ತಬ್ಲಿಘಿ ಜಮಾತ್ ಉಲ್ಲೇಖಿಸಿದ್ದ ಎಂಬಿಬಿಎಸ್ ಪುಸ್ತಕ ಹಿಂಪಡೆದ ಸರ್ಕಾರ
ಮುಂಬೈ, ಮಾರ್ಚ್ 19: ದೇಶದಲ್ಲಿ ಕೊರೊನಾ ಸೋಂಕಿನ ಸ್ಫೋಟಕ್ಕೆ ಸಂಬಂಧಿಸಿದಂತೆ, ನವದೆಹಲಿಯಲ್ಲಿನ ತಬ್ಲಿಘಿ ಜಮಾತ್ ಸಭೆಯನ್ನು ಉಲ್ಲೇಖಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾದ ಕಾರಣ ಮಹಾರಾಷ್ಟ್ರದಲ್ಲಿ ಎಂಬಿಬಿಎಸ್ 2ನೇ ವರ್ಷಕ್ಕೆ ಸಂಬಂಧಿಸಿದ ಉಲ್ಲೇಖ ಪುಸ್ತಕವನ್ನು ಹಿಂಪಡೆದಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
"ಎಸೆಂಷಿಯಲ್ಸ್ ಆಫ್ ಮೆಡಿಕಲ್ ಮೈಕ್ರೊಬಯಾಲಜಿ" ಎಂಬ ಉಲ್ಲೇಖ ಪುಸ್ತಕದ ಮೂರನೇ ಆವೃತ್ತಿಯನ್ನು ಹೊರತರಲಾಗಿದ್ದು, ಅದರಲ್ಲಿ ತಬ್ಲಿಘಿ ಜಮಾತ್ ಸಭೆಯ ಉಲ್ಲೇಖ ಮಾಡಲಾಗಿತ್ತು. ಈ ಪುಸ್ತಕದ ಕುರಿತು ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಕ್ಷೇಪ ವ್ಯಕ್ತಪಡಿಸಿತ್ತು. ತಬ್ಲಿಘಿ ಜಮಾತ್ ಸಭೆ ಕಾರಣದಿಂದಾಗಿ ಕೊರೊನಾ ಸೋಂಕು ಹರಡಿತು ಎಂಬುದನ್ನು ಸಾಂಕ್ರಾಮಿಕ ರೋಗಶಾಸ್ತ್ರದ ಯಾವುದೇ ಅಧ್ಯಯನ ಸಾಬೀತುಗೊಳಿಸಿಲ್ಲ ಎಂದು ಹೇಳಿತ್ತು.
ಈ ಆಕ್ಷೇಪ ಕೇಳಿಬಂದ ನಂತರ ಈ ಪುಸ್ತಕದ ಲೇಖಕರಾದ ಡಾ. ಅಪೂರ್ವ ಶಾಸ್ತ್ರಿ, ಡಾ. ಸಂಧ್ಯಾ ಭಟ್ ಕ್ಷಮೆ ಯಾಚಿಸಿದ್ದಾರೆ. ಹೊಸ ಆವೃತ್ತಿಯಲ್ಲಿ ಬದಲಾವಣೆಗಳನ್ನು ಮಾಡುವುದಾಗಿ ತಿಳಿಸಿದ್ದಾರೆ. ಈ ಪುಸ್ತಕವನ್ನು ಹಿಂಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಮಾರ್ಚ್ನಲ್ಲಿ ದೆಹಲಿಯ ನಿಜಾಮುದ್ದಿನ್ ಮಾರ್ಕಜ್ ಎಂಬಲ್ಲಿ ತಬ್ಲಿಘಿ ಜಮಾತ್ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಹಲವರಿಗೆ ಕೊರೊನಾ ಸೋಂಕು ಇರುವುದು ಆನಂತರ ದೃಢಪಟ್ಟಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಹಲವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗಿತ್ತು. ಆನಂತರ, ಈ ಕುರಿತು ಯಾವುದೇ ಸಾಕ್ಷ್ಯಾಧಾರಗಳು ದೊರೆಯದ ಕಾರಣ ಈ ಪ್ರಕರಣಗಳನ್ನು ಕೈಬಿಡಲಾಗಿತ್ತು.












Click it and Unblock the Notifications