ದಿಢೀರನೆ ಕೊರೊನಾ ಏರಿಕೆ; ಎರಡು ಬಹುಮುಖ್ಯ ಕಾರಣ ಮುಂದಿಟ್ಟ ಕೇಂದ್ರ
ಮುಂಬೈ, ಮಾರ್ಚ್ 07: ಮಹಾರಾಷ್ಟ್ರದಲ್ಲಿ ಫೆಬ್ರವರಿ ತಿಂಗಳಿನಿಂದ ಕೊರೊನಾ ಸೋಂಕಿನ ಪ್ರಕರಣಗಳು ದಿಢೀರನೆ ಏರಿಕೆಯಾಗಿದ್ದು, ಇದರ ಹಿಂದಿನ ಹಲವು ಕಾರಣಗಳನ್ನು ತಜ್ಞರು ಅಂದಾಜು ಮಾಡಿದ್ದರು. ಇದೀಗ ರಾಜ್ಯಕ್ಕೆ ಭೇಟಿ ಕೊಟ್ಟಿದ್ದ ಕೇಂದ್ರ ತಂಡ ಪರಿಶೀಲನೆ ನಡೆಸಿ ಕೆಲ ಕಾರಣಗಳನ್ನು ಮುಂದಿಟ್ಟಿದೆ.
ವಿದರ್ಭಾ ಪ್ರಾಂತ್ಯದಲ್ಲಿ ಏಕಾಏಕಿ ಕಾಣಿಸಿಕೊಂಡ ಸೋಂಕು ನಂತರ ಅಕೋಲಾ, ಅಮರಾವತಿ, ಬುಲ್ದಾನಾ, ಯವತ್ಮಾಲ್, ವಾಶಿಮ್, ಭಂಡಾರ, ಚಂದ್ರಾಪುರ, ಗಡ್ಚಿರೋಲಿ, ಗೊಂಡಾ, ನಾಗ್ಪುರ ವಾರ್ದಗಳಲ್ಲಿ ಹೆಚ್ಚಾಗಿ ಪುಣೆ ಹಾಗೂ ಮುಂಬೈ ನಗರಗಳಿಗೂ ಹರಡಿತ್ತು. ಆನಂತರ ಮಹಾರಾಷ್ಟ್ರ, ಕೇರಳ, ಪಂಜಾಬ್ ಸೇರಿದಂತೆ ಹತ್ತು ರಾಜ್ಯಗಳಿಗೆ ಕೇಂದ್ರ ಸರ್ಕಾರ ಕೊರೊನಾ ಪರಿಸ್ಥಿತಿ ಪರಿಶೀಲನೆಗೆ ತಂಡಗಳನ್ನು ಕಳುಹಿಸಿಕೊಟ್ಟಿತ್ತು. ಮಹಾರಾಷ್ಟ್ರಕ್ಕೆ ತೆರಳಿದ್ದ ಕೇಂದ್ರದ ತಂಡ ಪರಿಶೀಲನೆ ನಡೆಸಿ ಕೆಲ ಕಾರಣಗಳನ್ನು ಕಲೆ ಹಾಕಿದೆ. ಮುಂದೆ ಓದಿ...

ಮಾರ್ಚ್ 1, 2ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ತಂಡ
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದಶಿ ನಿಪುನ್ ವಿನಾಯಕ್, ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರದ ಉಪ ನಿರ್ದೇಶಕ ಸಂಕೇತ್ ಕುಲಕರ್ಣಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟಿಬಿ ಅಂಡ್ ರೆಸ್ಪಿರೇಟರಿ ಡಿಸೀಸ್ ಪ್ರೊ. ಆಶಿಶ್ ರಂಜನ್ ಅವರನ್ನೊಳಗೊಂಡ ತಂಡವು ಮಾರ್ಚ್ 1 ಹಾಗೂ 2ರಂದು ರಾಜ್ಯಕ್ಕೆ ಭೇಟಿ ನೀಡಿದ್ದು ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸ್ಥಿತಿ ಗತಿ ಕುರಿತು ಮಾಹಿತಿ ಕಲೆ ಹಾಕಿದೆ. ಇಲ್ಲಿ ಕೊರೊನಾ ಪ್ರಕರಣ ಏರಿಕೆ ಹಿಂದಿನ ಕಾರಣವನ್ನು ವಿಶ್ಲೇಷಿಸಿದೆ.

