ಸರ್ಕಾರ ರಚಿಸಲು ಶಿವಸೇನಾಗೆ ಆಹ್ವಾನ ನೀಡಿದ ಮಹಾ ರಾಜ್ಯಪಾಲ
ಮುಂಬೈ, ನವೆಂಬರ್ 10:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸರ್ಕಸ್ ಮುಂದುವರೆದಿದೆ. ಸರ್ಕಾರ ರಚನೆ ಕಸರತ್ತಿನಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಹೊರ ನಡೆದ ಬಳಿಕ ಶಿವಸೇನಾಕ್ಕೆ ಅಧಿಕಾರ ಸ್ಥಾಪನೆಗೆ ರಾಜ್ಯಪಾಲರು ಅವಕಾಶ ನೀಡಿದ್ದಾರೆ.
"ಸರ್ಕಾರ ರಚನೆಗೆ ಅಗತ್ಯವಾದಷ್ಟು ಸಂಖ್ಯಾಬಲ ನಮಗಿಲ್ಲ. ಹಾಗಾಗಿ ನಾವು ಸರ್ಕಾರ ರಚಿಸುವ ಪ್ರಯತ್ನ ಮಾಡುವುದಿಲ್ಲ" ಎಂದು ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ. ಸರ್ಕಾರ ರಚನೆ ಬಗ್ಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಹಂಗಾಮಿ ಸಿಎಂ ದೇವೇಂದ್ರ ಫಡ್ನವಿಸ್ ಈ ವಿಷಯ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಚಾನ್ಸ್ ಕೊಡಿ ಪ್ಲೀಸ್
ಕಾಂಗ್ರೆಸ್ ಮತ್ತು ಎನ್ಸಿಪಿ ಬೆಂಬಲದೊಂದಿಗೆ ಶಿವಸೇನಾ ಸರ್ಕಾರ ರಚಿಸಲು ಮುಂದಾಗಿರುವ ಪ್ರಯತ್ನ ನಡೆಸಿದೆ, ಶಿವಸೇನಾಗೆ ಒಳ್ಳೆಯದಾಗಲಿ ಎಂದು ಚಂದ್ರಕಾಂತ್ ಪಾಟೀಲ್ ಶುಭಹಾರೈಸಿದ ಕೆಲ ಹೊತ್ತಿನಲ್ಲೇ ರಾಜಭವನದಿಂದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಸರ್ಕಾರ ರಚನೆಗೆ ಆಹ್ವಾನ ಬಂದಿದೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತಿನಿಂದ ಹಿಂದೆ ಸರಿದ ಬಿಜೆಪಿ
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 228 ಕ್ಷೇತ್ರಗಳ ಪೈಕಿ 105 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. 56 ಸ್ಥಾನಗಳಲ್ಲಿ ಶಿವಸೇನೆ ಜಯ ದಾಖಲಿಸಿತ್ತು. ಉಳಿದಂತೆ, ಎನ್ ಸಿಪಿ 54 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೂ ಮೊದಲು ಮೈತ್ರಿ ಮಾಡಿಕೊಂಡಿದ್ದ ಉಭಯ ಪಕ್ಷಗಳು, ಫಲಿತಾಂಶ ಹೊರ ಬೀಳುತ್ತಿದ್ದಂತೆ ಗದ್ದುಗೆ ಹಿಡಿಯಲು ಗುದ್ದಾಡುತ್ತಿವೆ.
ಕಾಂಗ್ರೆಸ್- ಎನ್ಸಿಪಿ ಜೊತೆ ಶಿವಸೇನಾ ಸರ್ಕಾರ?
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸರ್ಕಸ್ ಮುಂದುವರೆದಿದೆ. ಸರ್ಕಾರ ರಚನೆ ಕಸರತ್ತಿನಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಹೊರ ನಡೆದ ಬಳಿಕ ಶಿವಸೇನಾಕ್ಕೆ ಅಧಿಕಾರ ಸ್ಥಾಪನೆಗೆ ರಾಜ್ಯಪಾಲರು ಅವಕಾಶ ನೀಡಿದ್ದಾರೆ.
ಕಾಂಗ್ರೆಸ್- ಎನ್ಸಿಪಿ ಜೊತೆ ಸೇರಿಕೊಂಡು ಶಿವಸೇನಾ ಸರ್ಕಾರ ರಚನೆಗೆ ಮುಂದಾಗಿದ್ದು, ಅಗತ್ಯ ಸಂಖ್ಯಾಬಲವೂ ಸಿಗಲಿದೆ. ಆದರೆ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಬಿಜೆಪಿ ಮುಂದಿಟ್ಟ ಬೇಡಿಕೆಗಳನ್ನು ಹೊಸ ಮೈತ್ರಿಕೂಟದ ಮುಂದೆಯೂ ಶಿವಸೇನಾ ಇಡಲಿದೆ. ಪ್ರಮುಖವಾಗಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿಯಲಿದೆ. ಒಂದು ವೇಳೆ ಸರ್ಕಾರ ರಚನೆಯಾದರೂ ಅಧಿಕಾರ ಅವಧಿ ಹೆಚ್ಚು ಕಾಲ ಇರುವುದಿಲ್ಲ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಸೋಮವಾರದಂದು ಅಂತಿಮ ನಿರ್ಧಾರ
ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರದಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಾಧ್ಯತೆಗಳ ಬಗ್ಗೆ ಚರ್ಚಿಸಲಿದ್ದಾರೆ. ಇದರ ಜೊತೆಗೆ ಶಿವಸೇನಾ ಮುಖಂಡರಾದ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಅವರ ಜೊತೆ ಎನ್ಸಿಪಿ ಮುಖಂಡ ಶರದ್ ಪವಾರ್ ಅವರು ನಾಳೆ ಮಹತ್ವ ಸಭೆ ನಡೆಸಲಿದ್ದಾರೆ. ಇದಲ್ಲದೆ, ಶಿವಸೇನೆ ಸರ್ಕಾರ ಸ್ಥಾಪನೆ ಮಾಡಲು ಅಗತ್ಯ ಸಂಖ್ಯಾಬಲವಿದೆ ಎಂದು ರಾಜ್ಯಪಾಲರಿಗೆ ತಿಳಿಸಲು ಸೋಮವಾರ ಸಂಜೆ 7:30ರ ಗಡುವು ನೀಡಲಾಗಿದೆ.
ಶಿವಸೇನಾದಿಂದ ಮೈತ್ರಿ ಆಹ್ವಾನ ಬಂದಿಲ್ಲ
ಎನ್ಸಿಪಿ ನಾಯಕ ನವಾಬ್ ಮಲೀಕ್ ಅವರು ಎಎನ್ಐ ಅವರು, ಶಿವಸೇನಾಕ್ಕೆ ಸರ್ಕಾರ ರಚನೆ ಅವಕಾಶ ಸಿಕ್ಕರೆ, ನಾವು ನಮ್ಮ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇವೆ. ಶಿವಸೇನಾದಿಂದ ಇಲ್ಲಿ ತನಕ ಮೈತ್ರಿ ಬಗ್ಗೆ ಮಾತುಕತೆ ನಡೆದಿಲ್ಲ, ಸರ್ಕಾರ ರಚನೆಗೆ ಬೆಂಬಲ ಕೋರಿ ಅಧಿಕೃತವಾಗಿ ಯಾವುದೇ ಮನವಿ, ಆಹ್ವಾನ ಸಿಕ್ಕಿಲ್ಲ. ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹಾಗೂ ಎನ್ಸಿಪಿ ಜಂಟಿಯಾಗಿ ತೆಗೆದುಕೊಳ್ಳಲಿದೆ. ಶರದ್ ಪವಾರ್ ಈ ಬಗ್ಗೆ ಸ್ಪಷ್ಟವಾಗಿ ಈಗಾಗಲೇ ಹೇಳಿದ್ದಾರೆ ಎಂದರು.
ಎನ್ಡಿಎಯಿಂದ ಶಿವಸೇನಾ ಹೊರಬರಲಿ
ಶಿವಸೇನಾದಿಂದ ಸರ್ಕಾರಕ್ಕೆ ಬೆಂಬಲ ಕೋರಿ ಆಹ್ವಾನ ಬಂದರೆ ಎನ್ಸಿಪಿ ಒಪ್ಪಿಕೊಳ್ಳಲು ಒಂದೇ ವಿಷಯ ಅಡ್ಡಿಯಾಗಲಿದೆ. ಎನ್ಸಿಪಿಯ ಬೆಂಬಲ ಬೇಕಾದರೆ, ಎನ್ಡಿಎಯಿಂದ ಶಿವಸೇನಾ ಸಂಪೂರ್ಣವಾಗಿ ಹೊರ ಬರಬೇಕಾಗುತ್ತದೆ. ಮೋದಿ ಸರ್ಕಾರ್ 2.0ನಲ್ಲಿರುವ ಸಚಿವರು ಕೇಂದ್ರ ಕ್ಯಾಬಿನೆಟ್ ಗೆ ರಾಜೀನಾಮೆ ನೀಡಬೇಕಾಗುತ್ತದೆ ಎಂಬುದು ಮುಖ್ಯ ಷರತ್ತು ಎಂದು ನವಾಬ್ ಹೇಳಿದ್ದಾರೆ.