ಅತ್ಯಂತ ರಹಸ್ಯವಾಗಿ ಅಂದು ನಡೆದಿತ್ತು ಅಜ್ಮಲ್ ಕಸಬ್ ಗಲ್ಲು ಶಿಕ್ಷೆ
ಮುಂಬೈ, ನವೆಂಬರ್ 26 : ತನ್ನ ದೇಹದೊಳಗೆ 23 ಬುಲೆಟ್ ಗಳು ನುಗ್ಗಿ ಛಿದ್ರಛಿದ್ರ ಮಾಡಿದ್ದರೂ, 2008ರ ನವೆಂಬರ್ 26ರಂದು ಮುಂಬೈನಲ್ಲಿ ಸಂಭವಿಸಿದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ನನ್ನು ಹಿಡಿದ ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ತುಕಾರಾಂ ಓಂಬ್ಳೆಯನ್ನು ಇಂದು ನೆನೆಯಲೇಬೇಕು.
ಈ ಸಾಹಸ ಮೆರೆದಿದ್ದಕ್ಕಾಗಿ, ನಿವೃತ್ತ ಯೋಧನಾಗಿದ್ದ ತುಕಾರಾಂ ಓಂಬ್ಳೆಗೆ ಭಾರತ ಸರಕಾರ, ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ 'ಅಶೋಕ ಚಕ್ರವನ್ನು' ಮರಣೋತ್ತರವಾಗಿ ನೀಡಿ ಗೌರವಿಸಿತು. ಅಜ್ಮಲ್ ಕಸಬ್ ನನ್ನು ಜೀವಂತವಾಗಿ ಹಿಡಿಯಲು ಸಹಾಯ ಮಾಡಿದ ತುಕಾರಾಂಗೆ ಒಂದು ಸೆಲ್ಯೂಟ್.
ಪಾಕಿಸ್ತಾನದ ಭಯೋತ್ಪಾದಕ, ಉಗ್ರ ಸಂಘಟನೆ ಲಷ್ಕರ್-ಇ-ತೈಬಾದ ಸದಸ್ಯ, ನಿರ್ದಯಿ ಹಂತಕ 25 ವರ್ಷದ ಮೊಹಮ್ಮದ್ ಅಜ್ಮಲ್ ಆಮೀರ್ ಕಸಬ್ ನನ್ನು ಹಿಡಿದ ನಂತರ ಆತನ ವಿಚಾರಣೆ ನಡೆಸಿ, 2012ರ ನವೆಂಬರ್ 21ರಂದು ಪುಣೆಯ ಯರವಾಡಾ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
ಆದರೆ, ಆತನನ್ನು ಗಲ್ಲಿಗೇರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ, ಪಾಕಿಸ್ತಾನಿ ಭಯೋತ್ಪಾದಕರು ಅಜ್ಮಲ್ ಕಸಬ್ ನನ್ನು ಹೇಗಾದರೂ ಪಾರು ಮಾಡಲು ರಹಸ್ಯವಾಗಿ ಪ್ರಯತ್ನ ನಡೆಸುತ್ತಲೇ ಇದ್ದರು. ಅತ್ಯಂತ ರಹಸ್ಯ ಕಾರ್ಯಾಚರಣೆಯಲ್ಲಿ ಅಜ್ಮಲ್ ಕಸಬ್ ನನ್ನು ಹೇಗೆ ಗಲ್ಲಿಗೇರಿಸಲಾಯಿತು ಎಂಬುದನ್ನು ಪಿಟಿಐ ವರದಿ ಮಾಡಿದೆ.

ಸಂಕೇತಾಕ್ಷರಗಳ ಮೂಲಕ ಸಂವಹನ
ಆ ಇಡೀ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಪೊಲೀಸರ ನಡುವೆ ಇಬ್ಬರು ಪೊಲೀಸರು ಮಾತ್ರ ಸಂಕೇತಾಕ್ಷರಗಳ ಮೂಲಕ ಸಂವಹನ ಮಾಡಿಕೊಳ್ಳುತ್ತಿದ್ದರು. ಒಟ್ಟು ಏಳು ಕೋಡ್ ವರ್ಡ್ ಗಳನ್ನು ಇಬ್ಬರೂ ಪೊಲೀಸರು ಬದಲಾಯಿಸಿಕೊಂಡಿದ್ದರು. ಅವು ಈ ಇಬ್ಬರು ಪೊಲೀಸರನ್ನು ಬಿಟ್ಟರೆ ಗೊತ್ತಿದ್ದಿದ್ದು ಅಂದಿನ ಕೇಂದ್ರ ಗೃಹ ಸಚಿವ ಆರ್ ಆರ್ ಪಾಟೀಲ ಅವರಿಗೆ ಮಾತ್ರ. ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಲೆಂದು ಕೊಂಡೊಯ್ಯುವಾಗ ಪೊಲೀಸರು ಬದಲಿಸಿಕೊಂಡ ಕಟ್ಟಕಡೆಯ ಕೋಡ್ ವರ್ಡ್ 'ಪಾರ್ಸೆಲ್ ರೀಚ್ಡ್ ಫಾಕ್ಸ್'!