ಕೊರೊನಾ ಬಗ್ಗೆ ಕಡಿಮೆಯಾದ ಭಯ
ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಭಯ ಕಡಿಮೆಯಾಗಿರುವುದು ಸೋಂಕಿನ ಏರಿಕೆಗೆ ಪ್ರಮುಖ ಕಾರಣ ಎಂದು ತಂಡ ವಿಶ್ಲೇಷಿಸಿದೆ. ಕೊರೊನಾ ಸೋಂಕು ಸಂಪೂರ್ಣ ನಿವಾರಣೆಯಾಗಿದೆ ಎಂಬ ನಿರ್ಲಕ್ಷ್ಯ ಹಾಗೂ ಸೋಂಕು ಹರಡುವ ಕುರಿತು ಜನರಲ್ಲಿ ಗಂಭೀರತೆ ಹೋಗಿರುವುದು ಕಾರಣವಾಗಿದ್ದು, ಸೂಪರ್ ಸ್ಪ್ರೆಡರ್ ಗಳಾದ ಸಾರ್ವಜನಿಕ ಸಭೆಗಳು ಹೆಚ್ಚಾಗಿರುವುದು ಕೊರೊನಾ ಸೋಂಕಿನ ಏರಿಕೆಗೆ ಎಡೆಮಾಡಿಕೊಟ್ಟಿದೆ ಎಂದು ತಜ್ಞರು ತಿಳಿಸಿದ್ದಾರೆ.

"ಸಾರ್ವಜನಿಕ ಸಾರಿಗೆಯೇ ಮೂಲ ಕಾರಣ"
ಈಚೆಗೆ ಮಹಾರಾಷ್ಟ್ರದಲ್ಲಿ ಸ್ಥಳೀಯ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಪ್ರಮುಖ ಕಾರಣ ಎಂದು ತಂಡ ತಿಳಿಸಿದೆ. ರೈಲು ಸಂಚಾರದ ಜೊತೆಗೆ ಸಾರ್ವಜನಿಕ ಸಾರಿಗೆಯಲ್ಲಿ ಕಿಕ್ಕಿರಿದ ಜನಸಂದಣಿ ಸೋಂಕು ವ್ಯಾಪಕವಾಗಿ ಹರಡಲು ಮೂಲ ಎಂದು ಹೇಳಿದೆ. ಜನವರಿಯಲ್ಲಿ ಮಹಾರಾಷ್ಟ್ರದ 34 ಜಿಲ್ಲೆಗಳ 12,711 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ಇದು ಕೂಡ ಸೋಂಕಿನ ದಿಢೀರ್ ಏರಿಕೆ ಹಿಂದಿನ ಕಾರಣವಾಗಿದೆ. ಜೊತೆಗೆ ಇದು ಮದುವೆ ಸೀಸನ್ ಆಗಿರುವುದರಿಂದ ಗೊತ್ತೇ ಆಗದೇ ಸೋಂಕು ವ್ಯಾಪಕವಾಗಿದೆ ಎಂದು ತಂಡ ತಿಳಿಸಿದೆ.

ರೂಪಾಂತರ ಸೋಂಕಿನ ಶಂಕೆ
ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿ ಕೊರೊನಾ ಏರುತ್ತಿದ್ದಂತೆ, ಈ ಏರಿಕೆಗೂ ಬ್ರಿಟನ್ ಹಾಗೂ ಬ್ರೆಜಿಲ್ ರೂಪಾಂತರ ಸೋಂಕಿಗೆ ಸಂಬಂಧವಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪರೀಕ್ಷೆಯಲ್ಲಿ, ಇದಕ್ಕೆ ರೂಪಾಂತರ ಸೋಂಕು ಕಾರಣವಲ್ಲ ಎಂದು ತಿಳಿದುಬಂದಿತ್ತು. ಮಹಾರಾಷ್ಟ್ರದಲ್ಲಿ ಮಾ.6ರ ವರದಿಯಂತೆ, 10,187 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 6,080 ಮಂದಿ ಗುಣಮುಖರಾಗಿದ್ದಾರೆ. 47ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.












Click it and Unblock the Notifications