ಸರ್ಕಾರಿ ಅಧಿಕಾರಿಗಳಿಗೆ ಪ್ರತಿ ತಿಂಗಳೂ ಲಂಚ ನೀಡಿದ ದಾಖಲೆಗಳನ್ನು ವಶಪಡಿಸಿಕೊಂಡ ಎನ್ಐಎ
ಮುಂಬೈ, ಏಪ್ರಿಲ್ 5: ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ದೊರಕಿದ ಹಾಗೂ ಆ ಸ್ಫೋಟಕ ಪತ್ತೆಯಾದ ಕಾರ್ ಮಾಲೀಕ ಮನ್ಸುಖ್ ಹಿರೇನ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಹಣಕಾಸು ವಹಿವಾಟಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಕಲೆಹಾಕಿದೆ. ಇವು ಮುಂಬೈ ಪೊಲೀಸ್ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ನೀಡಲಾದ ಲಂಚದ ಹಣದ ವಿವರಗಳಿರಬಹುದು ಎಂದು ಎನ್ಐಎ ಶಂಕಿಸಿದೆ.
ದಕ್ಷಿಣ ಮುಂಬೈನ ಗಿರ್ಗೌಮ್ನಲ್ಲಿನ ಕ್ಲಬ್ ಒಂದರ ಮೇಲೆ ಗುರುವಾರ ದಾಳಿ ನಡೆಸಿದ ಸಂದರ್ಭದಲ್ಲಿ ಈ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮುಕೇಶ್ ಅಂಬಾನಿಗೆ ಬೆದರಿಕೆ ಪ್ರಕರಣ, ಮನ್ಸುಖ್ ಹಿರೇನ್ ಸಾವಿಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆಯ ಪಾತ್ರದ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಜತೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಪ್ರತಿ ತಿಂಗಳೂ 100 ಕೋಟಿ ರೂ ಹಣ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿದ ಆರೋಪದ ಕುರಿತೂ ಎನ್ಐಎ ಕಣ್ಣಿರಿಸಿದೆ.
ಕ್ಲಬ್ನಿಂದ ವಶಪಡಿಸಿಕೊಂಡ ದಾಖಲೆಯಲ್ಲಿ ಕೆಲವು ಅಧಿಕಾರಿಗಳು, ಅವರ ಹುದ್ದೆ ಮತ್ತು ಅವರಿಗೆ ನೀಡಿದ ಮೊತ್ತದ ವಿವರಗಳನ್ನು ಬರೆದಿಡಲಾಗಿದೆ. ಇದು ಪ್ರತಿ ತಿಂಗಳ ಲೆಕ್ಕದಲ್ಲಿಯೂ ದಾಖಲಾಗಿದೆ. ಇದು ಪ್ರತಿ ತಿಂಗಳೂ ಕಚೇರಿಗಳು ಹಾಗೂ ಅಧಿಕಾರಿಗಳಿಗೆ ನೀಡುತ್ತಿರುವ ಲಂಚದ ಮೊತ್ತದ ವಿವರ ಇರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

ಈ ಬಗ್ಗೆ ಕ್ಲಬ್ ಮಾಲೀಕ ಹಾಗೂ ಇತರರಿಂದ ಎನ್ಐಎ ವಿವರಣೆ ಕೇಳುವ ಸಾಧ್ಯತೆ ಇದೆ. ಅಗತ್ಯಬಿದ್ದರೆ ಈ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಥವಾ ಸಿಬಿಐ ಅಧಿಕಾರಿಗಳೊಂದಿಗೆ ಎನ್ಐಎ ಹಂಚಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಕೆಂದರೆ ಎನ್ಐಎ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣ ವಿಚಾರಣೆ ಮಾತ್ರ ನಡೆಸುತ್ತದೆ.
ಈ ಕ್ಲಬ್ಗೆ ವಾಜೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಜತೆಗೆ ನರೇಶ್ ಗೋರ್ ಮತ್ತು ಸಹ ಆರೋಪಿ ವಿನಾಯಕ್ ಶಿಂದೆಗೂ ಇಲ್ಲಿ ಕೆಲಸ ಕೊಡಿಸಿದ್ದರು. ಇವರಿಬ್ಬರೂ ಈಗ ಎನ್ಐಎ ಬಂಧನದಲ್ಲಿದ್ದಾರೆ. ವಾಜೆ ತಮ್ಮ ವೈಯಕ್ತಿಕ ಬಳಕೆಗಾಗಿ ಗೋರ್ ಮೂಲಕ ಸಿಮ್ ಕಾರ್ಡ್ಗಳನ್ನು ಖರೀದಿಸಿದ್ದು, ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಎನ್ಐಎ ವಶಪಡಿಸಿಕೊಂಡಿತ್ತು. ಅಹಮದಾಬಾದ್ನಲ್ಲಿ ಈ ಸಿಮ್ ಕಾರ್ಡ್ಗಳನ್ನು ಖರೀದಿಸಿದ್ದ ಗೋರ್, ಅವುಗಳನ್ನು ಶಿಂದೆ ಮೂಲಕ ವಾಜೆಗೆ ರವಾನಿಸಿದ್ದ.












Click it and Unblock the Notifications