇ ಸ್ವತಃ ಕೈಗವಸು ತೊಟ್ಟ ಕೈಯಲ್ಲಿ ಪೊರಕೆ ಹಿಡಿದು, ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಈ ಅಭಿಯಾನದ ಗುರಿ.
"ಶ್ರೀ ನರೇಂದ್ರ ಮೋದಿ ಅವರು ನನಗೆ 'ಸ್ವಚ್ಛ ಭಾರತ' ಅಭಿಯಾನದ ನಾಯಕತ್ವ ಹೊರಿಸಿದ್ದಾರೆ. ಹಾಗಾಗಿ, ನನ್ನ ತಂಡದ ಜೊತೆ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛಗೊಳಿಸುವುದು ತುಂಬಾ ಸಂತೋಷ ಕೊಡುತ್ತಿದೆ" ಎಂದು ಕಾಂಗ್ರೆಸ್ ಸಂಸದರಾಗಿರುವ ಸಚಿನ್ ತೆಂಡೂಲ್ಕರ್ ಅವರು ಭಾನುವಾರ ಹೇಳಿದರು. [ಸ್ವಚ್ಛ ಭಾರತದ ಬಗ್ಗೆ ಗೌಡರ ಮೆಚ್ಚುಗೆ]
ನಮ್ಮ ಪ್ರದೇಶವನ್ನು ಸ್ವಚ್ಛಗೊಳಿಸುವುದಲ್ಲದೆ, ಇಡೀ ಭಾರತವನ್ನು ಸಾಧ್ಯವಾದಷ್ಟು ಸ್ವಚ್ಛವಾಗಿಡಲು ಪ್ರಯತ್ನಿಸುತ್ತೇನೆ. ಈ ಅಭಿಯಾನ ಈಗ ಮಾತ್ರ ಆರಂಭವಾಗಿದೆ. ನನ್ನ ಇಡೀ ತಂಡದ ಜೊತೆಗೆ ಉತ್ತಮ ಕೆಲಸ ಮಾಡುತ್ತ ಸ್ವಚ್ಛ ಭಾರತ ಅಭಿಯಾನವನ್ನು ಮುಂದುವರಿಸುತ್ತೇವೆ ಎಂದು ಅವರು ಕಸ ಗುಡಿಸಿದ ನಂತರ ನುಡಿದರು.
ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಅಮೀರ್ ಖಾನ್, ಕಮಲ್ ಹಾಸನ್, ಸಚಿನ್ ತೆಂಡೂಲ್ಕರ್, ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ, ಯೋಗ ಗುರು ಬಾಬಾ ರಾಮದೇವ್, ಶಶಿ ತರೂರ್, ಅನಿಲ್ ಅಂಬಾನಿ ಮುಂತಾದ 9 ಸೆಲೆಬ್ರಿಟಿಗಳನ್ನು ನರೇಂದ್ರ ಮೋದಿ ಅವರು ರಾಯಭಾರಿಗಳೆಂದು ಆಯ್ಕೆ ಮಾಡಿದ್ದಾರೆ.
ಐಸ್ ಬಕೆಟ್ ಚಾಲೆಂಜ್ ನಂತೆ ರಾಯಭಾರಿಗಳಾಗಿ ಆಯ್ಕೆಯಾದವರು ಇನ್ನೂ 9 ಜನರನ್ನು ಸ್ವಚ್ಛ ಭಾರತದ ರಾಯಭಾರಿಗಳೆಂದು ಆಯ್ಕೆ ಮಾಡಬಹುದು. ಈ ಅಭಿಯಾನ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಪಡೆಯುತ್ತಿದೆ ಹಾಗೆಯೆ ಸಂಕಷ್ಟದ ಗುಡ್ಡೆಯನ್ನೂ ಕೂಡಿಹಾಕಿದೆ.
ಗಾಂಧಿ ಜಯಂತಿ ದಿನ ಬೆಂಗಳೂರಿನಲ್ಲಿಯೂ ಹಲವಾರು ಖ್ಯಾತನಾಮರು, ಸಂಘಟನೆಗಳು ಮತ್ತು ನಾಗರಿಕರು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಆದರೆ, ಒಂದು ಪ್ರದೇಶದಲ್ಲಿ ಸ್ವಚ್ಛ ಮಾಡಿದ ಕಸವನ್ನು ಮತ್ತೊಂದು ಪ್ರದೇಶದಲ್ಲಿ ಸರಿಸಿ ಕೈತೊಳೆದುಕೊಂಡು ಜಾಗ ಖಾಲಿ ಮಾಡಿದ್ದರು. ಇದೆಂಥ ನ್ಯಾಯ ಸ್ವಾಮಿ? ಇದೆ ಬರೀ ತೋರಿಕೆಗಾ?