ಮಹಾರಾಷ್ಟ್ರ: ಸರ್ಕಾರ ರಚನೆಗೆ 6 ತಿಂಗಳವರೆಗೆ ಅವಕಾಶ
ಮುಂಬೈ, ನವೆಂಬರ್ 12: ಮಹಾರಾಷ್ಟ್ರದಲ್ಲಿ ಸರ್ಕಾರ ಯಾವುದೇ ರಾಜಕೀಯ ಪಕ್ಷ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸುವಲ್ಲಿ ಸಫಲವಾಗಿಲ್ಲ ಎಂಬ ಕಾರಣಕ್ಕೆ ರಾಷ್ಟ್ರಪತಿ ಆಡಳಿತ ಜಾರಿಮಾಡಲಾಗಿದೆ. ಶಿವಸೇನಾ ಮತ್ತು ಎನ್ಸಿಪಿ ಜತೆಗೆ ಸರ್ಕಾರ ರಚಿಸುವ ವಿಚಾರದಲ್ಲಿ ಕಾಂಗ್ರೆಸ್ ಅಂತಿಮ ನಿರ್ಧಾರ ತೆಗೆದುಕೊಂಡಿರಲಿಲ್ಲ. ಇದರಿಂದಾಗಿ ಬಿಜೆಪಿಗೆ ಸೆಡ್ಡು ಹೊಡೆದು ತನ್ನ ಕಡು ವಿರೋಧಿ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿಗೆ ಹುದ್ದೆಗೆ ಏರುವ ಶಿವಸೇನಾದ ಕನಸು ಭಗ್ನಗೊಂಡಿದೆ.
ರಾಷ್ಟ್ರಪತಿಗಳ ಆಳ್ವಿಕೆ ಜಾರಿಮಾಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಈ ನಡುವೆ ರಾಜ್ಯದಲ್ಲಿ ಸರ್ಕಾರ ರಚನೆಯ ಕಸರತ್ತು ಇನ್ನೂ ನಿಂತಿಲ್ಲ. ಎನ್ಸಿಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತುಕತೆ ಮುಂದುವರಿದಿದೆ.
ಬಿಜೆಪಿಯೊಂದಿಗೆ ಶಿವಸೇನಾ 50:50ರ ಅಧಿಕಾರ ಹಂಚಿಕೆ ಸೂತ್ರ ಮುಂದಿಟ್ಟಿತ್ತು. ತಲಾ ಎರಡೂವರೆ ವರ್ಷ ಬಿಜೆಪಿ ಮತ್ತು ಶಿವಸೇನಾದ ನಾಯಕರು ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕಿತ್ತು. ಆದರೆ ಇದಕ್ಕೆ ಬಿಜೆಪಿ ಒಪ್ಪಿಗೆ ನೀಡಿರಲಿಲ್ಲ. ಇದೇ ಸೂತ್ರವನ್ನು ಈಗ ಎನ್ಸಿಪಿ, ಶಿವಸೇನಾದ ಮುಂದಿರಿಸಿದೆ.

ಸರ್ಕಾರ ರಚನೆಗೆ ಮುಂದಾಗಲು ಅವಕಾಶ
ಇನ್ನು ಆರು ತಿಂಗಳವರೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಯಲಿದೆ. ಈ ನಡುವೆ ಯಾವುದೇ ಪಕ್ಷಗಳು ಸರ್ಕಾರ ರಚನೆಗೆ ಮೈತ್ರಿ ಮಾಡಿಕೊಂಡು ಹಕ್ಕು ಮಂಡಿಸಿ ಬಹುಮತ ಸಾಬೀತುಪಡಿಸಿದರೆ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಆರು ತಿಂಗಳಲ್ಲಿ ಯಾವುದೇ ಪಕ್ಷ ಸರ್ಕಾರ ರಚನೆಗೆ ಮುಂದಾಗದೆ ಹೋದಲ್ಲಿ ಮತ್ತು ಬಹುಮತ ಸಾಬೀಪಡಿಸದೆ ಇದ್ದಲ್ಲಿ ಮತ್ತೆ ಚುನಾವಣೆ ಘೋಷಿಸಲಾಗುತ್ತದೆ.

50:50 ಸೂತ್ರ ಮುಂದಿಟ್ಟ ಎನ್ಸಿಪಿ
ಆರಂಭದಲ್ಲಿ ಶಿವಸೇನಾಗೆ ಐದು ವರ್ಷಗಳ ಕಾಲ ಸರ್ಕಾರ ರಚನೆಗೆ ಬೆಂಬಲ ನೀಡುವ ಜತೆಯಲ್ಲಿ ಡಿಸಿಎಂ ಸ್ಥಾನ ಸಾಕೆಂದು ಎನ್ಸಿಪಿ ಹೇಳಿತ್ತು ಎನ್ನಲಾಗಿದೆ. ಆದರೆ ಮಂಗಳವಾರ ನಿಲುವು ಬದಲಿಸಿದ್ದು, 50:50 ಸೂತ್ರ ಮುಂದಿಟ್ಟಿದೆ. ಜತೆಗೆ ಕಾಂಗ್ರೆಸ್ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಬೇಡಿಕೆ ಇಟ್ಟಿದೆ. ಕಾಂಗ್ರೆಸ್ ಕೂಡ 11 ಸಂಪುಟ ಸಚಿವ ಸ್ಥಾನಗಳನ್ನು ನೀಡಬೇಕೆಂದು ಷರತ್ತು ಇರಿಸಿದೆ ಎನ್ನಲಾಗಿದೆ.

ಸುಪ್ರೀಂಕೋರ್ಟ್ಗೆ ಸೇನಾ ಅರ್ಜಿ
ಎನ್ಸಿಪಿ ಮತ್ತು ಕಾಂಗ್ರೆಸ್ನಿಂದ ಬೆಂಬಲ ಪತ್ರವನ್ನು ಪಡೆಯಲು ಹೆಚ್ಚುವರಿ ಮೂರು ದಿನ ಕಾಲಾವಕಾಶ ನೀಡಬೇಕೆಂಬ ಮನವಿಯನ್ನು ತಿರಸ್ಕರಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಿರ್ಧಾರವನ್ನು ಪ್ರಶ್ನಿಸಿ ಶಿವಸೇನಾ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ.

ನಾಳೆ ವಿಚಾರಣೆಗೆ ಅರ್ಜಿ
ತುರ್ತು ವಿಚಾರಣೆಗೆ ಅರ್ಜಿಯನ್ನು ಬುಧವಾರ ನ್ಯಾಯಾಲಯದ ಮುಂದೆ ಮೆನ್ಷನ್ ಮಾಡುವುದಾಗಿ ಶಿವಸೇನಾದ ವಕೀಲ ಸುನೀಲ್ ಫೆರ್ನಾಂಡಿಸ್ ತಿಳಿಸಿದ್ದಾರೆ. ರಾಷ್ಟ್ರಪತಿ ಆಡಳಿತ ಹೇರುವ ನಿರ್ಧಾರ ಪ್ರಶ್ನಿಸಿ ಸಲ್ಲಿಸುವ ಹೊಸ ಅರ್ಜಿಯ ಕುರಿತು ಸಮಾಲೋಚನೆ ನಡೆಯುತ್ತಿದೆ. ಅದನ್ನು ಯಾವಾಗ ಸಲ್ಲಿಸುವುದು ಎಂಬ ನಿರ್ಧಾರ ಬುಧವಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications