ಮಹಾರಾಷ್ಟ್ರ ಉಪ ಚುನಾವಣೆಯಲ್ಲಿ ಕೈಕೊಟ್ಟ ಇವಿಎಂ
ಮುಂಬೈ, ಮೇ 28: ಮಹಾರಾಷ್ಟ್ರದ ಪಲ್ಘರ್ ಹಾಗೂ ಭಾಂಡಾರ-ಗೋಂಡಿಯಾ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಇಂದು ನಡೆದಿರುವ ಮತದಾನಕ್ಕೆ ವಿಘ್ನ ಎದುರಾಗಿದೆ. 25ಕ್ಕೂ ಅಧಿಕ ಬೂತ್ ಗಳಲ್ಲಿ ಇವಿಎಂ ಕೈಕೊಟ್ಟಿದ್ದು, ಮತದಾನ ಸ್ಥಗಿತಗೊಳಿಸಲಾಗಿದೆ.
ಸರಿ ಸುಮಾರು 450ಕ್ಕೂ ಅಧಿಕ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಭಾರಿಪ್ ಬಹುಜನ್ ಮಹಾಸಂಘದ ನಾಯಕ, ಮಾಜಿ ಸಂಸದ ಪ್ರಕಾಶ್ ಅಂಬೇಡ್ಕರ್ ಅವರು ಆರೋಪಿಸಿದ್ದಾರೆ.
ಇದಲ್ಲದೆ, ಪಲ್ಘರ್ ಕ್ಷೇತ್ರಕ್ಕೆ ಸೇರಿದ ಮಾಲಿ ಅಲಿ, ಮಾವಂದಾ, ನವಲೆ ಹಾಗೂ ನಂದನವನ್ ಗ್ರಾಮಗಳಿಗೆ ಸೇರಿದ 15 ಸಾವಿರಕ್ಕೂ ಅಧಿಕ ಮತದಾರರು, ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಕಾರಣ ನೀಡಿ, ಮತದಾನ ಬಹಿಷ್ಕರಿಸಿದ್ದಾರೆ.

ಭಂಡಾರಾ-ಗೊಂಡಿಯಾದಲ್ಲಿ ಬಿಜೆಪಿ ಹಾಗೂ ಎನ್ ಸಿಪಿ ನಡುವೆ ಪೈಪೋಟಿ ಇದೆ. ಬಿಜೆಪಿ ಸಂಸದ, ಒಬಿಸಿ ಕುಣಬಿ ಸಮುದಾಯದ ನಾಯಕ ನಾನಾ ಪಟೋಲೆ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಮೇ 31ರಂದು ಫಲಿತಾಂಶ ಹೊರಬರಲಿದೆ.
ಪಲ್ಘರ್ ನಲ್ಲಿ ಬಿಜೆಪಿ ಸಂಸದ ಚಿಂತಮನ್ ವನಗಾ ಅವರ ನಿಧನದಿಂದ ಉಪಚುನಾವಣೆ ನಡೆದಿದ್ದು, ಬಿಜೆಪಿಯಿಂದ ಮಾಜಿ ಸಚಿವ ರಾಜೇಂದ್ರ ಗಾವಿತ್, ಬಹುಜನ್ ವಿಕಾಸ್ ಆಗಾಡಿಯಿಂದ ಮಾಜಿ ಸಂಸದ ಬಲಿರಾಮ್ ಜಾಧವ್ ಕಣದಲ್ಲಿದ್ದರೆ, ಶಿವಸೇನೆ ಅನುಕಂಪದ ಮತ ಗಳಿಸಲು ಚಿಂತಮನ್ ಅವರ ಪುತ್ರ ಶ್ರೀನಿವಾಸ್ ವನಗಾ ಅವರನ್ನು ಕಣಕ್ಕಿಳಿಸಿದೆ.











Click it and Unblock the Notifications