ಮಹಾರಾಷ್ಟ್ರ ರಾಜಕೀಯಕ್ಕೆ ವಾಪಸ್; ಗಡ್ಕರಿ ಹೇಳಿದ್ದೇನು?
ಮುಂಬೈ, ನವೆಂಬರ್ 07 : ಮಹಾರಾಷ್ಟ್ರ ರಾಜಕಾರಣಕ್ಕೆ ಮರಳುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ದೇವೇಂದ್ರ ಫಡ್ನವೀಸ್ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಈ ಮೂಲಕ ಖಚಿತವಾಗಿದೆ.
ಶಿವಸೇನೆ ನಾಯಕ ಸಂಜಯ್ ರಾವತ್ ನಿತಿನ್ ಗಡ್ಕರಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಬೇಕು ಎಂದು ಪಕ್ಷ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಅವರ ಹೇಳಿಕೆ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ನಿತಿನ್ ಗಡ್ಕರಿ ಸಹ ಮಹಾರಾಷ್ಟ್ರ ರಾಜಕೀಯಕ್ಕೆ ಮರಳುವ ಸುದ್ದಿ ನಿರಾಕರಿಸಿದರು.
"ದೇವೇಂದ್ರ ಫಡ್ನವೀಸ್ ಹೊಸ ಸರ್ಕಾರದ ನೇತೃತ್ವ ವಹಿಸಲಿದ್ದಾರೆ" ಎಂದು ನಿತಿನ್ ಗಡ್ಕರಿ ಹೇಳಿದರು. ಸರ್ಕಾರ ರಚನೆ ವಿಚಾರದಲ್ಲಿ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಮ್ಮ ತವರು ರಾಜ್ಯದ ರಾಜಕೀಯದ ಬಗ್ಗೆ ಹೇಳಿದರು.
"ಸರ್ಕಾರ ರಚನೆ ಬಗ್ಗೆ ನಡೆಯುತ್ತಿರುವ ಕಸರತ್ತಿಗೆ ಆರ್ಎಸ್ಎಸ್ ಮುಖ್ಯಸ್ಥರನ್ನು ಎಳೆದು ತರುವುದು ಸರಿಯಲ್ಲ. ನಾನು ದೆಹಲಿಯಲ್ಲಿದ್ದೇನೆ, ರಾಜ್ಯ ರಾಜಕಾರಣಕ್ಕೆ ಮರಳುವ ಯಾವುದೇ ಪ್ರಶ್ನೆ ನನ್ನ ಮುಂದಿಲ್ಲ" ಎಂದು ಗಡ್ಕರಿ ತಿಳಿಸಿದರು.

ಎಲ್ಲವೂ ಶೀಘ್ರದಲ್ಲೇ ಬಗೆಹರಿಯಲಿದೆ
"ನಾನು ದೆಹಲಿಯಲ್ಲಿದ್ದೇನೆ. ರಾಜ್ಯ ರಾಜಕೀಯಕ್ಕೆ ವಾಪಸ್ ಬರುವ ಕುರಿತು ಯಾವುದೇ ಪ್ರಶ್ನೆ ಇಲ್ಲ. ರಾಜ್ಯದ ರಾಜಕೀಯ ಬಿಕ್ಕಟ್ಟು ಶೀಘ್ರದಲ್ಲಿಯೇ ಬಗೆಹರಿಯಲಿದೆ" ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದರು.

50:50 ಹಂಚಿಕೆಗೆ ಅಂಟಿಕೊಂಡ ಶಿವಸೇನೆ
ಮಹಾರಾಷ್ಟ್ರದಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡಿದ್ದವು. ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಈಗ ಒಟ್ಟಾಗಿ ಸರ್ಕಾರ ರಚನೆ ಮಾಡಲಿದ್ದು 50:50ರ ಅನುಪಾತದಲ್ಲಿ ಸ್ಥಾನಗಳು ಹಂಚಿಕೆಯಾಗಬೇಕು ಎಂದು ಶಿವಸೇನೆಪಟ್ಟು ಹಿಡಿದಿದೆ.

ರಾಜ್ಯಪಾಲರ ಭೇಟಿ
ಬಿಜೆಪಿಯ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಮತ್ತು ವಿವಿಧ ನಾಯಕರು ಇಂದು ರಾಜ್ಯಪಾಲರನ್ನು ಭೇಟಿಯಾದರು. ಬಳಿಕ ಮಾತನಾಡಿದ ಅವರು, "ಕೋರ್ ಕಮಿಟಿ ಸಭೆಯಲ್ಲಿ ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ" ಎಂದು ಹೇಳಿದರು.

ಚುನಾವಣಾ ಫಲಿತಾಂಶ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44, ಎನ್ಸಿಪಿ 54, ಸ್ಥಾನ ಗೆದ್ದಿವೆ. 13 ಪಕ್ಷೇತರರು ಗೆಲವು ಸಾಧಿಸಿದ್ದಾರೆ.












Click it and Unblock the Notifications