ನಾಂದೇಡ್ ಗುರುದ್ವಾರ ಗಲಭೆ; 17 ಮಂದಿ ವಶ, 400 ಜನರ ವಿರುದ್ಧ ಕೇಸ್
ಮುಂಬೈ, ಮಾರ್ಚ್ 30: ಮಹಾರಾಷ್ಟ್ರದ ನಾಂದೇಡ್ನಲ್ಲಿರುವ ಗುರುದ್ವಾರದಲ್ಲಿ ಸೋಮವಾರ ನಡೆದ ಗಲಭೆಗೆ ಸಂಬಂಧಿಸಿದಂತೆ 17 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, 400 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ನಾಂದೇಡ್ ಗುರುದ್ವಾರದಲ್ಲಿ ಹೋಲಾ ಮೊಹೊಲ್ಲಾಗೆ ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ. ಗುರುದ್ವಾರದೊಳಗೆ ಆಚರಣೆ ಮಾಡುವಂತೆ ಸಮಿತಿಗೆ ತಿಳಿಸಲಾಗಿತ್ತು. ಇದರ ನಡುವೆಯೂ ಕೆಲವು ಸಿಖ್ ಯುವಕರು ಗುರುದ್ವಾರದ ಗೇಟ್ ಮುರಿದು ಗಲಭೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸೋಮವಾರ ನಾಂದೇಡ್ ಗುರುದ್ವಾರದ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಕೆಲವು ಆರೋಪಿಗಳ ವಿರುದ್ಧ ಗಲಭೆ ಸೃಷ್ಟಿ ಮತ್ತು ಕೊಲೆ ಯತ್ನ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

ನಾಂದೇಡ್ನಲ್ಲಿ ಸೋಮವಾರ ನಡೆದಿದ್ದೇನು?
ಮಹಾರಾಷ್ಟ್ರದ ನಾಂದೇಡ್ನಲ್ಲಿ ಗುರುದ್ವಾರದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಮುರಿದು ಕೆಲವು ದುಷ್ಕರ್ಮಿಗಳು ಗಲಭೆ ಸೃಷ್ಟಿಸಿದ್ದರು. ಅಲ್ಲದೇ, ಭದ್ರತೆಗೆ ನಿಯೋಜಿಸಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಲಾಗಿತ್ತು. ನಾಲ್ವರು ಪೊಲೀಸರು ಗಾಯಗೊಂಡಿದ್ದು, ಈ ಪೈಕಿ ತಂಬೋಲಿ ಎಂಬ ಪೊಲೀಸ್ ಸಿಬ್ಬಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇನ್ನು, ಹಿಂಸಾಚಾರದಲ್ಲಿ 6 ಪೊಲೀಸ್ ವಾಹನ ಸೇರಿದಂತೆ ಹಲವು ವಾಹನಗಳನ್ನು ಜಖಂಗೊಳಿಸಲಾಗಿದೆ.

ಗುರುದ್ವಾರ ಗಲಭೆ ಬಗ್ಗೆ ಪೊಲೀಸರ ಮಾಹಿತಿ
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹೋಲಾ ಮೊಹೊಲ್ಲಾ ಸಾರ್ವಜನಿಕ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಗುರುದ್ವಾರದ ವ್ಯಾಪ್ತಿಯಲ್ಲೇ ಆಚರಣೆ ನಡೆಸುವಂತೆ ಸಮಿತಿಗೆ ಸೂಚಿಸಲಾಗಿತ್ತು. ಸಂಜೆ 4 ಗಂಟೆ ವೇಳೆಗೆ ನಿಶಾಬ್ ಸಾಹಿಬ್ ಅನ್ನು ಗೇಟ್ ಬಳಿಗೆ ತರುತ್ತಿದ್ದಂತೆ 300ಕ್ಕೂ ಹೆಚ್ಚು ಜನರು ಜಮಾಯಿಸಿದರು. ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಬ್ಯಾರಿಕೇಡ್ ಮುರಿದು ಗುರುದ್ವಾರದೊಳಗೆ ನುಗ್ಗಲು ಮುಂದಾದರು. ಇದನ್ನು ತಡೆಯಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಯಿತು ಎಂದು ನಾಂದೇಡ್ ರೇಂಜ್ ಡಿಐಸಿ ನಿಸಾರ್ ತಂಬೋಲಿ ತಿಳಿಸಿದ್ದಾರೆ.

ಗಲಭೆ ಸೃಷ್ಟಿ ಹಿನ್ನೆಲೆ 400 ಜನರ ವಿರುದ್ಧ ಕೇಸ್
ಗುರುದ್ವಾರ ಗಲಭೆಗೆ ಸಂಬಂಧಿಸಿದಂತೆ 400 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307ರ ಕೊಲೆಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರ ಜೊತೆಗೆ ಸೆಕ್ಷನ್ 324, ಸೆಕ್ಷನ್ 188 ಮತ್ತು ಸೆಕ್ಷನ್ 269ರ ಅಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಗಲಭೆಯಲ್ಲಿ ನೇರವಾಗಿ ಭಾಗಿಯಾದ 17 ಜನರನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ.

ಏನಿದು ಹೋಲಾ ಮೊಹೊಲ್ಲಾ?
ಹೋಳಿ ಹಬ್ಬದ ಮರು ದಿನ ಸಿಖ್ಖರು ಆಚರಿಸುವ ಸಾಂಪ್ರದಾಯಿಕ ಆಚರಣೆಯೇ ಈ ಹೋಲಾ ಮೊಹೊಲ್ಲಾ. ಹೋಳಿ ಹಬ್ಬವು ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಒಂದು ಹಬ್ಬವಾಗಿದೆ. ಅದೇ ರೀತಿ ಹೋಲಾ ಮೊಹೊಲ್ಲಾ ಎಂಬುದು ಸಿಖ್ಖರು ತಮ್ಮ ಸಮರ ಕೌಶಲ್ಯವನ್ನು ಪ್ರದರ್ಶಿಸುವ ಸಂದರ್ಭವಾಗಿದೆ. ನಾಂದೇಡ್ ಗುರುದ್ವಾರವು ಸಿಖ್ಖರ ಪ್ರಮುಖ ಯಾತ್ರಾ ಕೇಂದ್ರವಾಗಿದೆ. 10ನೇ ಮತ್ತು ಕೊನೆಯ ಸಿಖ್ ಗುರುಗಳಾದ ಗುರು ಗೋಬಿಂದ್ ಸಿಂಗ್ (1666-1708), ಗುರು ಗ್ರಂಥ ಸಾಹೀಬ್ ಎಂಬ ಪವಿತ್ರ ಗ್ರಂಥವನ್ನು ಸಿಖ್ ಧರ್ಮದ ಶಾಶ್ವತ ಗುರು ಎಂದು ಹೇಳಿದ್ದರು. ಅವರ ಜೀವನದ ಕೊನೆಯ 14 ತಿಂಗಳುಗಳನ್ನು ಇಲ್ಲಿಯೇ ಕಳೆದಿದ್ದರು ಎಂದು ನಂಬಲಾಗಿದೆ.












Click it and Unblock the Notifications