ಅರ್ಥರ್ ಜೈಲಿನಿಂದ ಯೆರವಾಡಾ ಕಾರಾಗೃಹಕ್ಕೆ
ಈ ರಹಸ್ಯ ಪದವನ್ನು ಕೇಂದ್ರ ಮುಂಬೈನಲ್ಲಿರುವ ಅರ್ಥರ್ ಜೈಲಿನಿಂದ ಪುಣೆಯ ಯೆರವಾಡಾ ಕೇಂದ್ರ ಕಾರಾಗೃಹಕ್ಕೆ ಉಗ್ರ ಅಜ್ಮಲ್ ಕಸಬ್ ನನ್ನು ರವಾನಿಸಿದ ನಂತರ ತಿಳಿಸಲಾಯಿತು. ಈ ರಹಸ್ಯ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರು ಮತ್ತು ಕೇಂದ್ರ ಗೃಹ ಸಚಿವರಿಗೆ ಬಿಟ್ಟು ಯಾರಿಗೂ ತಿಳಿಯದಂತೆ ಅಜ್ಮಲ್ ಕಸಬ್ ನನ್ನು ಮುಂಬೈನಿಂದ ಪುಣೆ ಜೈಲಿಗೆ ರವಾನಿಸಿ ಗಲ್ಲಿಗೇರಿಸುವುದು ಅಷ್ಟು ಸುಲಭದ್ದಾಗಿರಲಿಲ್ಲ. ಇದು ಪೊಲೀಸರಿಗೆ ಭಾರೀ ಸವಾಲಿನದೂ ಆಗಿತ್ತು.

ಅಜ್ಮಲ್ ಗೆ ಬುರ್ಖಾ ಹಾಕಿ ರವಾನೆ
2012ರ ನವೆಂಬರ್ 20ರಂದು ಅಜ್ಮಲ್ ಕಸಬ್ ಗೆ ಬುರ್ಖಾ ಹಾಕಿ ಅರ್ಥರ್ ಜೈಲಿನಿಂದ ನಟ್ಟನಡು ರಾತ್ರಿಯಲ್ಲಿ ಕರೆದುಕೊಂಡು ಹೋಗಲಾಗಿದೆ. ಆತನನ್ನು ಗಲ್ಲಿಗೇರಿರುವ ಏಳು ದಿನಗಳ ಮೊದಲೇ ಡೆತ್ ವಾರಂಟ್ ಅನ್ನು ಕೂಡ ನೀಡಲಾಗಿತ್ತು. ಇದು ಯಾರಿಗೂ ತಿಳಿಯದಂತೆ ಎಚ್ಚರವಹಿಸಲಾಗಿತ್ತು. ಏಕೆಂದರೆ, ಉಗ್ರರು ಒಂದು ಕಣ್ಣಿಟ್ಟೇ ಇದ್ದರು. ಗಲ್ಲು ಶಿಕ್ಷೆಗೆ ಗುರಿಯಾದವರನ್ನು ಗಲ್ಲಿಗೇರಿಸುವುದು ಯೆರವಾಡಾ ಜೈಲಿನಲ್ಲೇ ಆಗಿರುವುದರಿಂದ ರಹಸ್ಯ ಕಾಪಾಡುವುದು ಪೊಲೀಸರಿಗೆ ಅಗತ್ಯವಾಗಿತ್ತು.

ರಹಸ್ಯ ಕಾಪಾಡುವುದು ಚಾಲೆಂಜಿಂಗ್ ಆಗಿತ್ತು
ಬುರ್ಖಾ ಹಾಕಿ ಕುಳ್ಳಿರಿಸಲಾಗಿದ್ದ ವಾಹನವನ್ನು 'ಫೋರ್ಸ್ ಒನ್' ಕಮಾಂಡೋ ತಂಡ ಹಿಂಬಾಲಿಸುತ್ತಿತ್ತು. ಯಾರಿಗೂ ಸಂಶಯ ಬರದಿರಲಿ ಎಂದು ಮಹಾರಾಷ್ಟ್ರ ರಾಜ್ಯ ರಿಸರ್ವ್ ಪೊಲೀಸ್ ವಾಹನವೂ ಭಯೋತ್ಪಾದಕ ಅಜ್ಮಲ್ ಕಸಬ್ ನನ್ನು ಕೊಂಡೊಯ್ಯುತ್ತಿದ್ದ ಆ ವಾಹನವನ್ನು ಹಿಂಬಾಲಿಸುತ್ತಿತ್ತು. ಆಗ, ಕೋಡ್ ವರ್ಡ್ ಗಳಲ್ಲಿ ಸಂವಹನ ಮಾಡುತ್ತಿದ್ದ ಇಬ್ಬರು ಪೊಲೀಸರನ್ನು ಹೊರತುಪಡಿಸಿ ಉಳಿದೆಲ್ಲ ಪೊಲೀಸರ ಮೊಬೈಲನ್ನು ಸ್ವಿಚ್ ಆಫ್ ಮಾಡಲಾಗಿತ್ತು ಮತ್ತು ಒಂದು ಬ್ಯಾಗ್ ನಲ್ಲಿ ಕೂಡಿಡಲಾಗಿತ್ತು.

ಕಸಬ್ ಜೀವಂತವಾಗಿ ಸಿಕ್ಕಿಬಿದ್ದಿದ್ದ
ಮುಂಬೈನ ಅರ್ಥರ್ ಜೈಲಿನಿಂದ ಪುಣೆಯ ಯೆರವಾಡಾ ಜೈಲಿಗೆ ಉಗ್ರ ಅಜ್ಮಲ್ ಕಸಬ್ ನನ್ನು ಕೊಂಡೊಯ್ಯರು ಅಂದು ಸರಿಯಾಗಿ 3 ತಾಸು ತೆಗೆದುಕೊಳ್ಳಲಾಗಿದೆ. ಆ ಮೂರು ಗಂಟೆಗಳ ಕಾಲ ಅಜ್ಮಲ್ ಕಸಬ್ ಒಂದೇ ಒಂದು ಮಾತನ್ನೂ ಆಡಿರಲಿಲ್ಲ. ಉಳಿದ ಸಮಯದಲ್ಲಿ ಹೇಗಿರುತ್ತಿದ್ದನೋ ಅಂದು ಕೂಡ ಆತನ ವರ್ತನೆ ಅದೇ ರೀತಿಯದ್ದಾಗಿತ್ತು. ದಹಿ ವಡಾ ಮಾರುವವನ ಮಗನಾಗಿದ್ದ ಕಸಬ್ ತನ್ನ ಸ್ನೇಹಿತನೊಂದಿಗೆ ಕಳ್ಳತನ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದ. ಇಂಥವನನ್ನೇ ಹಿಡಿದು ತರಬೇತಿ ನೀಡಿ ಭಾರತೀಯರ ಹತ್ಯೆ ಮಾಡಲು ಕಳುಹಿಸಲಾಗಿತ್ತು. ಕರಾಚಿಯಿಂದ ನವೆಂಬರ್ 23ರಂದು ಹಡಗಿನಲ್ಲಿ ಹೊರಟ 10 ಉಗ್ರರಿದ್ದ ತಂಡದಲ್ಲಿ ಉಳಿದವರೆಲ್ಲ ಹತ್ಯೆಗೀಡಾದರೆ ಕಸಬ್ ಮಾತ್ರ ಜೀವಂತ ಸಿಕ್ಕಿಬಿದ್ದಿದ್ದ.

2012ರ ನವೆಂಬರ್ 21ರಂದು ಬೆಳಿಗ್ಗೆ ಫಿನಿಶ್
ಭಾರತದ ಮೇಲೆ ಯುದ್ಧ ಸಾರಿದ, ಹತ್ಯೆ ಮಾಡಿದ, ಸ್ಫೋಟಕಗಳನ್ನು ಇಟ್ಟುಕೊಂಡ ಚಾರ್ಜ್ ಗಳು ಸೇರಿದಂತೆ 80 ವಿವಿಧ ಅಪರಾಧಗಳನ್ನು ಆತನ ಮೇಲೆ ಹೊರಿಸಲಾಗಿತ್ತು. 2010ರ ಮೇ 6ರಂದು ವಿಚಾರಣಾ ನ್ಯಾಯಾಲಯ 5 ಪ್ರಕರಣದಲ್ಲಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಿತು. 2011ರ ಫೆಬ್ರವರಿ 21ರಂದು ಮುಂಬೈ ಹೈಕೋರ್ಟ್ ಆ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿಯಿತು. ಈ ತೀರ್ಪನ್ನು ಭಾರತದ ಸರ್ವೋಚ್ಚ ನ್ಯಾಯಾಲಯ 2012ರ ಆಗಸ್ಟ್ 29ರಂದು ಪುರಸ್ಕರಿಸಿತು. ಕಡೆಗೆ 2012ರ ನವೆಂಬರ್ 21ರಂದು ಬೆಳಿಗ್ಗೆ 7.30ಕ್ಕೆ ಸಾಯುವವರೆಗೆ ಆತನನ್ನು ಯೆರವಾಡಾ ಜೈಲಿನಲ್ಲಿ ನೇಣಿಗೆ ಹಾಕಲಾಯಿತು. ನಂತರ ಅಲ್ಲಿಯೇ ಆತನನ್ನು ಹೂಳಲಾಯಿತು.

