ಮಹಾರಾಷ್ಟ್ರ ಚುನಾವಣೆ, ಮ್ಯಾನ್ ಆಫ್ ದಿ ಮ್ಯಾಚ್ ಗೋಸ್ ಟು... ಶರದ್ ಪವಾರ್!
ಮುಂಬೈ, ಅಕ್ಟೋಬರ್ 25: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ತೋರಿಸಿದ ಅನಿರೀಕ್ಷಿತ ಪ್ರದರ್ಶನ ಜನರು ಹಾಲಿ ಸರ್ಕಾರದ ಹೊರತಾದ ಪರ್ಯಾಯ ವ್ಯವಸ್ಥೆಯೊಂದನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಎನ್ ಸಿಪಿ ನಾಯಕ ಶರದ್ ಪವಾರ್, "ನನ್ನ ರಾಜಕೀಯ ಪಯಣ ಮುಗಿಯಿತು ಎಂದವರಿಗೆ ಇದೇ ನನ್ನ ಉತ್ತರ" ಎಂದಿದ್ದಾರೆ.
2 ರಾಜ್ಯದ ಚುನಾವಣಾ ಫಲಿತಾಂಶ; ಸಿದ್ದರಾಮಯ್ಯ ವಿಶ್ಲೇಷಣೆ
ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಲಿಗೆ ಹೋಲಿಸಿದರೆ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಮಾತ್ರವೇ ಕಳೆದ ವಿಧಾನಸಭೆ ಚುನಾವಣೆಗಿಂತ ಹೆಚ್ಚು ಸ್ಥಾನಗಳಲ್ಲಿ ಈ ಬಾರಿ ಗೆಲುವು ಸಾಧಿಸಿದೆ.
ರಾಜಕೀಯ ಬದುಕಿನಿಂದ ಪೆವಿಲಿಯನ್ ಗೆ ತೆರಳುತ್ತಾರೆ ಎಂದುಕೊಂಡಿದ್ದವರಿಗೆ, ತಾನೇ ಮ್ಯಾನ್ ಆಫ್ ದಿ ಮ್ಯಾಚ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಶರದ್ ಪವಾರ್.
ಎನ್ ಸಿಪಿಯೊಂದೇ ಸೀಟು ಗಳಿಕೆ ಹೆಚ್ಚಿಸಿಕೊಂಡಿದ್ದು!
2014 ರ ವಿಧಾನಸಭೆ ಚುನಾವಣೆ ಹೋಲಿಸಿದರೆ ಈ ಬಾರಿ ಎಲ್ಲ ಪಕ್ಷಗಳೂ ಸೀಟು ಗಳಿಕೆ ನಷಹ್ಟ ಅನುಭವಿಸಿದ್ದರೆ, ಎನ್ ಸಿಪಿ ಮಾತ್ರವೇ ತನ್ನ ಗಳಿಕೆಯನ್ನು ಹೆಚ್ಚಿಸಿಕೊಂಡಿದೆ. 2014 ರಲ್ಲಿ 41 ಕ್ಷೇತ್ರಗಳಲ್ಲಿ ಗೆದ್ದಿದ್ದ ಎನ್ ಸಿಪಿ ಈ ಬಾರಿ 13 ಸ್ಥಾನಗಳನ್ನು ಹೆಚ್ಚಿಸಿಕೊಂಡು 54 ಸೀಟು ಗಳಿಸಿದೆ. ಮಿಕ್ಕೆಲ್ಲವೂ 2014 ಕ್ಕಿಂತ ಕಡಿಮೆ ಸೀಟುಗಳಲ್ಲಿ ಗೀದ್ದಿವೆ.
ಬಿಜೆಪಿ-ಶಿವಸೇನೆಗೆ ಭಾರೀ ಆಘಾತ
200 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸುಲಭವಾಗಿ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ ಫಲಿತಾಂಶದಿಂದ ಭಾರೀ ಆಘಾತ ಎದುರಿಸಿದೆ. 2014 ರಲ್ಲಿ ಕ್ರಮವಾಗಿ 122+63 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಮತ್ತು ಶಿವಸೇನೆ ಈ ಬಾರಿ ಕೇವಲ 105 ಮತ್ತು 56 ಕ್ಷೇತ್ರಗಳಿಗಷ್ಟೇ ತೃಪ್ತಿ ಪಟ್ಟುಕೊಳ್ಳುವಂತಾಯ್ತು.
ಜನ ಪಾಠ ಕಲಿಸಿದ್ದಾರೆ!
"ನನ್ನ ರಾಜಕೀಯ ಬದುಕು ಮುಗಿಯಿತು ಎಂದವರಿಗೆ ಈಗ ಉತ್ತರ ನೀಡಿದ್ದೇವೆ. ಪ್ರಚಾರದ ಹೆಸರಿನಲ್ಲಿ ವೈಯಕ್ತಿಕವಾಗಿ ದಾಳಿ ನಡೆಸುವವರಿಗೆ ಮಹಾರಾಷ್ಟ್ರದ ಜನರು ಬುದ್ಧಿ ಕಲಿಸಿದ್ದಾರೆ" ಎಂದು ಎನ್ ಸಿಪಿ ನಾಯಕ ಶರದ್ ಪವಾರ್ ಫಲಿತಾಂಶದ ನಂತರ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದರು.
ದುರಹಂಕಾರಕ್ಕೆ ಉತ್ತರ
"ಅಧಿಕಾರದ ಮದದಲ್ಲಿದ್ದವರಿಗೆ ಜನ ಬುದ್ಧಿ ಕಲಿಸಿದ್ದಾರೆ. 220 ಸೀಟುಗಳನ್ನು ಗೆಲ್ಲುತ್ತೇವೆಂದವರಿಗೆ ಯತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ. ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಯಾವುದೇ ರೀತಿಯಲ್ಲೂ ಭಿನ್ನಾಭಿಪ್ರಾಯವಿಲ್ಲದೆ, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ, ಅದರ ಆಡಳಿತ ವೈಖರಿಯ ವಿರುದ್ಧ ಸಮರ್ಥವಾಗಿ ಹೋರಾಡಿತ್ತು. ಅದು ಫಲ ನೀಡಿದೆ" ಎಂದು ಪವಾರ್ ಹೇಳಿದರು.