ಮುಂಬೈನ ಎಲ್ಲೆಲ್ಲಿ ನಡೆದಿತ್ತು ರಕ್ತಪಾತ
2008ರ ನವೆಂಬರ್ 26ರಂದು ಆರಂಭವಾದ ಭಯೋತ್ಪಾದಕ ದಾಳಿಯಲ್ಲಿ 9 ಉಗ್ರರು ಸೇರಿದಂತೆ 174 ಜನರು ಹತ್ಯೆಗೀಡಾದರೆ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮುಂಬೈನ ದಕ್ಷಿಣ ಭಾಗದಲ್ಲಿರುವ ಛತ್ರಪತಿ ಶಿವಾಜಿ ಟರ್ಮಿನಸ್, ದಿ ಓಬೇರಾಯ್ ಟ್ರೈಡೆಂಟ್, ದಿ ತಾಜ್ ಪ್ಯಾಲೇಸ್ ಅಂಡ್ ಟವರ್, ಲಿಯೊಪೋಲ್ಡ್ ಕೆಫೆ, ಕಮಾ ಆಸ್ಪತ್ರೆ, ದಿ ನಾರಿಮನ್ ಹೌಸ್, ದಿ ಮೆಟ್ರೋ ಸಿನೆಮಾ, ಸೇಂಟ್ ಕ್ಸೇವಿಯರ್ ಕಾಲೇಜು ಮುಂತಾದೆಡೆಗಳಲ್ಲಿ ಉಗ್ರರು ರಕ್ತದ ಹೊಳೆಯನ್ನೇ ಹರಿಸಿದ್ದರು. ನವೆಂಬರ್ 29ರಂದು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್ 'ಆಪರೇಷನ್ ಬ್ಲಾಕ್ ಟೋರ್ನಡೋ' ನಡೆಸಿ ಉಗ್ರರನ್ನು ತಾಜ್ ಹೋಟೆಲಿನಲ್ಲಿ ಹತ್ಯೆಗೈದಿದ್ದರು.

ಬರಿಗೈಯಿಂದಲೇ ಅಜ್ಮಲ್ ನನ್ನು ಹಿಡಿದ ತುಕಾರಾಂ
ಉಗ್ರರು ನಡೆಸಿದ ದಾಳಿಯಲ್ಲಿ ನಾಗರಿಕರು ಸೇರಿದಂತೆ, 15 ಪೊಲೀಸರು, ಇಬ್ಬರು ಎನ್ಎಸ್ಜಿ ಕಮಾಂಡೋಗಳು ಹುತಾತ್ಮರಾಗಿದ್ದರು. ಅವರಲ್ಲಿ ಪ್ರಮುಖರು ತನ್ನ ದೇಹದೊಳಗೆ 23 ಗುಂಡುಗಳು ಹೊಕ್ಕಿದ್ದರೂ ಬರಿಗೈಯಿಂದಲೇ ಅಜ್ಮಲ್ ಕಸಬ್ ನನ್ನು ಹಿಡಿದ ತುಕಾರಾಂ ಓಂಬ್ಳೆ, ಮುಂಬೈ ಉಗ್ರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಜಂಟಿ ಪೊಲೀಸ್ ಕಮಿಷನರ್ ಹೇಮಂತ್ ಕರ್ಕರೆ, ಹೆಚ್ಚುವರಿ ಆಯುಕ್ತ ಅಶೋಕ್ ಕಮಟೆ, ಎನ್ಕೌಂಟರ್ ಸ್ಪೆಷಲಿಸ್ಟ್ ಹಿರಿಯ ಇನ್ಸ್ಪೆಕ್ಟರ್ ವಿಜಯ್ ಸಲಸ್ಕರ್, ಹಿರಿಯ ಇನ್ಸ್ಪೆಕ್ಟರ್ ಶಶಾಂಕ್ ಶಿಂಧೆ, ಎನ್ಎಸ್ಜಿ ಕಮಾಂಡೋ (ಬೆಂಗಳೂರಿನಲ್ಲಿ ಓದಿದ್ದು) ಮೇಜರ್ ಸಂದೀಪ್ ಉನ್ನಿಕೃಷ್ಣನ್, ಎನ್ಎಸ್ಜಿ ಕಮಾಂಡೋ ಹವಾಲ್ದಾರ್ ಗಜೇಂದ್ರ ಸಿಂಗ್. ಉಗ್ರರ ದಾಳಿಯಲ್ಲಿ ಮೂವರು ರೈಲ್ವೆ ಅಧಿಕಾರಿಗಳು ಕೂಡ ಹತ್ಯೆಯಾಗಿದ್ದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications